Mumbai Indians: ಮುಂಬೈ ಇಂಡಿಯನ್ಸ್ ಅನ್ಫಾಲೋ, ಫ್ರಾಂಚೈಸಿ ತೊರೆದ್ರಾ ಸೂರ್ಯಕುಮಾರ್ ಯಾದವ್?
Suryakumar Yadav: ಇತ್ತೀಚೆಗಷ್ಟೇ ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ಟಿ20 ನಾಯಕತ್ವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಎಸ್ಕೆವೈ ಐಪಿಲ್ನ ಮುಂಬೈ ಇಂಡಿಯನ್ಸ್ ತಂಡವನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅನ್ಫಾಲೋ ಮಾಡಿದ್ದಾರೆ. ಜೊತೆಗೆ ಈ ಫ್ರಾಂಚೈಸಿಗೆ ಸಂಬಂಧಿಸಿದ ವಿಡಿಯೋಗಳನ್ನು ಕೂಡ ಡಿಲೀಟ್ ಮಾಡಿ ಸಂಚಲನ ಮೂಡಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹಾಗೂ ಐಪಿಎಲ್ನ ಅತೀ ದೊಡ್ಡ ಫ್ರಾಂಚೈಸಿಗಳಲ್ಲೊಂದಾದ ಮುಂಬೈ ಇಂಡಿಯನ್ಸ್ ನಡುವಿನ ಬಹುಕಾಲದ ಬಾಂಧವ್ಯ ಅಧಿಕೃತವಾಗಿ ಮುರಿದುಬಿದ್ದಿದೆಯೇ? ಇಂತಹದೊಂದು ಬಲವಾದ ಅನುಮಾನಕ್ಕೆ ಸೂರ್ಯಕುಮಾರ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಡೆದಿರುವ ದಿಢೀರ್ ಬದಲಾವಣೆಗಳೇ ಸಾಕ್ಷಿಯಾದಂತಿವೆ.

ಎಂಐ ಅನ್ಫಾಲೋ ಮಾಡಿದ ಎಸ್ಕೆವೈ
ಸೂರ್ಯಕುಮಾರ್ ಯಾದವ್ ತಮ್ಮ ಇನ್ಸ್ಟಾಗ್ರಾಂ ಪ್ರೊಫೈಲ್ ಫೋಟೋವನ್ನು ಬದಲಾಯಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ನ ಅಧಿಕೃತ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ. ಅಲ್ಲದೆ ಫ್ರಾಂಚೈಸಿಗೆ ಸಂಬಂಧಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್ ಕೂಡ ಸೂರ್ಯಕುಮಾರ್ ಯಾದವ್ ಅವರನ್ನು ಅನ್ಫಾಲೋ ಮಾಡಿದೆ.
ತೀವ್ರ ಕುತೂಹಲ ಮೂಡಿಸಿದ ಸೂರ್ಯನ ನಡೆ
ಭಾರತ ತಂಡದಲ್ಲಿನ ನಾಯಕತ್ವ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಹಾಗೂ ಸೂರ್ಯಕುಮಾರ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿರುವುದು ಇದರಿಂದ ಸ್ಪಷ್ಟವಾಗಿದ್ದು, ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಅವರು ಬೇರೆ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.
ಮೂಲಗಳ ಪ್ರಕಾರ, ಅವರು ಮತ್ತೊಂದು ಪ್ರಮುಖ ಫ್ರಾಂಚೈಸಿಯ ನಾಯಕತ್ವ ವಹಿಸಿಕೊಳ್ಳುವ ಸಲುವಾಗಿ ಮುಂಬೈ ತಂಡದಿಂದ ಹೊರನಡೆಯುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ. ಆದರೆ ಈ ದಿಢೀರ್ ಬೆಳವಣಿಗೆಗೆ ಸಂಬಂಧಿಸಿದಂತೆ ಸೂರ್ಯಕುಮಾರ್ ಯಾದವ್ ಆಗಲಿ ಅಥವಾ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಾಗಲಿ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯ
2018 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತೊರೆದು ಮುಂಬೈ ಇಂಡಿಯನ್ಸ್ ಸೇರಿದ್ದ ಸೂರ್ಯಕುಮಾರ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈಗ ಮುಂಬೈ ತಂಡಕ್ಕೆ ಸಂಬಂಧಿಸಿದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಸದ್ಯ ಅವರ ಖಾತೆಯಲ್ಲಿ ಮುಂಬೈ ತಂಡಕ್ಕೆ ಸಂಬಂಧಿಸಿ ಉಳಿದಿರುವುದು ಕೇವಲ ಒಂದು ಫೋಟೋ ಮಾತ್ರ. ಅದರಲ್ಲಿ ಅವರು ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಐಪಿಎಲ್ 2026ರ ಸೀಸನ್ನಲ್ಲಿ ಸೂರ್ಯಕುಮಾರ್ ಯಾದವ್ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಆಡಿದ ಪಂದ್ಯಗಳಲ್ಲಿ ಅವರು 20.77 ರ ಸರಾಸರಿಯಲ್ಲಿ ಕೇವಲ 270 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಕೇವಲ ಎರಡು ಅರ್ಧಶತಕ ಬಾರಿಸಿದ್ದರು. ಇತ್ತ ಮುಂಬೈ ಇಂಡಿಯನ್ಸ್ ತಂಡ ಕೂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿತ್ತು. ಈ ಕಳಪೆ ಪ್ರದರ್ಶನವೇ ಮ್ಯಾನೇಜ್ಮೆಂಟ್ ಪರ್ಯಾಯ ಆಲೋಚನೆ ಮಾಡಲು ಕಾರಣವಾಗಿರಬಹುದು ಎನ್ನಲಾಗಿದೆ.
ಸೂರ್ಯಕುಮಾರ್ ಪರ ನಿಂತ ಆರ್.ಅಶ್ವಿನ್
ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಅವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿದ ನಿರ್ಧಾರದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೂರ್ಯಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
'ನಾನು ಸೂರ್ಯಕುಮಾರ್ ಯಾದವ್ ಜಾಗದಲ್ಲಿ ನಿಂತು ಯೋಚಿಸಿದರೆ ಅವರ ಪರಿಸ್ಥಿತಿ ನಿಜಕ್ಕೂ ಬೇಸರ ತರಿಸುತ್ತದೆ. ತಂಡದಿಂದ ಹೊರಬಿದ್ದಾಗ ಯಾವುದೇ ಆಟಗಾರನಿಗಾದರೂ ತೀವ್ರ ನಿರಾಶೆಯಾಗುವುದು ಸಹಜ. ಕಳೆದ 15-18 ತಿಂಗಳುಗಳಿಂದ ಅವರ ಬ್ಯಾಟಿಂಗ್ ಫಾರ್ಮ್ ಕೈಕೊಟ್ಟಿರಬಹುದು. ಆದರೆ ಅವರು ದೇಶಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎಂಬುದನ್ನು ಮರೆಯಬಾರದು. ಒಬ್ಬ ಬ್ಯಾಟರ್ ಆಗಿ ಅವರ ಪ್ರದರ್ಶನ ಸಾಧಾರಣವಾಗಿದ್ದರೂ ಒಬ್ಬ ನಾಯಕನಾಗಿ ಅವರು ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದರು. ಆದರೆ ಆಯ್ಕೆ ಸಮಿತಿ ಇದನ್ನು ಪರಿಗಣಿಸಿಲ್ಲ,' ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications