ಆರ್ಸಿಬಿಗೆ ಗೆಲುವು ತಂದುಕೊಟ್ಟ 73, 7, 3, 4 ನಂಬರ್ಸ್, ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದ ಮಂಬೈ ಇಂಡಿಯನ್ಸ್
RCB Vs MI IPL 2026: ರಾಯ್ಪುರ್ನಲ್ಲಿ ಭಾನುವಾರ (ಮೇ 10) ನಡೆದ ಐಪಿಎಲ್ 2026ರ 54ನೇ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೃನಾಲ್ ಪಾಂಡ್ಯ, ಭುನವೇಶ್ವರ್ ಕುಮಾರ್ ಹಾಗೂ ರಾಸಿಖ್ ಸಲಾಮ್ ದಾರ್ ಅವರ ಆಕ್ರಮಣಕಾರಿ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಮುಂಬೈ ಅಧಿಕೃತವಾಗಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಪೇರಿಸಿತು. ಈ ಗುರಿ ಬೆನ್ನತ್ತಿದ್ದ ಆರ್ಸಿಬಿಯು ಕೊನೆ ಬಾಲ್ವರೆಗೂ ಹೋರಾಟ ಮಾಡಿ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 14 ಪಾಯಿಂಟ್ಸ್ಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

ಮಿಂಚಿದ ಕೃನಾಲ್ ಪಾಂಡ್ಯ
ಮುಂಬೈ ಇಂಡಿಯನ್ಸ್ ನೀಡಿದ 167 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಒಂದು ಹಂತದಲ್ಲಿ 5.1 ಓವರ್ಗಳಲ್ಲಿ 39 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಕಠಿಣ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ಆಟವಾಡಿದ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಸಹಿತ 73 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಇವರ ವಿಕೆಟ್ ಪತನದ ನಂತರ ಪಂದ್ಯ ಮತ್ತೆ ಮುಂಬೈ ಪರ ವಾಲಿದಂತೆ ಕಂಡರೂ ಆರ್ಸಿಬಿ ಆಟಗಾರರು ಕೊನೆಯ ಎಸೆತದವರೆಗೆ ಹೋರಾಟ ನಡೆಸಿದರು.
73, 4, 7, 3 ನಂಬರ್ಗಳ ಅರ್ಥ ಏನು?
ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ಗಳ ಅಗತ್ಯವಿತ್ತು. ಆರ್ಸಿಬಿ ಈ ರನ್ ಗಳಿಸುವಲ್ಲಿ ಯಶಸ್ವಿಯಾಗಿ ಸಂಭ್ರಮಿಸಿತು. ಈ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ನಾಲ್ಕು ನಂಬರ್ಗಳು. ಕೃನಾಲ್ ಪಾಂಡ್ಯ ಸಿಡಿಸಿದ 73 ರನ್, ಭುವನೇಶ್ವರ್ ಕುಮಾರ್ ಪಡೆದ 4 ವಿಕೆಟ್ಗಳು ಹಾಗೂ 7 ರನ್ಗಳು, ರಸಿಖ್ ಸಲಾಂ ದಾರ್ ಕೊನೆಯಲ್ಲಿ ಕಲೆಹಾಕಿದ 3 ರನ್ಗಳೇ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದವು. ಆದ್ದರಿಂದ ಇಂದಿನ ಪಂದ್ಯದಲ್ಲಿ 73, 4, 7, 3 ನಂಬರ್ಗಳು ಆರ್ಸಿಬಿ ಪಾಲಿಗೆ ಅದೃಷ್ಟ ತಂದಿವೆ ಎಂದು ಹೇಳಬಹುದು.
ಆರ್ಸಿಬಿ ಪರ ಯಾರು ಎಷ್ಟು ರನ್ ಸಿಡಿಸಿದರು?
ಆರ್ಸಿಬಿ ಪರ ಬ್ಯಾಟ್ ಬೀಸಿದ ಕೃನಾಲ್ ಪಾಂಡ್ಯ ಆಕ್ರಮಣಕಾರಿ ಆಟದ ಮೂಲಕ 73(46) ರನ್ಗಳನ್ನು ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಜೇಕಬ್ ಬೆಥೆಲ್ 27(27), ದೇವದತ್ ಪಡಿಕ್ಕಲ್ 12(11), ನಾಯಕ ರಜತ್ ಪಾಟಿದಾರ್ 8(8), ಜಿತೇಶ್ ಶರ್ಮಾ 18(12) ರನ್ ಗಳಿಸಿದರೆ, ಕೊನೆಯದಾಗಿ ರಸಿಖ್ ಸಲಾಂ ದಾರ್ ಅಜೇಯ 3(2), ಭುವನೇಶ್ವರ್ ಕುಮಾರ್ ಅಜೇಯ 7(2) ಕೊಡುಗೆ ನೀಡಿ ತಂಡವನ್ನ ಗೆಲುವಿನ ದಡ ಸೇರಿಸಿದರು.
ಭುವಿ ಬೌಲಿಂಗ್ಗೆ ತತ್ತರಿಸಿ ಮುಂಬೈ ಬ್ಯಾಟಿಂಗ್ ಪಡೆ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 3 ಓವರ್ಗಳಲ್ಲಿ 28 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ತಿಲಕ್ ವರ್ಮಾ (57) ಮತ್ತು ನಮನ್ ಧೀರ್ (47) ಜೋಡಿ 82 ರನ್ಗಳ ಜೊತೆಯಾಟವಾಡಿ ತಂಡವನ್ನು ಸಾಧಾರಣ ಮೊತ್ತಕ್ಕೆ ತಲುಪಿಸಿದರು. ಆರ್ಸಿಬಿ ಪರ ವೇಗಿ ಭುವನೇಶ್ವರ್ ಕುಮಾರ್ ಕೇವಲ 23 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡವನ್ನು 166/7 ರನ್ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನ ಮೂಲಕ ಆರ್ಸಿಬಿ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡರೆ, 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ನಿರ್ಗಮಿಸಿದೆ. ಉಳಿದ ಮೂರು ಪಂದ್ಯಗಳಲ್ಲೂ ಗೆದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿ ಮುಂಬೈನದ್ದಾಗಿದೆ.












Click it and Unblock the Notifications