RCB: ರಜತ್ ಪಟಿದಾರ್ ಭರ್ಜರಿ ಶತಕ; ಆರ್ಸಿಬಿ ತಂಡದಲ್ಲಿ ಸ್ಥಾನ ಫಿಕ್ಸ್!
ಐಪಿಎಲ್ ರೆಟೆನ್ಷನ್ಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 31ರಂದು ಸಂಜೆ 4.30 ರ ನಂತರ ಎಲ್ಲಾ ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಯಾವ ತಂಡ ಯಾರನ್ನು ಉಳಿಸಿಕೊಳ್ಳುತ್ತದೆ, ಬಿಡುಗಡೆ ಮಾಡುತ್ತದೆ. ಯಾರು ಎಷ್ಟು ಕೋಟಿ ಪಡೆಯಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಯಾರನ್ನು ಉಳಿಸಿಕೊಳ್ಳುತ್ತದೆ ಎನ್ನುವ ಕುತೂಹಲ ಇದ್ದು, ಇದೀಗ ತಂಡದ ಪ್ರಮುಖ ಬ್ಯಾಟರ್ ಭರ್ಜರಿ ಶತಕ ಸಿಡಿಸುವ ಮೂಲಕ ಸಂದೇಶ ರವಾನಿಸಿದ್ದಾರೆ.
ಆರ್ ಸಿಬಿ ತಂಡದ ಭರವಸೆಯ ಬ್ಯಾಟರ್ ರಜತ್ ಪಟಿದಾರ್ ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಫ್ರಾಂಚೈಸಿಯ ಭರವಸೆ ಹೆಚ್ಚಿಸಿದ್ದಾರೆ. ಕಳೆದ ಐಪಿಎಲ್ನಲ್ಲಿ ಆರ್ ಸಿಬಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಜತ್ ಪಟಿದಾರ್ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಅದರಲ್ಲೂ ಸ್ಪಿನ್ ಬೌಲರ್ ಗಳಿಗೆ ಭರ್ಜರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಸ್ಫೋಟಕ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಈ ಬಾರಿ ಅವರನ್ನು ಉಳಿಸಿಕೊಳ್ಳಲು ಆರ್ ಸಿಬಿ ಚಿಂತಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶದ ಪರ ಆಡುವ ಅವರು, ಟೆಸ್ಟ್ ಕ್ರಿಕೆಟ್ನಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. 68 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಹರಿಯಾಣ ವಿರುದ್ಧದ ರಣಜಿ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಜತ್ ಪಟಿದಾರ್ ಎರಡನೇ ಇನ್ನಿಂಗ್ಸ್ನಲ್ಲಿ 102 ಎಸೆತಗಳಲ್ಲಿ 159 ರನ್ ಗಳಿಸಿದರು. ಅವರ ಈ ಭರ್ಜರಿ ಇನ್ನಿಂಗ್ಸ್ನಲ್ಲಿ 13 ಬೌಂಡರಿ, 6 ಸಿಕ್ಸರ್ ಕೂಡ ಇದ್ದವು.
ಐದನೇ ವೇಗದ ಶತಕ
ರಣಜಿ ಟ್ರೋಫಿ ಇತಿಹಾಸದಲ್ಲಿ ಇದು ಐದನೇ ವೇಗದ ಶತಕವಾಗಿದೆ. 2015ರಲ್ಲಿ ಮಧ್ಯಪ್ರದೇಶದ ಬ್ಯಾಟರ್ ನಮನ್ ಓಜಾ ಕರ್ನಾಟಕದ ವಿರುದ್ಧ 69 ಎಸೆತಗಳಲ್ಲಿ ಶತಕ ಗಳಿಸಿದ್ದ ದಾಖಲೆಯನ್ನು ರಜತ್ ಪಟಿದಾರ್ ಹಿಂದಿಕ್ಕಿದರು. 2016ರಲ್ಲಿ ಜಾರ್ಖಂಡ್ ವಿರುದ್ಧ 48 ಎಸೆತಗಳಲ್ಲಿ ಶತಕ ಸಿಡಿಸಿದ ರಿಷಭ್ ಪಂತ್ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. 1990ರಲ್ಲಿ ಹರಿಯಾಣ ವಿರುದ್ಧ ಶಕ್ತಿ ಸಿಂಗ್ ಅವರ 45 ಎಸೆತಗಳಲ್ಲಿ ಶತಕ ಗಳಿಸಿದ್ದರೂ, ಅದರ ಬಗ್ಗೆ ಅಧಿಕೃತ ದಾಖಲೆ ಇಲ್ಲದ ಕಾರಣ ಅದನ್ನು ಪರಿಗಣಿಸಿಲ್ಲ.
ರಜತ್ ಪಡಿದಾರ್ ಅವರ ಭರ್ಜರಿ ಶತಕದ ನಡುವೆ ಮಧ್ಯಪ್ರದೇಶ ಹರಿಯಾಣ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದ ರಜತ್ ಪಟಿದಾರ್ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ, ರಜತ್ ಪಟಿದಾರ್, ವಿಲ್ ಜ್ಯಾಕ್ಸ್ ಮತ್ತು ಯಶ್ ದಯಾಳ್ರನ್ನು ಮಾತ್ರ ಆರ್ ಸಿಬಿ ಉಳಿಸಿಕೊಳ್ಳುತ್ತಿದೆ ಎನ್ನಲಾಗಿದೆ.












Click it and Unblock the Notifications