ಪಿಟಿ ಉಷಾ ಅಕಾಡೆಮಿಯಲ್ಲಿ ಅತಿಕ್ರಮಣ, ಗೂಂಡಾಗಿರಿ; ಮಹಿಳಾ ಅಥ್ಲೀಟ್ಗಳ ಸುರಕ್ಷತೆಯ ಬಗ್ಗೆ ಕಳವಳ
ದೇಶದ ಕ್ರೀಡಾಪಟುಗಳಿಗೆ ತೊಂದರೆಯಾದಾಗ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ತಮ್ಮ ದೂರು ನೀಡುತ್ತಾರೆ. ಆದರೆ, ಅದೇ ಸಂಸ್ಥೆಯ ಅಧ್ಯಕ್ಷರಿಗೆ ಸಮಸ್ಯೆ ಎದುರಾಗಿದ್ದು, ಪ್ರಕರಣದ ಮಾಹಿತಿ ಇಲ್ಲಿದೆ.
ನವದೆಹಲಿ, ಫೆಬ್ರವರಿ. 05: ಪ್ರಸಿದ್ಧ ಅಥ್ಲೀಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಕೇರಳದ ಬಾಲುಸ್ಸೆರಿಯಲ್ಲಿರುವ ತಮ್ಮ ಅಕಾಡೆಮಿಯಾದ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನಲ್ಲಿ ಅತಿಕ್ರಮಣ ಮತ್ತು ಗೂಂಡಾಗಿರಿ ನಡೆಯುತ್ತಿದೆ ಎಂದು ಫೆಬ್ರವರಿ 4 ರಂದು ಆರೋಪಿಸಿದ್ದಾರೆ.
ಈ ಅತಿಕ್ರಮಣ ಮತ್ತು ಗೂಂಡಾಗಿರಿಯ ಸಮಸ್ಯೆಯನ್ನು ಪರಿಹರಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.
ಉದ್ಯೋಗ ನೀಡುತ್ತೇನೆ ಎಂದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಬೆಂಗಳೂರಿನಲ್ಲಿ ಟೆಕ್ಕಿ ಬಂಧನ
ಕೇರಳದಲ್ಲಿರುವ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನಲ್ಲಿ ದೇಶಾದ್ಯಂತದ ಸಾವಿರಾರು ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್ನಲ್ಲಿ ತರಬೇತಿ ನೀಡಲಾಗುತ್ತದೆ. ಒಲಂಪಿಕ್ ಕ್ರೀಡಾಕೂಟದಲ್ಲಿ ದೇಶಕ್ಕಾಗಿ ಪದಕ ಬೇಟಿಯಾಡುವ ಅಥ್ಲಿಟ್ಸ್ಗಳನ್ನು ಸಿದ್ಧಗೊಳಿಸುವ ಉದ್ದೇಶದಿಂದ 2002 ರಲ್ಲಿ ಈ ಅಕಾಡೆಮಿಯನ್ನು ಸ್ಥಾಪಿಸಲಾಯಿತು.
ತಮ್ಮ ಅಕಾಡೆಮಿಗೆ ಉಮಟಾಗಿರುವ ತೊಂದರೆಗಳ ಬಗ್ಗೆ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಟಿ ಉಷಾ, ಕಳೆದ ವರ್ಷ ರಾಜ್ಯಸಭಾ ಸದಸ್ಯೆಯಾಗಿ ನಾಮನಿರ್ದೇಶನಗೊಂಡ ನಂತರ ಅತಿಕ್ರಮಣ ಮತ್ತು ಗೂಂಡಾಗಿರಿಯ ಕೃತ್ಯಗಳು ಹೆಚ್ಚಿವೆ ಎಂದು ಆರೋಪಿಸಿದ್ದಾರೆ.
ಮಹಿಳಾ ಕ್ರೀಡಾಪಟುಗಳ ಸುರಕ್ಷತೆಯ ಬಗ್ಗೆ ಕಳವಳ
ಈ ಅತಿಕ್ರಮಣದಿಂದಾಗಿ ತಮ್ಮ ಅಕಾಡೆಮಿಯಲ್ಲಿನ ಮಹಿಳಾ ಕ್ರೀಡಾಪಟುಗಳ ಸುರಕ್ಷತೆಯ ಬಗ್ಗೆ ಪಿಟಿ ಉಷಾ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಕಾಡೆಮಿಯ ಸುತ್ತ ಬೇಲಿ ನಿರ್ಮಿಸಲು ಪ್ರಯತ್ನಿಸಿದ್ದೆವು ಆದರೆ ಹಣಕಾಸಿನ ಅಡಚಣೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ಮಾಜಿ ಒಲಿಂಪಿಯನ್ ತಿಳಿಸಿದ್ದಾರೆ.
