Vaibhav Sooryavanshi: ಗಲಾಟೆ ಮಾಡಿಕೊಂಡ ವೈಭವ್ ಸೂರ್ಯವಂಶಿ ಬ್ಯಾನ್ ಆಗ್ತಾರಾ? ಐಸಿಸಿ ನಿಯಮಗಳು ಹೇಳೋದೇನು?
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಆಟದಿಂದ ಮಿಂಚಿದ್ದ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿಗೆ ಇದೀಗ ಕ್ರಿಕೆಟ್ನಿಂದ ಬ್ಯಾನ್ ಭೀತಿ ಎದುರಾಗಿದೆ. ಶ್ರೀಲಂಕಾ ಆಟಗಾರನ ಜೊತೆ ವೈಭವ್ ಗಲಾಟೆ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಅವರಿಗೆ ಈ ಭಯ ಶುರುವಾಗಿದೆ. ಹಾಗಾದ್ರೆ ಐಸಿಸಿ ನಿಯಮ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋನ ಸರಣಿಯ ಪಂದ್ಯ ಮುಗಿದ ಬಳಿಕ ಭಾರತೀಯ ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಶ್ರೀಲಂಕಾ ಆಟಗಾರರ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ಮತ್ತು ತಳ್ಳಾಟ ನಡೆದಿದೆ. ಕೇವಲ 15 ವರ್ಷದ ವೈಭವ್ ಅವರ ಈ ನಡವಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅವರು ಐಸಿಸಿ ನಿಯಮಗಳ ಪ್ರಕಾರ ನಿಷೇಧ ಎದುರಿಸಲಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಮೈದಾನದಲ್ಲಿ ನಡೆದಿದ್ದೇನು?
ಪಂದ್ಯದ ಸೂಪರ್ ಓವರ್ನಲ್ಲಿ ಭಾರತ ಎ ತಂಡಕ್ಕೆ ಗೆಲ್ಲಲು 17 ರನ್ಗಳ ಗುರಿಯಿತ್ತು. ಆದರೆ ಭಾರತ ಕೇವಲ 9 ರನ್ ಗಳಿಸಲಷ್ಟೇ ಶಕ್ತವಾಗಿ ಸರಣಿಯಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿತು. ಸೂಪರ್ ಓವರ್ನ ಕೊನೆಯ ಮೂರು ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಒಂದು ಬೌಂಡರಿ ಸೇರಿದಂತೆ 6 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಶ್ರೀಲಂಕಾ ತಂಡ ವಿಜಯೋತ್ಸವ ಆಚರಿಸಿದ ನಂತರ, ವೈಭವ್ ಸೂರ್ಯವಂಶಿ ಮತ್ತು ಸೂರ್ಯಾಂಶ್ ಶೆಡ್ಗೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಶ್ರೀಲಂಕಾದ ಬೌಲರ್ ಕಗುತಾಸ್ ಮತುಲನ್ ಅವರು ವೈಭವ್ ಅವರನ್ನು ಕೆಣಕುವಂತೆ 'ಇದು ಐಪಿಎಲ್ ಅಲ್ಲ' ಎಂದು ಕಾಮೆಂಟ್ ಮಾಡಿದರು ಎನ್ನಲಾಗಿದೆ.
ಇದರಿಂದ ಕೋಪಗೊಂಡ ವೈಭವ್ ಮತುಲನ್ ಅವರತ್ತ ಹೋಗಿ ವಾಗ್ವಾದಕ್ಕಿಳಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಶ್ರೀಲಂಕಾದ ವಿಶೇನ್ ಹಲಂಬಾಗೆ ಮಧ್ಯಪ್ರವೇಶಿಸಿದಾಗ ವೈಭವ್ ಅವರನ್ನು ತಳ್ಳಿದರು. ತಕ್ಷಣವೇ ಹಲಂಬಾಗೆ ಕೂಡ ಗಲಾಟೆ ಶುರು ಮಾಡಿದರು. ಆಗ ಹಿರಿಯ ಆಟಗಾರ ನಿರೋಷನ್ ಡಿಕ್ವೆಲ್ಲಾ ಮಧ್ಯಪ್ರವೇಶಿಸಿ ಜಗಳ ದೊಡ್ಡದಾಗದಂತೆ ತಡೆದರು. ನಂತರ ವೈಭವ್ ತೀವ್ರ ನಿರಾಸೆ ಮತ್ತು ಆಕ್ರೋಶದಿಂದ ಪೆವಿಲಿಯನ್ಗೆ ಮರಳಿದರು.
ಐಸಿಸಿ ನಿಯಮಗಳು ಹೇಳೋದೇನು?
