ವಿಶ್ವಕಪ್ಗೆ ರಿಷಬ್ ಪಂತ್ ಆಯ್ಕೆ: ಸ್ಪಷ್ಟನೆ ನೀಡಿದ ರಾಹುಲ್ ದ್ರಾವಿಡ್
ಟಿ20 ವಿಶ್ವಕಪ್ ಪಂದ್ಯಾವಳಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಯ್ಕೆ ಬಗ್ಗೆ ತೀವ್ರ ಕುತೂಹಲ ಎದುರಾಗಿದೆ. ಅದರಲ್ಲೂ ತಂಡದಲ್ಲಿ ಯಾರು ಆಡಬೇಕು, ಬೇಡ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಐಪಿಎಲ್ನಲ್ಲಿ ಪ್ರಮುಖ ಆಟಗಾರರ ವೈಫಲ್ಯ, ಯುವ ಕ್ರಿಕೆಟಿಗರ ಭರ್ಜರಿ ಪ್ರದರ್ಶನ, ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಆಟಗಾರರ ಪ್ರದರ್ಶನ ವಿಶ್ವಕಪ್ ತಂಡಕ್ಕೆ ಆಟಗಾರರ ಆಯ್ಕೆಯಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಆದರೆ ಈಗ ರಿಷಬ್ ಪಂತ್ ವಿಚಾರದಲ್ಲಿ ಚರ್ಚೆ ಜೋರಾಗಿದೆ.
'ಬೆತ್ತಲೆಗೊಳಿಸಿ ಬಡಿದರು'- ಕಿಡ್ನಾಪ್ ಘಟನೆ ನೆನಪಿಸಿಕೊಂಡ ಮಾಜಿ ಕ್ರಿಕೆಟಿಗ ಸ್ಟುವರ್ಟ್
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾರತ ತಂಡದ ನಾಯಕನಾಗಿದ್ದು ರಿಷಬ್ ಪಂತ್. ಕೊನೆಯ ಮಳೆಯಿಂದ ಪಂದ್ಯ ರದ್ದಾದ ಸರಣಿ 2-2 ಸಮಬಲದಲ್ಲಿ ಕೊನೆಗೊಂಡಿದೆ. ಸರಣಿಯಲ್ಲಿ ನಾಯಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ಟೀಕೆಗೆ ಗುರಿಯಾಗಿದೆ. ರಿಷಬ್ ಬದಲಿಗೆ ವಿಶ್ವಕಪ್ ಟೂರ್ನಿಯಲ್ಲಿ ಬೇರೆ ಆಟಗಾರರಿಗೆ ಅವಕಾಶ ನೀಡುವಂತೆ ಹೇಳಲಾಗುತ್ತಿದೆ. ಇದೆಲ್ಲ ಚರ್ಚೆ ನಡುವೆಯೇ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ರಿಷಬ್ ಪಂತ್ ಕುರಿತು ಮಾತನಾಡಿದ್ದಾರೆ.
ಪಂತ್ ಮೇಲೆ ನಂಬಿಕೆ ಇದೆ ಎಂದ ದ್ರಾವಿಡ್
ರಿಷಬ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಹೇಳಿಕೆ ನೀಡಿರುವ ದ್ರಾವಿಡ್, ಒಂದು ಸರಣಿಯಿಂದ ಆಟಗಾರನ ಸಾಮರ್ಥ್ಯ ಅಳೆಯಲಾಗದು ಎಂದಿದ್ದಾರೆ. ರಿಷಬ್ ಭಾರತದ ತಂಡದ ಪ್ರಮುಖ ಆಟಗಾರ ಎಂದಿರುವ ದ್ರಾವಿಡ್, ಅವರನ್ನು ವಿಶ್ವಕಪ್ ಟೂರ್ನಿಯಿಂದ ಹೊರಗಿಡುವು ಉತ್ತಮ ನಿರ್ಧಾರವಲ್ಲ ಎಂದು ತಿಳಿಸಿದ್ದಾರೆ.
ಅದರಲ್ಲೀ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿರುವುದರಿಂದ ತಂಡಕ್ಕೆ ರಿಷಬ್ ಮುಖ್ಯ ಎಂದಿದ್ದಾರೆ. ಎಡಗೈ ಸ್ಫೋಟಕ ಬ್ಯಾಟ್ಸ್ಮನ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಧಾರ ಎಂದು ತಿಳಿಸಿದ್ದಾರೆ. ಭಾರತ ಟಿ20 ತಂಡಕ್ಕೆ ರಿಷಬ್ನಂತಹ ಆಟಗಾರನ ಅಗತ್ಯವಿದೆ ಎಂದು ಹೇಳಿದ್ದಾರೆ.