ಇತ್ತೀಚೆಗೆ ಕೆಲವರು ಅಕಾಡೆಮಿಗೆ ನುಗ್ಗಿ ಅಕ್ರಮವಾಗಿ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ ಎಂದು ಐಒಎ ಅಧ್ಯಕ್ಷರು ಹೇಳಿಕೆ ನೀಡಿದ ಬಳಿಕ ಪಿಟಿ ಉಷಾ ಈ ಆರೋಪಗಳನ್ನು ಹೊರಹಾಕಿದ್ದಾರೆ. ಕಳೆದ ಬಾರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ ನಂತರ ಅತಿಕ್ರಮಣದಾರರನ್ನು ಅಕಾಡೆಮಿಯಿಂದ ಹೊರಹಾಕಲಾಗಿತ್ತು.
ಅಕಾಡೆಮಿ ಸಂಕೀರ್ಣದಲ್ಲಿ ತ್ಯಾಜ್ಯ ವಿಲೇವಾರಿ
"ಕೆಲವರು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನ ಕಾಂಪೌಂಡ್ಗೆ ನುಗ್ಗಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಅಕಾಡೆಮಿ ಆಡಳಿತವು ಅವರನ್ನು ಪ್ರಶ್ನಿಸಿದ್ದಾಗ ಅವರು ಅನುಚಿತವಾಗಿ ವರ್ತಿಸಿದರು. ತಾವು ಪಣಂಗಾಡ್ ಪಂಚಾಯತ್ನಿಂದ ಅನುಮತಿ ಪಡೆದಿರುವುದಾಗಿ ಹೇಳಿದ್ದರು. ನಾವು ಪೊಲೀಸರಿಗೆ ದೂರು ನೀಡಿದ ನಂತರ ಕೆಲಸ ನಿಲ್ಲಿಸಲಾಯಿತು" ಎಂದು ಪಿಟಿ ಉಷಾ ತಿಳಿಸಿದ್ದಾರೆ.
ಅಕಾಡೆಮಿ ಸುತ್ತಮತ್ತ, ಅಕಾಡೆಮಿ ಒಳಗೆ ಮಾದಕ ವ್ಯಸನಿಗಳು ಮತ್ತು ಜೋಡಿಗಳುಅಲೆದಾಡುತ್ತಾರೆ ಮತ್ತು ಬಾಲುಸ್ಸೆರಿಯ 30 ಎಕರೆ ಸಂಕೀರ್ಣದಲ್ಲಿ ತ್ಯಾಜ್ಯವನ್ನು ಸುರಿಯುತ್ತಾರೆ ಎಂದು ಉಷಾ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಬಗೆಹರಿಸುವಂತೆ ಪಿಣರಾಯಿ ವಿಜಯನ್ಗೆ ಮನವಿ
"ಮಾದಕ ವ್ಯಸನಿಗಳು, ಜೊಡಿಗಳು ಸೇರಿದಂತೆ ಜನರು ರಾತ್ರಿಯಲ್ಲಿ ಕಾಂಪೌಂಡ್ಗೆ ನುಗ್ಗುತ್ತಾರೆ. ಕೆಲವರು ತ್ಯಾಜ್ಯವನ್ನು ಒಳಚರಂಡಿಗೆ ಸುರಿಯುತ್ತಾರೆ. ನಮ್ಮನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ನಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ನಾವು ಖಚಿತಪಡಿಸಿಕೊಳ್ಳಬೇಕು. ಕೇರಳ ಸಿಎಂ ಪಿಣರಾಯಿ ವಿಜಯನ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಮನವಿ ಮಾಡಿದ್ದಾರೆ.
ಸಿಎಂ, ಕೆಎಸ್ಐಡಿಸಿ, ಅಧಿಕಾರಿಗಳ ಸಹಾಯ ಕೇಳಿದ ಪಿಟಿ ಉಷಾ
"ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು (ಕೆಎಸ್ಐಡಿಸಿ) ಅಕಾಡೆಮಿಗಾಗಿ ಭೂಮಿಯನ್ನು ಗುತ್ತಿಗೆಗೆ ನೀಡಿದೆ. ಹಾಗಾಗಿ ಅಲ್ಲಿರುವ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿವಹಿಸಲು ನಾನು ಎಲ್ಲಾ ಪಾಲುದಾರರನ್ನು ಅಕಾಡೆಮಿ ಮಂಡಳಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದೇನೆ. ಕೆಎಸ್ಐಡಿಸಿ ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಮಧ್ಯಪ್ರವೇಶಿಸಿ ಅಥ್ಲೆಟಿಕ್ಸ್ ಶಾಲೆ ಮೇಲೆ ನಡೆಯುತ್ತಿರುವ ಈ ರೀತಿಯ ಅತಿಕ್ರಮಣವನ್ನು ತಕ್ಷಣ ನಿಲ್ಲಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಯಾವಾಗಲೂ ಈ ಸಮಸ್ಯೆ ಇದ್ದೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿದೆ" ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಪಿಟಿ ಉಷಾ ಅವರು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕುಸ್ತಿ ಒಕ್ಕೂಟದಲ್ಲಿ ಕಿರುಕುಳ, ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಾಗಲು ಕುಸ್ತಿಪಟುಗಳು ಪಿಟಿ ಉಷಾ ಅವರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದರು.