ಏಷ್ಯಾಕಪ್ನಲ್ಲಿ ಕುಲ್-ಚಾ ಜೋಡಿಗೆ ಬ್ರೇಕ್: ಚಾಹಲ್ ಬದಲಿಗೆ ಅಕ್ಷರ್ ಪಟೇಲ್ ಆಯ್ಕೆ ಮಾಡಿದ್ದಕ್ಕೆ ರೋಹಿತ್ ಕೊಟ್ಟ ಕಾರಣ ಇದು
ಆಗಸ್ಟ್ 30ರಿಂದ ಏಷ್ಯಾಕಪ್ 2023 ಪಂದ್ಯಾವಳಿ ಆರಂಭವಾಗಲಿದ್ದು, ಸೋಮವಾರ ಭಾರತ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸಂಜು ಸ್ಯಾಮ್ಸನ್ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೆಎಲ್ ರಾಹುಲ್, ಬುಮ್ರಾ, ಅಯ್ಯರ್ ತಂಡಕ್ಕೆ ಮರಳಿದ್ದಾರೆ.
ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಯುಜುವೇಂದ್ರ ಚಾಹಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಕುಲ್-ಚಾ ಎಂದೇ ಪ್ರಸಿದ್ಧವಾಗಿದ್ದ ಜೋಡಿಯನ್ನು ಏಷ್ಯಾಕಪ್ನಲ್ಲಿ ನೋಡಲು ಸಾಧ್ಯವಿಲ್ಲ. ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಚಾಹಲ್ ಬದಲಾಗಿ ಅಕ್ಷರ್ ಪಟೇಲ್ಗೆ ಮಣೆ ಹಾಕಲಾಗಿದೆ.

ರೋಹಿತ್ ಶರ್ಮಾ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ ಕಾರಣ ಚಾಹಲ್ಗೆ ಅವಕಾಶ ತಪ್ಪಿದೆ. 2023 ರಲ್ಲಿ, ಅಕ್ಷರ್ ಪಟೇಲ್ ಈವರೆಗೆ ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಮೂರು ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿ ಕೂಡ 64 ರನ್ ಗಳಿಸಿದ್ದಾರೆ. ಅಕ್ಷರ್ ಪಟೇಲ್ ಐಪಿಎಲ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ತಂಡಕ್ಕೆ ಆಯ್ಕೆಯಾಗಲು ಸಹಾಯ ಮಾಡಿದೆ.
ಜಡೇಜಾ ತಂಡದಲ್ಲಿ ಆಲ್ರೌಂಡರ್ ಆಗಿರುವುದರಿಂದ ಏಷ್ಯಾಕಪ್ ತಂಡಕ್ಕೆ ಚಹಾಲ್ ಅವರನ್ನು ಸೇರಿಸಿಕೊಳ್ಳಲು ಭಾರತ ಚಿಂತನೆ ನಡೆಸಿತ್ತು, ಆದರೆ ತಂಡದಲ್ಲಿ ಅಸ್ಥಿರ ರನ್ನಿಂದಾಗಿ ಅವರನ್ನು ಕೈಬಿಡಲಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಚಾಹಲ್ 2023ರಲ್ಲಿ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು ಮೂರು ವಿಕೆಟ್ ಪಡೆದಿದ್ದಾರೆ.
ಅಗರ್ಕರ್ ಹೇಳಿದ್ದೇನು?
"ಚಾಹಲ್ ಬಗ್ಗೆ ಚರ್ಚಿಸಲಾಗಿದೆ, ಆದರೆ ಕೆಲವೊಮ್ಮೆ ತಂಡದ ಸಮತೋಲನದ ಬಗ್ಗೆ ಯೋಚಿಸಬೇಕಾಗುತ್ತದೆ. ಕುಲದೀಪ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಕ್ಷರ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ, ಆದರೆ ಇಬ್ಬರು ಮಣಿಕಟ್ಟಿನ ಸ್ಪಿನ್ನರ್ಗಳಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಿತ್ತು, ಆದ್ದರಿಂದ ಚಹಾಲ್ ಹೊರಗುಳಿಯಬೇಕಾಯಿತು," ಎಂದು ತಂಡವನ್ನು ಪ್ರಕಟಿಸುವ ಸಂದರ್ಭದಲ್ಲಿ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದರು.
ಕುಲದೀಪ್ ಯಾದವ್ ಉತ್ತಮ ಪ್ರದರ್ಶನ
ಕುಲದೀಪ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ವಿಂಡೀಸ್ ವಿರುದ್ದದ ಮೂರು ಏಕದಿನ ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದು ಮಿಂಚಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಕುಲದೀಪ್ ಉತ್ತಮ ಬೌಲಿಂಗ್ ನಡೆಸಿ ನಾಲ್ಕು ವಿಕೆಟ್ ಕಬಳಿಸಿದ್ದರು. ಅವರ ಸ್ಥಿರ ಪ್ರದರ್ಶನ ತಂಡಕ್ಕೆ ಆಯ್ಕೆಯಾಗಲು ಕಾರಣವಾಗಿದೆ.
ಇದನ್ನು ಹೊರತುಪಡಿಸಿ ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ ಕೃಷ್ಣ ತಂಡಕ್ಕೆ ವಾಪಸಾಗಿದ್ದಾರೆ. ಮೊಹಮ್ಮದ್ ಶಮಿ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
2023ರ ಏಷ್ಯಾಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ. ಸ್ಟ್ಯಾಂಡ್-ಬೈ ಆಟಗಾರ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)












Click it and Unblock the Notifications