RCB vs KKR: ಮೊದಲ ಪಂದ್ಯಕ್ಕೆ ಮುನ್ನವೇ ಎದುರಾಳಿಗಳಿಗೆ ವಾರ್ನಿಂಗ್ ಕೊಟ್ಟ ಆರ್ಸಿಬಿ ಕೋಚ್!
ಐಪಿಎಲ್ 2025ರ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಾರ್ಚ್ 22ರಂದು ಶನಿವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್ ಸಿಬಿ ಸೆಣೆಸಲಿದೆ. ಈಗಾಗಲೇ ಎರಡೂ ತಂಡಗಳು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದು ಮೊದಲ ಪಂದ್ಯಕ್ಕೆ ಸಜ್ಜಾಗಿವೆ.
ಮೊದಲ ಪಂದ್ಯಕ್ಕೆ ಮುನ್ನ ಆರ್ ಸಿಬಿ ಕೋಚ್ ಆಂಡಿ ಫ್ಲವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಎದುರಾಳಿ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ನಾವು ಎಲ್ಲಾ ರೀತಿಯಲ್ಲಿ ಸಜ್ಜಾಗಿದ್ದೇವೆ ಎಂದು ಹೇಳಿದ್ದು, ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ.

ಆಂಡಿ ಫ್ಲವರ್ ಹೇಳಿದ್ದೇನು?
ನಮ್ಮ ತಂಡವು ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರನ್ನೊಳಗೊಂಡ ಕೋಲ್ಕತ್ತಾ ನೈಟ್ ರೈಡರ್ಸ್ನ (ಕೆಕೆಆರ್) ಪ್ರಸಿದ್ಧ ಸ್ಪಿನ್ ದಾಳಿಯನ್ನು ಎದುರಿಸಲು ಸಜ್ಜಾಗಿದೆ ಎಂದು ಹೇಳಿದರು. ಕೆಕೆಆರ್ ತಂಡವು ಮುಖ್ಯವಾಗಿ ಸ್ಪಿನ್ ದಾಳಿಯನ್ನು ಅವಲಂಬಿಸಿದೆ. ಆರಂಭಿಕ ಪಂದ್ಯಕ್ಕೂ ಮುನ್ನ, ಚಕ್ರವರ್ತಿ ಮತ್ತು ನರೈನ್ ಆರ್ ಸಿಬಿ ತಂಡಕ್ಕೆ ಸವಾಲಾಕಲಿದ್ದಾರೆ ಎನ್ನುವುದನ್ನು ಆಂಡಿ ಫ್ಲವರ್ ಒಪ್ಪಿಕೊಂಡಿದ್ದಾರೆ.
ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಇದು ತಮ್ಮ ಬ್ಯಾಟ್ಸ್ಮನ್ಗಳಿಗೆ ಉತ್ತಮ ಅವಕಾಶ ಎಂದರು. ವರುಣ್ ಚಕ್ರವರ್ತಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಹಲವು ವರ್ಷಗಳಿಂದ ಸುನಿಲ್ ನರೈನ್ ಬೌಲಿಂಗ್ ಬಗ್ಗೆ ನಮಗೆ ತಿಳಿದಿದೆ. ಇದು ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಆಡಲು ಸಿಗುವ ಅವಕಾಶವಾಗಿದ್ದು, ಆಟಗಾರರು ಪರೀಕ್ಷೆಗೆ ಸಜ್ಜಾಗಿದ್ದಾರೆ ಎಂದರು.
ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಕಳೆದ ಆವೃತ್ತಿಯಲ್ಲಿ ಕ್ರಮವಾಗಿ 21 ಮತ್ತು 17 ವಿಕೆಟ್ಗಳನ್ನು ಪಡೆಯುವ ಮೂಲಕ ಕೆಕೆಆರ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಆವೃತ್ತಿಯಲ್ಲೂ ಈ ಜೋಡಿ ಅದೇ ಪ್ರದರ್ಶನವನ್ನು ಮುಂದುವರೆಸುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ಆರ್ ಸಿಬಿ ತಂಡವನ್ನು ಮುನ್ನಡೆಸಲು ಸಜ್ಜಾಗಿರುವ ರಜತ್ ಪಾಟಿದಾರ್ ಬಗ್ಗೆ ಮಾತನಾಡಿರುವ ಕೋಚ್ ಆಂಡಿ ಫ್ಲವರ್, ಹೊಸ ಸವಾಲಿಗೆ ನಾಯಕ ಸಜ್ಜಾಗಿದ್ದಾರೆ, ತಂಡ ಕೂಡ ಉತ್ತಮವಾಗಿದೆ ಎಂದರು.
ತಂಡದ ಎಲ್ಲಾ ಆಟಗಾರರು ನಾಯಕ ರಜತ್ ಪಟಿದಾರ್ ಅವರಿಗೆ ಬೆಂಬಲ ಕೊಟ್ಟಿದ್ದಾರೆ, ಅನುಭವಿ ಆಟಗಾರರು ಇರುವುದು ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ನಾವು ಕೂಡ ನಾಯಕ ಬೆನ್ನಿಗಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications