Rishabh Pant : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗುತ್ತಿದ್ದಾರೆ ರಿಷಬ್ ಪಂತ್
ಭಾರತ ತಂಡ ಪ್ರತಿಭಾವಂತ ಯುವ ಕ್ರಿಕೆಟಿಗ ರಿಷಬ್ ಪಂತ್ 2022ರ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಭೀಕರ ಅಪಘಾತದಲ್ಲಿ ಗಾಯಗೊಂಡ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ರಿಷಬ್ ಪಂತ್ ಯಾವಾಗ ಕ್ರಿಕೆಟ್ಗೆ ಮರಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ಪಂತ್ ಭಾರತ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಾಗ ರಿಷಬ್ ಪಂತ್ ಇರಬೇಕಿತ್ತು ಎಂದುಕೊಂಡವರೇ ಹೆಚ್ಚು. ರಿಷಬ್ ಪಂತ್ ಫಿಟ್ನೆಸ್ ಬಗ್ಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ. ಪಂತ್ ನಿರೀಕ್ಷೆಗೂ ಮೀರಿ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ಅವರ ಪುನರಾಗಮನದ ಬಗ್ಗೆ ಮುಖ್ಯ ಮುನ್ಸೂಚನೆ ನೀಡಿದೆ.
ಬಿಸಿಸಿಐ ವಿಶೇಷ ವೈದ್ಯಕೀಯ ತಂಡ ರಿಷಬ್ ಪಂತ್ ಅವರ ಆರೋಗ್ಯ ಮೇಲ್ವಿಚಾರಣೆ ನಡೆಸುತ್ತಿದೆ. ಈ ತಂಡ ಸಿಹಿ ಸುದ್ದಿ ನೀಡಿದ್ದು, ಪಂತ್ ಅವಧಿಗಿಂತ ಮೊದಲೇ ಮೈದಾನಕ್ಕೆ ಮರಳುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಿದೆ.

ಜಿಮ್ನಲ್ಲಿ ಪಂತ್ ತರಬೇತಿ
ಕಳೆದ ವರ್ಷ ಡಿಸೆಂಬರ್ನಲ್ಲಿ ಸಂಭವಿಸಿದ ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಪಂತ್, ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಅಪಘಾತದಲ್ಲಿ ಅವರ ಬಲ ಮೊಣಕಾಲು ಹಾನಿಗೊಳಗಾದ ನಂತರ ಪಂತ್ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಸದ್ಯ ಪಂತ್ ಜಿಮ್ನಲ್ಲಿ ಕಸರತ್ತು ನಡೆಸುತ್ತಿರುವುದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆರಂಭದಲ್ಲಿ ಸ್ಟಿಕ್ ಸಹಾಯದಿಂದ ನಡೆಯುತ್ತಿದ್ದ ಪಂತ್ ಈಗ ಯಾವ ನೋವು ಇಲ್ಲದೇ ಆರಾಮಾಗಿ ನಡೆದಾಡುತ್ತಿದ್ದಾರೆ. ಅದರಲ್ಲೂ ಪಂತ್ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ ಎಂದು ಬಿಸಿಸಿಐ ಮಹತ್ವದ ಹೇಳಿಕೆ ನೀಡಿದೆ. ಅಲ್ಲದೆ, ಅವರು ಕೆಲಹೊತ್ತು ವಿಕೆಟ್ ಕೀಪಿಂಗ್ ಕೂಡ ಅಭ್ಯಾಸ ಮಾಡುತ್ತಿದ್ದಾರೆ ಎಂದು ದೃಢಪಡಿಸಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ವಾಪಸ್
ರಿಷಬ್ ಪಂತ್ 2024ರಲ್ಲಿ ತವರಿನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ. 2024ರ ಜನವರಿ ಮತ್ತು ಫೆಬ್ರವರಿಯಲ್ಲಿ ಭಾರತ ತವರಿನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ, ಪಂತ್ ಅವರು ಈ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗಲಿದ್ದು, ಮತ್ತೆ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ನಂಬಿದೆ.
"ಪಂತ್ ತಮ್ಮ ಪುನರ್ವಸತಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ ಮತ್ತು ಬ್ಯಾಟಿಂಗ್ ಮತ್ತು ನೆಟ್ನಲ್ಲಿ ಕೀಪಿಂಗ್ ಪ್ರಾರಂಭಿಸಿದ್ದಾರೆ. ಪಂತ್ ಪ್ರಸ್ತುತ ಅವರಿಗಾಗಿ ವಿನ್ಯಾಸಗೊಳಿಸಲಾದ ಫಿಟ್ನೆಸ್ ಕಾರ್ಯಕ್ರಮವನ್ನು ಅನುಸರಿಸುತ್ತಿದ್ದಾರೆ, ಇದರಲ್ಲಿ ಸಾಮರ್ಥ್ಯ, ನಮ್ಯತೆ ಮತ್ತು ಓಟವನ್ನು ಒಳಗೊಂಡಿರುತ್ತದೆ " ಎಂದು ಬಿಸಿಸಿಐ ಆಟಗಾರರ ವೈದ್ಯಕೀಯ ನವೀಕರಣಗಳಲ್ಲಿ ತಿಳಿಸಿದೆ.
ಬೇಸರದ ಸಂಗತಿ ಎಂದರೆ ರಿಷಬ್ ಪಂತ್ 2023ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಆಡುವುದಿಲ್ಲ ಎನ್ನುವುದು, ಅವರು 2024ರ ಜನವರಿ ವೇಳೆಗೆ ತಂಡಕ್ಕೆ ಮರಳಿದರೆ, ಏಪ್ರಿಲ್ನಲ್ಲಿ ನಡೆಯಲಿರುವ ಐಪಿಎಲ್ನಲ್ಲಿ ಕೂಡ ಆಡುವುದು ಖಚಿತವಾಗುತ್ತದೆ.
2023ರ ಐಪಿಎಲ್ನಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ಪ್ರದರ್ಶನ ನೀಡಿತ್ತು. ಸರಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಿಗದೇ ಇದ್ದ ಕಾರಣ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಯಿತು, ಆದರೂ 14 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 9ನೇ ಸ್ಥಾನಕ್ಕೆ ಕುಸಿದಿತ್ತು.
ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಸೇರಿದಂತೆ ಹಲವಾರು ಗಾಯಗೊಂಡ ಆಟಗಾರರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಪುನರ್ವಸತಿಗೆ ಒಳಗಾಗಿದ್ದಾರೆ.












Click it and Unblock the Notifications