ಎಂ. ಎಸ್. ಧೋನಿ ಸಾಧನೆ ಸರಿಗಟ್ಟಿದ ದಿನೇಶ್ ಕಾರ್ತಿಕ್
ಫಾರ್ಮ್ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ದ್ರಾವಿಡ್
"ನಾನು ವಿಮರ್ಶಾತ್ಮಕವಾಗಿರಲು ಬಯಸುವುದಿಲ್ಲ. ಮಧ್ಯಮ ಓವರ್ಗಳಲ್ಲಿ, ಆಕ್ರಮಣಕಾರಿ ಕ್ರಿಕೆಟ್ ಆಡುವ ಅಗತ್ಯವಿದೆ. ಕೆಲವೊಮ್ಮೆ ಎರಡು ಅಥವಾ ಮೂರು ಪಂದ್ಯಗಳ ಆಧಾರದ ಮೇಲೆ ನಿರ್ಣಯಿಸುವುದು ತುಂಬಾ ಕಷ್ಟ," ದ್ರಾವಿಡ್ ತಿಳಿಸಿದ್ದಾರೆ.
2022ರ ಐಪಿಎಲ್ ಟೂರ್ನಿಯಲ್ಲಿ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ 340 ರನ್ ಗಳಿಸಿದ್ದಾರೆ, ಪಂತ್ ಸ್ಟ್ರೈಕ್ ರೇಟ್ 158ರ ಮೇಲಿದೆ ಬಗ್ಗೆ ದ್ರಾವಿಡ್ ಸಮರ್ಥನೆ ನೀಡಿದ್ದಾರೆ. ಇತರೆ ಟೂರ್ನಿಗಳಲ್ಲೂ ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಿಷಬ್ ಫಾರ್ಮ್ಗೆ ಮರಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ದ. ಆಫ್ರಿಕಾ ವಿರುದ್ಧ ಕಳಪೆ ಪ್ರದರ್ಶನ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಮಳೆಯಿಂದಾಗಿ ಸರಣಿಯ ಕೊನೆಯ ನಿರ್ಣಾಯಕ ಪಂದ್ಯ ರದ್ದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20I ಸರಣಿಯಲ್ಲಿ ಭಾರತವನ್ನು 2-2 ಸಮಬಲ ಸಾಧಿಸಿದೆ. ಸರಣಿಯಲ್ಲಿ ಭಾರತ ತಂಡದ ನಾಯಕನಾಗಿದ್ದ ರಿಷಬ್ ಪಂತ್ ಐದು ಇನ್ನಿಂಗ್ಸ್ಗಳಲ್ಲಿ ಕೇವಲ 58 ರನ್ ಗಳಿಸಿದ್ದಾರೆ. ಪಂತ್ ಸ್ಟ್ರೈಕ್ ರೇಟ್ ಕೇವಲ 105. ರನ್ ಕಡಿಮೆ ಗಳಿಸಿದರು ಎನ್ನುವುದಕ್ಕಿಂತ ಪಂತ್ ಔಟಾದ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿದೆ.
ಬೆಂಚ್ ಕಾಯಲಿದ್ದಾರ ರಿಷಬ್ ಪಂತ್?
ಅಕ್ಟೋಬರ್-ನವೆಂವರ್ ತಿಂಗಳಲ್ಲಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಕೊಹ್ಲಿ, ರೋಹಿತ್, ಸೂರ್ಯಕುಮಾರ್ , ಬುಮ್ರಾ ಈ ನಾಲ್ವರು ಆಟಗಾರರು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಕೂಡ ತಮ್ಮ ಇತ್ತೀಚಿನ ಪ್ರದರ್ಶನಗಳಿಂದ ಗಮನ ಸೆಳೆದಿದ್ದಾರೆ. ಈ ಆಟಗಾರರೆಲ್ಲ ವಿಶ್ವಕಪ್ ಭಾರತ ತಂಡದಲ್ಲಿ ಆಡುವ ಸಾಧ್ಯತೆಯಿದೆ. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರ ಪ್ರಕಾರ ಪ್ರಸ್ತುತ ನಾಯಕರಾಗಿರುವ ರಿಷಬ್ ಪಂತ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.