ಅಮರನಾಥ ಯಾತ್ರೆ ಆರಂಭ; ಮೊದಲ ತಂಡಕ್ಕೆ ಲೇ. ಗವರ್ನರ್ ಚಾಲನೆ
ಶ್ರೀನಗರ, ಜೂ.29: ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಮ್ಮು ನಗರದ ಭಗವತಿ ನಗರದ ಬೇಸ್ ಕ್ಯಾಂಪ್ ಶಿಬಿರದಿಂದ ಕಾಶ್ಮೀರದ ಪಹಲ್ಗಾಮ್ ಮತ್ತು ಬಲ್ಟಾಲ್ ಬೇಸ್ ಕ್ಯಾಂಪ್ಗಳಿಗೆ ತಮ್ಮ ಮುಂದಿನ ಪ್ರಯಾಣಕ್ಕಾಗಿ ವಾರ್ಷಿಕ ಅಮರನಾಥ ಯಾತ್ರೆಗಾಗಿ 4,890 ಯಾತ್ರಿಕರ ಮೊದಲ ಬ್ಯಾಚ್ಗೆ ಬುಧವಾರ ಚಾಲನೆ ನೀಡಿದರು.
ಗುಹಾ ದೇಗುಲ ಅಮರನಾಥಕ್ಕೆ 43 ದಿನಗಳ ಯಾತ್ರೆ ಗುರುವಾರ ಕಾಶ್ಮೀರದ ಎರಡು ಬೇಸ್ ಕ್ಯಾಂಪ್ಗಳಿಂದ ಪ್ರಾರಂಭವಾಗಲಿದ್ದು, ರಕ್ಷಾ ಬಂಧನದ ಸಂದರ್ಭದ ಅಂದರೆ ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಅಂತರದ ನಂತರ ವಾರ್ಷಿಕ ಅಮರನಾಥ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ.
'ಬಾಮ್ ಬಾಮ್ ಭೋಲೆ' ಮತ್ತು 'ಜೈ ಬರ್ಫಾನಿ ಬಾಬಾ ಕಿ' ಎಂಬ ಘೋಷಣೆಗಳ ನಡುವೆ ಯಾತ್ರಾರ್ಥಿಗಳು ಬಿಗಿ ಭದ್ರತೆಯ ನಡುವೆ ವಾಹನಗಳ ಬೆಂಗಾವಲು ಪಡೆಯಲ್ಲಿ ಇಲ್ಲಿನ ಭಗವತಿ ನಗರದ ಬೇಸ್ ಕ್ಯಾಂಪ್ನಿಂದ ಹೊರಟರು.
ಜಮ್ಮು ಮೇಯರ್ ಚಂದರ್ ಮೋಹನ್ ಗುಪ್ತಾ, ಬಿಜೆಪಿ ನಾಯಕ ದೇವೆಂದರ್ ರಾಣಾ ಮತ್ತು ಮುಖ್ಯ ಕಾರ್ಯದರ್ಶಿ ಡಾ ಅರುಣ್ ಕುಮಾರ್ ಮೆಹ್ತಾ ಸೇರಿದಂತೆ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು, ಸಿನ್ಹಾ ಅವರು ಕಾಶ್ಮೀರದ ಅವಳಿ ಬೇಸ್ ಕ್ಯಾಂಪ್ಗಳಿಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಬಸ್ಗಳು ಮತ್ತು ಇತರ ಬೆಂಗಾವಲು ವಾಹನಗಳಿಗೆ ಚಾಲನಾ ಧ್ವಜವನ್ನು ಹಾರಿಸಿದರು.

ಉಧಮ್ಪುರ ಮತ್ತು ರಾಂಬನ್ ಜಿಲ್ಲೆಗಳ ಮೂಲಕ ಯಾತ್ರೆ
ವೇದ ಮಂತ್ರಗಳ ಪಠಣಗಳ ನಡುವೆ ಯಾತ್ರಾರ್ಥಿಗಳ ಮೊದಲ ತಂಡವು ಗುಹಾ ದೇಗುಲ ಅಮರನಾಥಕ್ಕೆ ತೆರಳಿತು. ಈ ವೇಳೆ ಲೆಫ್ಟಿನೆಂಟ್ ಗವರ್ನರ್ ಯಾತ್ರಾರ್ಥಿಗಳಿಗೆ ಶಾಂತಿ, ಸಮೃದ್ಧಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು. ವಾರ್ಷಿಕ ಯಾತ್ರೆಯ ಆರಂಭದ ಭಾಗವಾಗಿ ಮೊದಲ ತಂಡವು 176 ಲಘು ಮತ್ತು ಭಾರೀ ವಾಹನಗಳಲ್ಲಿ ಬೆಳಿಗ್ಗೆ 4 ಗಂಟೆಗೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸಿಗಳು ಮತ್ತು ಎಸ್ಎಸ್ಪಿಗಳ ನೇತೃತ್ವದ ಉನ್ನತ ಅಧಿಕಾರಿಗಳ ಜಿಲ್ಲಾಡಳಿತದ ಭವ್ಯ ಬಿಳ್ಕೊಡುಗೆ ನಡುವೆ ಯಾತ್ರೆಯು ಉಧಮ್ಪುರ ಮತ್ತು ರಾಂಬನ್ ಜಿಲ್ಲೆಗಳ ಮೂಲಕ ಸಾಗಿತು.
ಜಮ್ಮುವಿನಿಂದ ಯಾತ್ರೆ ಆರಂಭವಾಗಿದೆ. ಲೇ. ಗವರ್ನರ್ ಚಾಲನೆ ತೋರಿದ ನಂತರ ಬೆಂಗಾವಲು ಪಡೆ ಇಲ್ಲಿಂದ ಕಾಶ್ಮೀರಕ್ಕೆ ತೆರಳಿದೆ. ಯಾತ್ರಾರ್ಥಿಗಳಿಗೆ ಸೌಕರ್ಯ ಒದಗಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಜಮ್ಮು ಮೇಯರ್ ಚಂದರ್ ಮೋಹನ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು.

ಗುಹಾ ದೇಗುಲಕ್ಕೆ ಬರುವಂತೆ ಒತ್ತಾಯಿಸುತ್ತೇವೆ
ಜಮ್ಮುವಿನಲ್ಲಿ, ರಾಜಸ್ಥಾನದ ಬಾರ್ಮರ್ನ ಭಕ್ತ ದಲೀಪ್ ಸಿಂಗ್, ನನಗೆ ಯಾವುದೇ ಭಯವಿಲ್ಲ, ಬೆದರಿಕೆ ಇಲ್ಲ, ಗುಹೆಯ ದೇಗುಲವನ್ನು ತ್ವರಿತವಾಗಿ ತಲುಪಲು ಮತ್ತು ಶಿವನ ದರ್ಶನವನ್ನು ಮಾಡಲು ಮಿತಿಯಿಲ್ಲದ ಉತ್ಸಾಹವಿದೆ ಎಂದು ಹೇಳಿದರು. ಕಾನ್ಪುರದ 40ಕ್ಕೂ ಹೆಚ್ಚು ಸದಸ್ಯರ ಯಾತ್ರಿಕರ ಗುಂಪಿನ ಭಾಗವಾಗಿರುವ ಆಶಾ ದೇವಿ, ದೇಶದಾದ್ಯಂತದ ಜನರು ಗುಹಾ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಬಹು ಹಂತದ ಭದ್ರತಾ ವ್ಯವಸ್ಥೆ ನಿರ್ಮಾಣ
ಜಮ್ಮು ನಗರದಲ್ಲಿ 5,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಬೇಸ್ ಕ್ಯಾಂಪ್ಗಳು, ವಸತಿ, ನೋಂದಣಿ ಮತ್ತು ಟೋಕನ್ ಕೇಂದ್ರಗಳಲ್ಲಿ ಮತ್ತು ಸುತ್ತಮುತ್ತ ಬಹು ಹಂತದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರೆಯು ಜೂನ್ 30 ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್ನ ಸಾಂಪ್ರದಾಯಿಕ 48 ಕಿ. ಮೀ. ನುನ್ವಾನ್ ಮಾರ್ಗದಿಂದ ಮತ್ತು ಮಧ್ಯ ಕಾಶ್ಮೀರದ ಗಂದರ್ಬಾಲ್ನಲ್ಲಿ 14 ಕಿ. ಮೀ. ಬಾಲ್ಟಾಲ್ ಮಾರ್ಗದಿಂದ ಪ್ರಾರಂಭವಾಗುತ್ತದೆ.

ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಪರಿಚಯ
ಅಧಿಕಾರಿಗಳ ಪ್ರಕಾರ ವಾರ್ಷಿಕ ಅಮರನಾಥ ಯಾತ್ರೆಗೆ ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಈ ವರ್ಷ ಯಾತ್ರಿಕರ ಚಲನವಲನ ಮತ್ತು ಯೋಗಕ್ಷೇಮವನ್ನು ಪತ್ತೆಹಚ್ಚಲು ಸರ್ಕಾರವು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಅನ್ನು ಪರಿಚಯಿಸಿದೆ ಎಂದು ಹೇಳಿದ್ದಾರೆ. ಜಮ್ಮು ನಗರದಲ್ಲಿ ಬೇಸ್ ಕ್ಯಾಂಪ್ಗಳು ಮತ್ತು ವಸತಿ ಸ್ಥಳಗಳಿಗೆ ಸಾಕಷ್ಟು ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಭದ್ರತೆಯು ದೊಡ್ಡ ಸವಾಲಾಗಿದೆ ಎಂದು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ಹೇಳಿದ್ದಾರೆ.












Click it and Unblock the Notifications