ರಾಹುಲ್ ದ್ರಾವಿಡ್ಗೆ ಹೇಳಿಮಾಡಿಸಿದ ಕೆಲಸ ಇದು: ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ
ಬರ್ಮಿಂಗ್ಹ್ಯಾಂ, ಜುಲೈ 3: ಕ್ರಿಕೆಟ್ನಲ್ಲಿ ಭಾರತವನ್ನು ಇನ್ನೂ ಎತ್ತರಕ್ಕೆ ಕರೆದೊಯ್ಯಲು ರಾಹುಲ್ ದ್ರಾವಿಡ್ ಸಮರ್ಥರಿದ್ಧಾರೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಐದನೇ ಪಂದ್ಯದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಹೇಳಿಮಾಡಿಸಿದ್ದು ಎಂದಿದ್ಧಾರೆ.
ರವಿಶಾಸ್ತ್ರಿ ಅವರು ಟೀಮ್ ಇಂಡಿಯಾದಲ್ಲಿ ಎರಡು ಬಾರಿ ಕೋಚ್ ಆಗಿದ್ದರು. ಅವರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ ಹಲವು ಮಹೋನ್ನತ ಮೈಲಿಗಲ್ಲು, ದಾಖಲೆಗಳನ್ನು ಬರೆದಿದೆ. ಕ್ರಿಕೆಟ್ ಆಟಗಾರರಾಗಿಯೂ ಬಹಳ ಅನುಭವ ಹೊಂದಿದ್ದವರು. ಈಗ ತಮ್ಮ ಸ್ಥಾನ ತುಂಬಿರುವ ರಾಹುಲ್ ದ್ರಾವಿಡ್ ಬಗ್ಗೆ ರವಿಶಾಸ್ತ್ರಿ ಮಾಡಿರುವ ಪ್ರಶಂಸೆ ಗಮನಾರ್ಹ.
ಮೊಣಕಾಲು ಚಿಕಿತ್ಸೆಗೆ ಕೇವಲ 40 ರು. ಖರ್ಚು ಮಾಡಿದ ಧೋನಿ
ರವಿಶಾಸ್ತ್ರಿ ಕೋಚ್ ಆಗಿದ್ದ ಅವಧಿಯಲ್ಲಿ ಉಳಿದ ಒಂದೇ ಕೊರತೆ ಎಂದರೆ ಭಾರತ ವಿಶ್ವಕಪ್ ಗೆಲ್ಲದೇ ಹೋಗಿದ್ದು. ಐಸಿಸಿ ವರ್ಲ್ಡ್ ಕಪ್ ಗೆಲ್ಲಲು ಭಾರತವೇ ಫೇವರಿಟ್ ಎನಿಸಿತ್ತು. ಆದರೂ ಭಾರತಕ್ಕೆ ಕಪ್ ಭಾಗ್ಯ ಸಿಗಲಿಲ್ಲ.
ಈ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, ತನ್ನ ಅವಧಿಯಲ್ಲಿ ಭಾರತ ವಿಶ್ವಕಪ್ ಗೆಲ್ಲದೇ ಹೋದರೂ ಬೇರೆ ಬೇರೆ ದೇಶಗಳಲ್ಲಿ ತಂಡ ಒಳ್ಳೆಯ ಪ್ರದರ್ಶನ ತೋರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದ್ಯಾರು ಯುವಿನಾ ಅಥವಾ ಬೂಮ್ರಾನಾ; ಸಚಿನ್ ಟ್ವೀಟ್ ಹಿಂದಿನ ಮರ್ಮವೇನು?
