Ranji Trophy: ಕರ್ನಾಟಕ-ರೈಲ್ವೇಸ್ ರೋಚಕ ಹಣಾಹಣಿ: ಮೊದಲ ದಿನವೇ 16 ವಿಕೆಟ್ ಪತನ
ಕರ್ನಾಟಕ-ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ದಿನವೇ 16 ವಿಕೆಟ್ಗಳ ಪತನವಾಗಿದ್ದು, ಬೌಲರ್ ಗಳು ಮೇಲುಗೈ ಸಾಧಿಸಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಕರ್ನಾಟಕ ರೈಲ್ವೇಸ್ ತಂಡವನ್ನು 155 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಬಳಿಕ ಬ್ಯಾಟಿಂಗ್ ಮಾಡಿದ ಕರ್ನಾಟಕ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿದೆ. ಇನ್ನೂ 65 ರನ್ಗಳ ಹಿನ್ನಡೆ ಹೊಂದಿರುವ ಕರ್ನಾಟಕ ಎರಡನೇ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಮಾತ್ರವೇ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ.

ಸೂರತ್ನ ಲಾಲಾಭಾಯಿ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೌಲರ್ ಗಳು ಮೇಲುಗೈ ಸಾಧಿಸಿದರು. ರೈಲ್ವೇಸ್ ಮೊದಲ ಇನ್ನಿಂಗ್ಸ್ನಲ್ಲಿ 155 ರನ್ಗಳಿಗೆ ಆಲೌಟ್ ಆಯಿತು. ನಾಯಕ ಪ್ರಥಮ್ ಸಿಂಗ್ 56 ರನ್ ಗಳಿಸಿದರೆ, ಮೊಹಮ್ಮದ್ ಸೈಫ್ 45 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಹೆಚ್ಚಿನ ರನ್ ಗಳಿಸುವಲ್ಲಿ ವಿಫಲವಾದರು.
ವಾಸುಕಿ ಕೌಶಿಕ್ ಮತ್ತು ಹಾರ್ದಿಕ್ ರಾಜ್ ತಲಾ 3 ವಿಕೆಟ್ ಪಡೆದುಕೊಂಡರು. ವಿಜಯ್ ಕುಮಾರ್ ವೈಶಾಖ್ ಮತ್ತು ವಿಧ್ವತ್ ಕಾವೇರಪ್ಪ ತಲಾ ಎರಡು ವಿಕೆಟ್ ಪಡೆದುಕೊಂಡರು.
ಕರ್ನಾಟಕ ಬ್ಯಾಟಿಂಗ್ ವಿಫಲ
ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಕೂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕರಾದ ರವಿಕುಮಾರ್ ಸಮರ್ಥ್ 22 ರನ್ ಗಳಿಸಿದರೆ, ಡೇಗಾ ನಿಶ್ಚಲ್ 20 ರನ್, ಅನೀಶ್ ಕೆವಿ 27 ರನ್ ಗಳಿಸಿದರು. ಮನೀಶ್ ಪಾಂಡೆ 18 ರನ್ ಗಳಿಸಿದರೆ, ಹಾರ್ದಿಕ್ ರಾಜ್ 1 ರನ್ ಗಳಿಸಿ ಔಟಾದರು. ನಾಯಕ ನಿಕಿನ್ ಜೋಸ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ಕಿಶನ್ ಬೆದರೆ ಮಾತ್ರ ಔಟಾಗದೆ 2 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಆಕಾಶ್ ಪಾಂಡೆ 3 ವಿಕೆಟ್ ಪಡೆದರೆ, ಅಯಾನ್ ಚೌಧರಿ 2 ವಿಕೆಟ್ ಪಡೆದರು. ಹಿಮಾಂಶು ಸಂಘ್ವಾನ್ 1 ವಿಕೆಟ್ ಪಡೆದರು.
ಎರಡನೇ ದಿನ ರನ್ ಗಳಿಸಲು ಮತ್ತಷ್ಟು ಕಷ್ಟವಾಗಲಿದ್ದು ಕರ್ನಾಟಕದ ಬ್ಯಾಟರ್ ಗಳಿಗೆ ನಿಜವಾದ ಸವಾಲು ಎದುರಿದ. ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆದುಕೊಂಡರೆ ಮಾತ್ರ ಕರ್ನಾಟಕ ಈ ಪಂದ್ಯ ಗೆಲ್ಲುವ ಬಗ್ಗೆ ಯೋಚಿಸಬಹುದು.
ನಾಯಕ ಮಯಾಂಕ್ ಅಗರ್ವಾಲ್ ಅನಾರೋಗ್ಯದ ಕಾರಣ ಈ ಪಂದ್ಯವನ್ನು ತಪ್ಪಿಸಿಕೊಂಡಿದ್ದು, ನಿಕಿನ್ ಜೋಸ್ ನಾಯಕತ್ವ ವಹಿಸಿಕೊಂಡಿದ್ದಾರೆ.












Click it and Unblock the Notifications