IND vs NZ: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತ ತಂಡದ ದೊಡ್ಡ ಆತಂಕ ದೂರ
ಚಾಂಪಿಯನ್ಸ್ ಟ್ರೋಪಿ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಮಾರ್ಚ್ 2ರಂದು ಭಾನುವಾರ ಈ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಸೆಮಿಫೈನಲ್ನಲ್ಲಿ ಯಾವ ತಂಡದ ವಿರುದ್ಧ ಸೆಣೆಸಲಿವೆ ಎನ್ನುವುದನ್ನು ಈ ಪಂದ್ಯ ನಿರ್ಧರಿಸಲಿದೆ.
ಈಗಾಗಲೇ ಸೆಮಿಫೈನಲ್ ತಲುಪಿರುವ ಕಾರಣ ಭಾರತ ತಂಡದಕ್ಕೆ ಎರಡು ಬದಲಾವಣೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಗಾಯದ ಭಯ ಇದ್ದರೆ ಮಾತ್ರ ಆಟಗಾರರಿಗೆ ವಿಶ್ರಾಂತಿ ಕೊಡುವ ಸಾಧ್ಯತೆ ಇದ್ದು ಇಲ್ಲವಾದಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ತಂಡವೇ ಕಣಕ್ಕಿಳಿಯುವ ಸಾಧ್ಯತೆ ಇದೆ.

ಅಭಿಮಾನಿಗಳ ಆತಂಕ ದೂರ
ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಬ್ಯಾಟಿಂಗ್ ವೇಳೆ ಅವರು ರನ್ ಓಡಲು ಕಷ್ಟಪಡುತ್ತಿದ್ದರು. ಅದಕ್ಕಾಗಿಯೇ ಬರೀ ಬೌಂಡರಿ ಗಳಿಸುವತ್ತ ನೋಡಿದ್ದರು. ಪಾಕ್ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡದ ಆಟಗಾರರಿಗೆ ಮೂರು ದಿನ ವಿಶ್ರಾಂತಿ ನೀಡಲಾಗಿತ್ತು, ಗುರುವಾರದಿಂದ ಭಾರತ ತಂಡ ಅಭ್ಯಾಸ ಆರಂಭಿಸಿದ್ದರೂ ನಾಯಕ ರೋಹಿತ್ ಶರ್ಮಾ ಅಭ್ಯಾಸದಲ್ಲಿ ಭಾಗವಹಿಸಿರಲಿಲ್ಲ.
ರೋಹಿತ್ ಶರ್ಮಾ ಗಾಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಶುರುವಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಲಿದ್ದು ಶುಭಮನ್ ಗಿಲ್ ನಾಯಕತ್ವ ವಹಿಸಿಕೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ ಶುಕ್ರವಾರ ರೋಹಿತ್ ಶರ್ಮಾ ಅಭ್ಯಾಸದಲ್ಲಿ ಭಾಗವಹಿಸುವ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಕೆಎಲ್ ರಾಹುಲ್ ಕೂಡ ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟಿದ್ದಾರೆ. ಇಬ್ಬರೂ ಕೂಡ ಫಿಟ್ ಆಗಿದ್ದು ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯವಿದ್ದಾರೆ ಎಂದರು. ಆದರೆ ಇಬ್ಬರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡುವ ಬಗ್ಗೆ ಕೆಎಲ್ ರಾಹುಲ್ ಸ್ಪಷ್ಟನೆ ಕೊಟ್ಟಿಲ್ಲ.
ಒಂದು ವೇಳೆ ಗಾಯದ ಆತಂಕವಿದ್ದರೆ ಇಬ್ಬರಿಗೂ ವಿಶ್ರಾಂತಿ ಕೊಡುವ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಯೋಚಿಸಬಹುದು. ಆದರೆ ಇಲ್ಲಿ ಪ್ರತಿ ಪಂದ್ಯ ಕೂಡ ಮುಖ್ಯವಾಗಿರುವ ಕಾರಣ ಫಿಟ್ ಆಗಿದ್ದರೆ ಆಡುವಂತೆ ಕೂಡ ಕೇಳಬಹುದು. ಸೆಮಿಫೈನಲ್ನಲ್ಲಿ ಭಾರತದ ಎದುರಾಳಿ ಯಾರು ಎನ್ನುವುದನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯ ನಿರ್ಣಯಿಸಲಿದೆ. ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಎರಡರಲ್ಲಿ ಒಂದು ತಂಡವನ್ನು ಭಾರತ ಎದುರಿಸಬೇಕಾಗುತ್ತದೆ.
ಭಾರತದ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಹರ್ಷಿತ್ ರಾಣಾ, ಕುಲದೀಪ್ ಯಾದವ್.












Click it and Unblock the Notifications