ಕಾಂಗರೂ ನಾಡಿನಲ್ಲಿ ಸಾಧನೆ
"ಟೆಸ್ಟ್ ಕ್ರಿಕೆಟ್ ಮತ್ತು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ತಂಡ ವಿಶ್ವಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಸಾಧನೆ ತೋರಿತು. ಆಸ್ಟ್ರೇಲಿಯಾದಲ್ಲಿ ಸತತ ಎರಡು ಸರಣಿ ಗೆದ್ದದ್ದು ಸುಮ್ಮನೆ ಅಲ್ಲ. ಕಳೆದ ವರ್ಷ ಇಂಗ್ಲೆಂಡ್ನಲ್ಲಿ ಸರಣಿ ಮುನ್ನಡೆ ಪಡೆದದ್ದೂ ಕಡಿಮೆ ಸಾಧನೆ ಅಲ್ಲ. ಟೆಸ್ಟ್ ಕ್ರಿಕೆಟ್ ಆಡಲು ಹೆಮ್ಮೆ ಪಡುವ ತಂಡ ನಮ್ಮದಾಗಿತ್ತು. ವಿರಾಟ್ ಕೊಹ್ಲಿಗೆ ಶಹಬ್ಬಾಸ್ಗಿರಿ ಕೊಡಬೇಕು. ಆತ ನಾಯಕನಾಗಿ ಮುಂದಡಿ ಇಡುತ್ತಾ ತಂಡಕ್ಕೆ ದಾರಿ ತೋರಿಸಿದರು. ಆ ಅವಧಿಯಲ್ಲಿ ಜಡೇ, ರಿಷಭ್ ಪಂತ್ ಮೊದಲಾದ ಆಟಗಾರರು ಬೆಳವಣಿಗೆ ಹೊಂದುತ್ತಿದ್ದುದನ್ನು ನೀವು ಗಮನಿಸಿರಬಹುದು," ಎಂದು ಮಾಜಿ ಸ್ಪಿನ್ನಿಂಗ್ ಆಲ್ರೌಂಡರ್ ಕೂಡ ಆದ ರವಿಶಾಸ್ತ್ರಿ ಹೇಳಿದ್ದಾರೆ.
ಬೀದೀಲಿ ಇಲಿ ಅಲ್ಲ
ಇತ್ತೀಚಿನ ಕೆಲ ವರ್ಷಗಳವರೆಗೂ ಭಾರತೀಯ ಕ್ರಿಕೆಟ್ಗೆ ಅಂಟಿದ ಒಂದು ಕಳಂಕವೆಂದರೆ ಭಾರತ ತಂಡ ಮನೇಲಿ ಹುಲಿ ಬೀದೀಲಿ ಇಲಿ ಎಂಬುದು. ಈ ಬಗ್ಗೆ ಮಾಧ್ಯಮಗಳಲ್ಲಿ ಟೀಕೆಭರಿತ ವರದಿಗಳು, ವಿಶ್ಲೇಷನೆಗಳು ಇದ್ದೇ ಇರುತ್ತವೆ. ಒಬ್ಬ ಕೋಚ್ ಆಗಿ ರವಿಶಾಸ್ತ್ರಿ ಇಂಥ ವರದಿ ಮತ್ತು ಟೀಕೆಗಳ ಬಗ್ಗೆ ಏನು ಭಾವಿಸಿದ್ದರು?
"ಮಾಧ್ಯಮ ವರದಿ ಬಗ್ಗೆ ನಾನು ತಲೆಕೆಡಿಸಿಕೊಂಡವನಲ್ಲ. ನಮ್ಮ ಹುಡುಗರು ಚೆನ್ನಾಗಿ ಆಡಿದರೆ ಮಾಧ್ಯಮದವರು ಚೆನ್ನಾಗಿ ಬರೆಯುತ್ತಾರೆ. ಚೆನ್ನಾಗಿ ಅಡಲಿಲ್ಲವೆಂದರೆ ಟೀಕಿಸುವ ಹಕ್ಕು ಮಾಧ್ಯಮಕ್ಕೆ ಇರುತ್ತದೆ.
