RCB vs CSK: ಧೋನಿ ಹೊಡೆದ ಆ ಸಿಕ್ಸ್ ಸಿಎಸ್ಕೆ ಸೋಲಿಗೆ ಕಾರಣವಾಯ್ತ? ದಿನೇಶ್ ಕಾರ್ತಿಕ್ ಹೇಳಿದ್ದೇನು?
ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಪಂದ್ಯದಲ್ಲಿ ಆರ್ಸಿಬಿ ಸಿಎಸ್ಕೆ ವಿರುದ್ಧ 27 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಇದು ಅತ್ಯುತ್ತಮ ಪಂದ್ಯಗಳಲ್ಲಿ ಒಂದು ಎಂದು ಅಭಿಮಾನಿಗಳು, ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು. ಸಿಎಸ್ಕೆ ಪ್ಲೇಆಫ್ಗೆ ಅರ್ಹತೆ ಪಡೆಯಲು 201 ರನ್ ಗಳಿಸಿದ್ದರೂ ಸಾಕಿತ್ತು, ಪಂದ್ಯ ಸೋತರೂ ಪ್ಲೇಆಫ್ಗೆ ಅವಕಾಶ ಪಡೆಯುತ್ತಿದ್ದರು.

ಆದರೆ, ಅದ್ಭುತ ಸಾಂಘಿಕ ಪ್ರದರ್ಶನ ನೀಡಿದ ಆರ್ ಸಿಬಿ ಸಿಎಸ್ಕೆ ತಂಡವನ್ನು 191 ರನ್ಗಳಿಗೆ ಕಟ್ಟಿಹಾಕುವ ಮೂಲಕ ಪಂದ್ಯವನ್ನು ಗೆದ್ದಿದ್ದು ಮಾತ್ರವಲ್ಲದೆ, ಪ್ಲೇಆಫ್ಗೂ ಪ್ರವೇಶ ಪಡೆದುಕೊಂಡಿತು.
ಎಂಎಸ್ ಧೋನಿ ಸಿಕ್ಸ್ ಸೋಲಿಗೆ ಕಾರಣ!
ಸಿಎಸ್ಕೆ ಪ್ಲೇಆಫ್ಗೆ ಪ್ರವೇಶ ಪಡೆಯಲು ಕೊನೆಯ ಓವರ್ ನಲ್ಲಿ 17 ರನ್ ಬೇಕಿತ್ತು, ಯಶ್ ದಯಾಳ್ ಮೊದಲ ಎಸೆತವನ್ನೇ ಎಂಎಸ್ ಧೋನಿ ಸಿಕ್ಸರ್ ಬಾರಿಸುವ ಮೂಲಕ ಆರ್ ಸಿಬಿ ತಂಡದ ಆಸೆಯನ್ನೇ ಕಸಿದುಕೊಂಡಿದ್ದರು.
ಧೋನಿ ಹೊಡೆದ ಆ ಸಿಕ್ಸ್ ಮೈದಾನದಿಂದ ಆಚೆ ಹೋಯಿತು, ಬಳಿಕ ಹೊಸ ಚೆಂಡನ್ನು ಬೌಲರ್ ಗೆ ನೀಡಲಾಯಿತು. ಮುಂದಿನ ಎಸೆತದಲ್ಲೇ ಯಶ್ ದಯಾಳ್ ಧೋನಿ ಅವರನ್ನು ಔಟ್ ಮಾಡುವ ಮೂಲಕ ಆರ್ ಸಿಬಿಗೆ ಮರುಜೀವ ನೀಡಿದರು.
ಬಳಿಕ ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್ ನೀಡುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಪಂದ್ಯದ ಬಳಿಕ ಆರ್ ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಂಎಸ್ ಧೋನಿ ಅಷ್ಟು ದೂರ ಸಿಕ್ಸರ್ ಬಾರಿಸಿದ್ದು ನಮಗೆ ಸಹಾಯವಾಯಿತು ಎಂದರು.
ಮಂಜು ಬೀಳುತ್ತಿದ್ದ ಕಾರಣ ಚೆಂಡು ಒದ್ದೆಯಾಗಿದ್ದು, ಬೌಲರ್ ಗಳು ಬೇಕಾದಂತೆ ಬೌಲರ್ ಮಾಡಲು ಕಷ್ಟಪಡುತ್ತಿದ್ದರು. ಆದರೆ ಧೋನಿ ಮೈದಾನದಿಂದ ಹೊರಗೆ ಚಂಡನ್ನು ಕಳುಹಿಸಿದ ಕಾರಣ ಬೇರೆ ಬಾಲ್ ನೀಡಲಾಯಿತು. ಅದರಿಂದ ಯಶ್ ದಯಾಳ್ ಅವರು ತಾವಂದುಕೊಂಡಂತೆ ಬೌಲಿಂಗ್ ಮಾಡಲು ಸಾಧ್ಯವಾಯಿತು ಅಂದಿದ್ದಾರೆ.
ಏನೇ ಇರಲಿ, ಇಲ್ಲಿ ಯಶ್ ದಯಾಳ್ ಅವರ ಬೌಲಿಂಗ್ ಮಾತ್ರ ಅಮೋಘವಾಗಿತ್ತು. ಮೊದಲ ಎಸೆತ ಸಿಕ್ಸರ್ ಹೊಡೆಸಿಕೊಂಡ ನಂತರ, ಕ್ರೀಸ್ನಲ್ಲಿ ಧೋನಿ ಇದ್ದಾಗಲೂ ಯಶ್ ದಯಾಳ್ ಅದ್ಭುತ ಬೌಲಿಂಗ್ ಮಾಡಿದರು. ಯಶ್ ಆಟಕ್ಕೆ ಆರ್ ಸಿಬಿ ಅಭಿಮಾನಿಗಳು ಮನಸೋತಿದ್ದು, ಹೊಸ ಹೀರೋ ಎಂದು ಕೊಂಡಾಡಿದ್ದಾರೆ.












Click it and Unblock the Notifications