ಯುವ ಬ್ಯಾಟರ್ ವೈಭವ್ ಅವರ ಈ ವರ್ತನೆಯು ಐಸಿಸಿ ನೀತಿ ಸಂಹಿತೆಯ ಕಲಂ 2.12ರ ಅಡಿಗೆ ಬರುತ್ತದೆ. ಈ ನಿಯಮವು ಅಂರಾರಾಷ್ಟ್ರೀಯ ಪಂದ್ಯದ ಅವಧಿಯಲ್ಲಿ ಯಾವುದೇ ಆಟಗಾರ, ಅಂಪೈರ್, ಮ್ಯಾಚ್ ರೆಫ್ರಿ ಅಥವಾ ಪಂದ್ಯದ ಸಿಬ್ಬಂದಿ ಮೇಲೆ ದೈಹಿಕವಾಗಿ ಕೈಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಇತರ ಆಟಗಾರರನ್ನು ತಳ್ಳುವುದು ಅಥವಾ ಮೈಮೇಲೆ ಬೀಳುವುದು ಈ ನಿಯಮದ ಉಲ್ಲಂಘನೆಯಾಗಿದೆ.
ಐಸಿಸಿ ಗಮನಿಸುವ ಪ್ರಮುಖ ನಾಲ್ಕು ಅಂಶಗಳು
* ಕೈಮಾಡುವುದು ಉದ್ದೇಶಪೂರ್ವಕವಾಗಿತ್ತೇ ಅಥವಾ ಅನಿವಾರ್ಯವಾಗಿತ್ತೇ?
* ಆಟಗಾರರು ಎಷ್ಟು ಬಲಪ್ರಯೋಗ ಮಾಡಿದ್ದಾರೆ?
* ಯಾರಿಗಾದರೂ ಗಾಯಗಳಾಗಿವೆಯೇ?
* ಘಟನೆಯಲ್ಲಿ ಭಾಗಿಯಾದವರ ಹಿನ್ನೆಲೆ ಮತ್ತು ಸಂದರ್ಭ ಏನು?
ವೈಭವ್ ಸೂರ್ಯವಂಶಿಗೆ ನಿಷೇಧದ ಭೀತಿ
ಸಾಮಾನ್ಯವಾಗಿ ಕಲಂ 2.12 ರ ಅಡಿಯ ಉಲ್ಲಂಘನೆಯನ್ನು 'ಲೆವೆಲ್ 1' ಅಪರಾಧ ಎಂದು ಪರಿಗಣಿಸಲಾಗುತ್ತದೆ. ಪಂದ್ಯದ ರೆಫ್ರಿ ಪ್ರದೀಪ್ ಜಯಪ್ರಗಾಶ್ ಅವರು ಘಟನೆಯ ತೀವ್ರತೆಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ನಿಯಮದ ಪ್ರಕಾರ ಸಿಗಬಹುದಾದ ಶಿಕ್ಷೆಗಳು ಈ ಕೆಳಗಿನಂತಿವೆ.
ಯಾವೆಲ್ಲಾ ಶಿಕ್ಷೆಗಳಿವೆ?
* ಆಟಗಾರನ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 50ರಷ್ಟು ದಂಡ ವಿಧಿಸಬಹುದು.
* ಆಟಗಾರನ ಶಿಸ್ತಿನ ದಾಖಲೆಗೆ 1 ಅಥವಾ 2 ಡಿಮೆರಿಟ್ ಪಾಯಿಂಟ್ಗಳನ್ನು ಸೇರಿಸಬಹುದು.
* ಸಣ್ಣ ತಪ್ಪಾಗಿದ್ದರೆ ಕೇವಲ ಅಧಿಕೃತ ಎಚ್ಚರಿಕೆ ನೀಡಿ ಬಿಡಬಹುದು.
ನಿಷೇಧದ ನಿಯಮವೇನು?
ಯಾವುದೇ ಆಟಗಾರನು 24 ತಿಂಗಳ ಅವಧಿಯಲ್ಲಿ ಒಟ್ಟು 4 ಡಿಮೆರಿಟ್ ಪಾಯಿಂಟ್ಗಳನ್ನು ಪಡೆದರೆ, ಅವರನ್ನು ಮುಂದಿನ ಪಂದ್ಯಗಳಿಂದ ಅಮಾನತು ಅಥವಾ ನಿಷೇಧ ಮಾಡಲಾಗುತ್ತದೆ. ಆದ್ದರಿಂದ ಈ ಒಂದೇ ಘಟನೆಯಿಂದ ವೈಭವ್ ಅವರಿಗೆ ತಕ್ಷಣವೇ ದೀರ್ಘಾವಧಿಯ ನಿಷೇಧ ಬೀಳುವ ಸಾಧ್ಯತೆ ಕಡಿಮೆ. ಆದರೂ ಮ್ಯಾಚ್ ರೆಫ್ರಿ ನೀಡುವ ವರದಿ ಮತ್ತು ಡಿಮೆರಿಟ್ ಪಾಯಿಂಟ್ಗಳು ಅವರ ಮುಂದಿನ ಕ್ರಿಕೆಟ್ ಭವಿಷ್ಯದ ಮೇಲೆ ಪರಿಣಾಮ ಬೀರಲಿವೆ. ಸದ್ಯಕ್ಕೆ ಮ್ಯಾಚ್ ರೆಫ್ರಿಯ ಅಧಿಕೃತ ಪ್ರಕಟಣೆಗಾಗಿ ಕಾಯಲಾಗುತ್ತಿದೆ.












Click it and Unblock the Notifications