"ಮಾಧ್ಯಮದವರಿಗೆ ಭಾರತ ತಂಡದ ಬಗ್ಗೆ ಯಾವ ವಿಚಾರದಲ್ಲಿ ಅಸಮಾಧಾನ ಇದೆ ಎಂಬುದನ್ನು ಸರಿಮಾಡುವುದು ನಮ್ಮ ಕೆಲಸ. ತವರಿನಲ್ಲಿ ನಡೆಯುವ ಪಂದ್ಯಗಳಲ್ಲಿ ಗೆಲ್ಲುತ್ತಾರೆ, ವಿದೇಶಗಳ ಪಿಚ್ನಲ್ಲಿ ವಿಫಲರಾಗುತ್ತಾರೆ ಎಂಬುದು ಪ್ರಮುಖ ಟೀಕೆ. ಈ ಅಭಿಪ್ರಾಯವನ್ನು ಬದಲಿಸುವ ಸಂಕಲ್ಪ ನನ್ನದಾಯಿತು. ಇದನ್ನು ಹೇಗೆ ಸರಿ ಮಾಡುತ್ತೀರಿ? ತಂಡದೊಂದಿಗೆ ಮತ್ತು ವಿರಾಟ್ ಕೊಹ್ಲಿ ಜೊತೆ ಕೂತು ಮಾತನಾಡುತ್ತೀರಿ. ನಾವು ೨೦ ವಿಕೆಟ್ ಪಡೆಯುತ್ತೇವೆ ಎಂದು ನಿಶ್ಚಯಿಸುತ್ತೀರಿ, ಅಷ್ಟೇ," ಎಂದು ರವಿಶಾಸ್ತ್ರಿ ತಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ತಮ್ಮ ಸಾಧನೆಗೆ ಶಾಸ್ತ್ರಿ ತೃಪ್ತಿ
"ಟೀಮ್ ಇಂಡಿಯಾದ ಕೋಚ್ ಆಗುವುದು ಅಪ್ರತಿಮ ಕೆಲಸ. ಪ್ರತೀ ದಿನವೂ 140 ಕೋಟಿ ಜನರು ನಿಮ್ಮನ್ನು ಒರೆಗೆ ಹಚ್ಚಿ ನೋಡುತ್ತಿರುತ್ತಾರೆ. ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ನೀವು ಬುಲೆಟ್ ಎದುರಿಸಲೇಬೇಕು. ಅಖಾಡಕ್ಕೆ ಇಳಿದರೆ ನೀವು ಏನು ಸಾಧಿಸುತ್ತೀರಿ ಎಂಬುದಷ್ಟೇ ಮುಖ್ಯ. ನೀವು ಗೆಲ್ಲಬೇಕು.
"ನಿರೀಕ್ಷೆ ದೊಡ್ಡದಿತ್ತು. ಆದರೆ, ನನ್ನ ಏಳು ವರ್ಷದ ಆ ವೃತ್ತಿ ಅವಧಿಯನ್ನು ಹಿಂದಿರುಗಿ ನೋಡಿದಾಗ ಆಟಗಾರರು ಆಡಿದ ರೀತಿಗೆ ಹೆಮ್ಮೆ ಎನಿಸುತ್ತದೆ. ನಾನು ಕೋಚ್ ಆಗಿ ಸೇರಿದಾಗ ಭಾರತ ತಂಡದ ಪ್ರದರ್ಶನ ಅತ್ಯುತ್ತಮ ಇರಲಿಲ್ಲ. ಆದರೆ, ಅಂತ್ಯದಲ್ಲಿ ತಂಡ ಎಲ್ಲಾ ಮಾದರಿ ಕ್ರಿಕೆಟ್ನಲ್ಲೂ ಅದ್ಭುತವಾಗಿ ಹೊರಹೊಮ್ಮಿದರು" ಎಂದು ಸ್ಕೈ ಸ್ಪೋರ್ಟ್ಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರವಿಶಾಸ್ತ್ರಿ ತಿಳಿಸಿದ್ಧಾರೆ.
'ಆಕಸ್ಮಿಕವಾಗಿ ಕೋಚ್ ಆದೆ'
"ಭಾರತದ ಕೋಚ್ ಆಗಿ ನನ್ನ ಸ್ಥಾನ ತುಂಬಲು ರಾಹುಲ್ ದ್ರಾವಿಡ್ಗಿಂತ ಉತ್ತಮ ವ್ಯಕ್ತಿ ಇನ್ನೊಬ್ಬರಿರಲಾರರು. ಕಾಮೆಂಟರಿ ಮಾಡಿಕೊಂಡು ಇದ್ದ ನನಗೆ ಅಪ್ಪಿತಪ್ಪಿ ಕೋಚ್ ಸ್ಥಾನ ಸಿಕ್ಕಿದ್ದು. ಆದರೆ, ಬಹಳ ಶ್ರಮ ಪಟ್ಟು ವ್ಯವಸ್ಥೆಯ ಮೂಲಕ ಬಂದ ವ್ಯಕ್ತಿ ಎಂದರೆ ರಾಹುಲ್ ದ್ರಾವಿಡ್. ಅಂಡರ್-19 ತಂಡದ ಕೋಚ್ ಆಗಿದ್ದರು. ಈಗ ಭಾರತ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ತಂಡ ಇವರಿಗೆ ಸ್ಪಂದಿಸಲು ಪ್ರಾರಂಭಿಸಿದರೆ ಕೆಲಸ ಇನ್ನಷ್ಟು ಖುಷಿ ಕೊಡುತ್ತದೆ," ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.
