RCB vs MI: ಚಿನ್ನಸ್ವಾಮಿ ಅಂಗಳಕ್ಕೆ ಪಂಜುರ್ಲಿ ವೇಷ ಧರಿಸಿ ಬಂದ ಅಭಿಮಾನಿ: ವ್ಯಾಪಕ ಆಕ್ರೋಶ
ಮೂರು ವರ್ಷಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪಂದ್ಯವನ್ನಾಡಿದೆ. ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಮೂರು ವರ್ಷಗಳ ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದಕ್ಕೆ ತಕ್ಕಂತೆ ಭಾನುವಾರ ಚಿನ್ನಸ್ವಾಮಿ ಅಂಗಳದಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸಮಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷ ಹಾಕಿಕೊಂಡು ಬಂದಿದ್ದಾರೆ. ತನ್ನ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲು, ನೆರೆದವರ ಗಮನ ಸೆಳೆಯಲು ಪಂಜುರ್ಲಿ ವೇಷ ಹಾಕಿದ್ದಾನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಫೋಟೊವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೈವದ ವೇಷ ಹಾಕಿದ್ದನ್ನು ನೋಡಿರುವ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ದೈವದ ವೇಷವನ್ನು ಹಾಕುವ ಮೂಲಕ ತುಳುನಾಡಿನ ದೈವಗಳಿಗೆ ಅವಮಾನ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. ಆರ್ ಸಿಬಿ ಫ್ರಾಂಚೈಸಿ ಈ ರೀತಿಯ ಚಿತ್ರಗಳನ್ನು ಹಂಚಿಕೊಳ್ಳಬಾರದು ಎಂದು ಹೇಳಿರುವ ಹಲವರು, ಈ ರೀತಿಯ ವೇಷ ಹಾಕಿಕೊಂಡು ಬಂದವರಿಗೆ ಕ್ರೀಡಾಂಗಣದ ಒಳಗಡೆ ಪ್ರವೇಶ ನೀಡದಂತೆ ಆಗ್ರಹಿಸಿದ್ದಾರೆ.
Good Morning, 12th Man Army! Did you wake up with a big smile? 😬
— Royal Challengers Bangalore (@RCBTweets) April 3, 2023
WHAT A TURN OUT and WHAT A MATCH last night! Thank you! ❤️#PlayBold #ನಮ್ಮRCB #IPL2023 #RCBvMI pic.twitter.com/dnXMdNmUMJ
ಕಾಂತಾರ ಚಿತ್ರದ ಬಳಿಕ ಜನಪ್ರಿಯತೆ
ಕಾಂತಾರ ಚಲನಚಿತ್ರ ಬಿಡುಗಡೆಗೆ ಮುನ್ನ ತುಳುನಾಡಿನ ದೈವಗಳ ಬಗ್ಗೆ ಹೊರಗಿನ ಜನರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ, ಚಿತ್ರ ಬಿಡುಗಡೆಯಾದ ಬಳಿಕ ಪಂಜುರ್ಲಿ, ಕ್ಷೇತ್ರಪಾಲ ಎನ್ನುವ ದೈವಗಳ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಅಲ್ಲದೆ, ಹಲವು ಮಂದಿ ಪಂಜುರ್ಲಿ ವೇಷದಲ್ಲಿ ರೀಲ್ಸ್ ಕೂಡ ಮಾಡುವ ಮೂಲಕ ವಿವಾದ ಮಾಡಿಕೊಂಡರು. ಹುಡುಗಿಯೊಬ್ಬಳು ಪಂಜುರ್ಲಿ ವೇಷ ಹಾಕಿ ರೀಲ್ಸ್ ಮಾಡಿ ವಿರೋಧ ವ್ಯಕ್ತವಾದ ನಂತರ ಧರ್ಮಸ್ಥಳಕ್ಕೆ ತೆರಳಿ ಕ್ಷಮೆ ಕೂಡ ಕೇಳಿದ್ದರು.
ಕಾಂತಾರ ಜನಪ್ರಿಯತಯನ್ನೇ ದುರುಪಯೋಗಪಡಿಸಿಕೊಂಡಿರುವ ಹಲವು ಜನ ಬೆಂಗಳೂರು, ಮೈಸೂರಿನ ಕೆಲವು ಭಾಗಗಳಲ್ಲಿ ತುಳುನಾಡಿನ ದೇವರಿಗಳಿಗೆ ದೇವಸ್ಥಾನ ಕಟ್ಟುವ ಹೆಸರಿನಲ್ಲಿ ಹಣ ಸಂಗ್ರಹಿಸಲು ಮುಂದಾಗಿದ್ದರು. ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಇದಕ್ಕೆ ಕಡಿವಾಣ ಬಿದ್ದಿದೆ. ಈಗ ಯುವಕನೊಬ್ಬ ಮಾಡಿರುವ ಎಡವಟ್ಟಿನಿಂದ ಮತ್ತೆ ಪಂಜುರ್ಲಿ ದೈವದ ಆರಾಧಕರು ಕೋಪಗೊಂಡಿದ್ದಾರೆ.
ಕರಾವಳಿ ಭಾಗದಲ್ಲಿ ಜನರ ಆರಾಧ್ಯ ದೈವಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ದೈವಗಳ ಬಗ್ಗೆ ಅಲ್ಲಿನ ಜನ ಸಾಕಷ್ಟು ಗೌರವ, ಭಕ್ತಿ ಭಾವನೆ ಹೊಂದಿದ್ದಾರೆ. ಮೋಜಿಗಾಗಿ ಅಂತಹ ದೈವಗಳ ವೇಷ ಹಾಕುವುದು ಅಲ್ಲಿನ ಜನರ ನಂಬಿಕೆಗಳಿಗೆ ಮಾಡುವ ಅವಮಾನ ಎಂದು ಹಲವರು ಹೇಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಈ ರೀತಿ ವೇಷ ಹಾಕಿ ಬರುವವರನ್ನು ಕ್ರೀಡಾಂಗಣದ ಒಳಕ್ಕೆ ಪ್ರವೇಶ ನೀಡದಂತೆ ಒತ್ತಾಯ ಮಾಡಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ ಆರ್ ಸಿಬಿ ತನ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಮೂರು ವರ್ಷಗಳ ಬಳಿಕ ತವರಿನ ಅಭಿಮಾನಿಗಳಿಗೆ ಮನರಂಜನೆ ರಸದೌತಣವನ್ನೇ ಉಣಬಡಿಸಿದ್ದಾರೆ. ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಮಿಂಚಿದರು, ನಾಯಕ ಫಾಫ್ ಡು ಪ್ಲೆಸಿಸ್ ಕೂಡ 43 ಎಸೆತಗಳಲ್ಲಿ 79 ರನ್ ಗಳಿಸಿ ಮಿಂಚಿದರು. ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 10 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.












Click it and Unblock the Notifications