RCB: ಫಿಟ್ ಆಗದ ರಜತ್ ಪಾಟಿದಾರ್! ಆರ್ಸಿಬಿ ತಂಡಕ್ಕೆ ಹೊಸ ನಾಯಕ
ಐಪಿಎಲ್ 2025ರ ಪಂದ್ಯಾವಳಿಯ ಮರು ಆರಂಭಕ್ಕೆ ದಿನಗಣನೆ ಶುರುವಾಗಿದೆ. ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮೇ 8ರಂದು ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಮೇ 17ರಿಂದ ಮತ್ತೆ ಪಂದ್ಯಾವಳಿ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಪಂದ್ಯಗಳ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿದ ಬಳಿಕ ಕೊನೆಯಲ್ಲಿ ನಡೆಯಬೇಕಿದ್ದು ಆರ್ ಸಿಬಿ ಕೆಕೆಆರ್ ನಡುವಿನ ಪಂದ್ಯ ಮೊದಲೇ ನಡೆಯಲಿದೆ. ಪಂದ್ಯಾವಳಿ ಮುಂದೂಡಿದ್ದರಿಂದ ಹಲವು ವಿದೇಶಿ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಡಬೇಕಿರುವ ಕಾರಣ ಐಪಿಎಲ್ಗೆ ಅಲಭ್ಯರಾಗುವ ಸಾಧ್ಯತೆ ಇದೆ. ಆರ್ ಸಿಬಿ ತಂಡ ಪ್ರಮುಖ ಬೌಲರ್ ಜೋಶ್ ಹೇಜಲ್ವುಡ್ ಭಾರತಕ್ಕೆ ಬರುವುದು ಅನುಮಾನವಾಗಿದ್ದು ಅವರ ಅನುಪಸ್ಥಿತಿಯಲ್ಲಿ ಆರ್ ಸಿಬಿ ಮುಂದಿನ ಪಂದ್ಯಗಳನ್ನು ಆಡಲಿದೆ.

ಗಾಯಗೊಂಡಿರುವ ನಾಯಕ ರಜತ್
ಸಿಎಸ್ಕೆ ವಿರುದ್ಧದ ಪಂದ್ಯದ ವೇಳೆ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಗಾಯಗೊಂಡಿದ್ದರು. ಮೇ 10ರಂದು ನಡೆಯಬೇಕಿದ್ದ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದಿಲ್ಲ ಎಂದು ಖಚಿತವಾಗಿತ್ತು. ಪಂದ್ಯಾವಳಿಯನ್ನು ಒಂದು ವಾರ ಮುಂದೂಡಿರುವ ಕಾರಣ ಅವರು ಫಿಟ್ ಆಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಸದ್ಯದ ಮಾಹಿತಿ ಪ್ರಕಾರ ಪಾಟಿದಾರ್ ಫಿಟ್ ಆಗಲು ನಿರೀಕ್ಷೆಗಿಂತ ಹೆಚ್ಚಿನ ಸಮಯ ಬೇಕಾಗಿರುವ ಕಾರಣ ಲೀಗ್ ಹಂತದ ಪಂದ್ಯಗಳಲ್ಲಿ ಅವರು ಆಡುವುದು ಅನುಮಾನ ಎನ್ನಲಾಗಿದೆ.
ಒಂದು ವೇಳೆ ರಜತ್ ಪಾಟಿದಾರ್ ಅಲಭ್ಯರಾದರೆ ಅವರ ಬದಲಾಗಿ ಜಿತೇಶ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಎಲ್ಎಸ್ಜಿ ವಿರುದ್ಧದ ಪಂದ್ಯಕ್ಕೆ ಜಿತೇಶ್ ಶರ್ಮಾ ಅವರನ್ನೇ ನಾಯಕರನ್ನಾಗಿ ಸೂಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಶನಿವಾರ ನಡೆಯಲಿರುವ ಪಂದ್ಯದಲ್ಲೂ ಜಿತೇಶ್ ಶರ್ಮಾ ನಾಯಕರಾಗುವ ಸಾಧ್ಯತೆ ಇದೆ.
ಜಿತೇಶ್ ಶರ್ಮಾ ಹೊರತಾಗಿಯೂ ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಕೂಡ ನಾಯಕತ್ವದ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಈವರೆಗೂ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದರೆ ತಂಡದ ಪ್ಲೇಆಫ್ ಸ್ಥಾನ ಖಚಿತವಾಗಲಿದೆ.
ದೇವದತ್ ಪಡಿಕ್ಕಲ್ ಈಗಾಗಲೇ ಮಂಡಿರಜ್ಜು ಗಾಯದಿಂದಾಗಿ ಹೊರಗುಳಿದಿದ್ದಾರೆ. ಹೆಚ್ಚುವರಿಯಾಗಿ, ಜೋಶ್ ಹ್ಯಾಜಲ್ವುಡ್, ಫಿಲ್ ಸಾಲ್ಟ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ರಂತಹ ವಿದೇಶಿ ಆಟಗಾರರ ಲಭ್ಯತೆ ಪ್ರಶ್ನೆ ಕಾಡುತ್ತಿದೆ.












Click it and Unblock the Notifications