ಆಗಲೇ ತಿಳಿಸಿದಂತೆ ರವಿಶಾಸ್ತ್ರಿ ಎರಡು ಬಾರಿ ಟೀಮ್ ಇಂಡಿಯಾ ಕೋಚ್ ಆಗಿದ್ದರು. 2014-15ರಲ್ಲಿ ಅವರು ಎಂಟು ತಿಂಗಳ ಕಾಲ ಭಾರತ ಕ್ರಿಕೆಟ್ ತಂಡದ ನಿರ್ದೇಶಕರಾಗಿದ್ದರು. 2017ರಲ್ಲಿ ಮುಖ್ಯ ಕೋಚ್ ಆದರು. ೨೦೧೯ರಲ್ಲಿ ಅವರು ಕೋಚ್ ಆಗಿ 2021ರ ಟಿ೨೦ ವಿಶ್ವಕಪ್ ಮುಗಿಯುವವರೆಗೂ ಮುಂದುವರಿದಿದ್ದರು. ಈ ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಇವರ ಅವಧಿಯಲ್ಲಿ ನಡೆದಿದ್ದ ಮೂರೂ ಐಸಿಸಿ ಟ್ರೋಫಿಗಳಲ್ಲೂ ಭಾರತ ಗೆಲ್ಲಲಾಗಲಿಲ್ಲ ಎಂಬುದು ದುರದೃಷ್ಟರ ಸಂಗತಿ.
ಇದೊಂದು ಕಪ್ಪುಚುಕ್ಕೆ ಬಿಟ್ಟರೆ ರವಿಶಾಸ್ತ್ರಿ ಕೋಚ್ ಆಗಿದ್ದ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ್ದು ದಿಟ್ಟ ನಿರಂತರ ಪ್ರದರ್ಶನವೇ. ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಅವರ ನೆಲದಲ್ಲೇ ಸತತ ಎರಡು ಸರಣಿಗಳಲ್ಲಿ ಸೋಲಿಸಿತು. 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿತು. ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತ ಟಿ೨೦ ಸರಣಿಗಳನ್ನು ಗೆದ್ದಿತು. ವೆಸ್ಟ್ ಇಂಡೀಸ್ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಟೆಸ್ಟ್ ಸರಣಿ ಗೆದ್ದಿತು.
ರವಿಶಾಸ್ತ್ರಿ ಕೋಚ್ ಆಗಿದ್ದ ಅವಧಿಯಲ್ಲೇ ಇಂಗ್ಲೆಂಡ್ನಲ್ಲಿ ಭಾರತ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಪಡೆದಿದ್ದು. ಆಗ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೇವಲ ನಾಲ್ಕು ಪಂದ್ಯಗಳು ಮಾತ್ರ ನಡೆದಿದ್ದವು. ಕೋವಿಡ್ ಕಾರಣಕ್ಕೆ ಭಾರತ ಕೊನೆಯ ಪಂದ್ಯ ಆಡಿರಲಿಲ್ಲ. ತಪ್ಪಿಹೋಗಿದ್ದ ಆ ಪಂದ್ಯ ಈಗ ಬರ್ಮಿಂಗ್ಹ್ಯಾಂನಲ್ಲಿ ನಡೆಯುತ್ತಿದೆ. ಈ ಪಂದ್ಯ ಡ್ರಾ ಆದರೂ ಸಾಕು ಭಾರತ ಟೆಸ್ಟ್ ಸರಣಿ ಗೆದ್ದಂತಾಗುತ್ತದೆ. ಆದರೂ ಈ ಕೊನೆಯ ಪಂದ್ಯದಲ್ಲಿ ಭಾರತ ಡ್ರಾ ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದಂತಿಲ್ಲ. ಭಾರತಕ್ಕೆ ಗೆಲುವು ಬಹುತೇಕ ನಿಶ್ಚಿತ ಎಂಬಂತೆ ಪಂದ್ಯದ ದಿಕ್ಕು ಸಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)
Recommended Video