Mitchell Marsh: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್ ವಿರುದ್ಧ ದೂರು ದಾಖಲು
ಏಕದಿನ ವಿಶ್ವಕಪ್ ಫೈನಲ್ ಮುಗಿದು ಒಂದು ವಾರವಾಗುತ್ತಿದೆ, ಆದರೂ ಭಾರತ ತಂಡದ ಅಭಿಮಾನಿಗಳಿಗೆ ಈ ಸೋಲನ್ನು ಮರೆಯಲು ಆಗುತ್ತಿಲ್ಲ. 6ನೇ ಬಾರಿ ವಿಶ್ವಕಪ್ ಗೆದ್ದ ಬಳಿಕ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತಿದ್ದ ಫೋಟೊ ವೈರಲ್ ಆಗಿತ್ತು.
ಪ್ಯಾಟ್ ಕಮ್ಮಿನ್ಸ್ ಟ್ರೋಫಿಯ ಮೇಲೆ ಮಿಚೆಲ್ ಮಾರ್ಷ್ ಪಾದ ಇಟ್ಟು ಕೂತಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಶಸ್ತಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮಿಚೆಲ್ ಮಾರ್ಷ್ ಅವರ ವರ್ತನೆಗೆ ಭಾರತದ ಅಭಿಮಾನಿಗಳು ಕಿಡಿ ಕಾರಿದ್ದರು. ಅವರ ವರ್ತನೆ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದವು. ಕಪ್ ಗೆದ್ದ ಬಳಿಕ ಏನು ಬೇಕಾದರು ಮಾಡಿಕೊಳ್ಳಲಿ ಎಂದು ಕೆಲವು ಹೇಳಿದರೆ, ಅದು ವಿಶ್ವಕಪ್ ಆಗಿದ್ದು ಅದಕ್ಕೆ ಬೆಲೆ ಕೊಡಬೇಕು ಎಂದು ಹಲವರು ವಾದಿಸಿದ್ದರು.
ಇಷ್ಟೆಲ್ಲಾ ಪರ ವಿರೋಧದ ನಡುವೆ ಮಿಚೆಲ್ ಮಾರ್ಷ್ ವಿರುದ್ಧ ದೂರು ನೀಡಲಾಗಿದ್ದು, ಅಲಿಘರ್ನ ಆರ್ಟಿಐ ಕಾರ್ಯಕರ್ತ ಪಂಡಿತ್ ಕೇಶವ್ ಮಿಚೆಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ, ವಿಶ್ವಕಪ್ ಟ್ರೋಫಿ ಮಿಚೆಲ್ ಮಾರ್ಷ್ ಕಾಲಿಟ್ಟುಕೊಂಡಿದ್ದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.
ಪಂಡಿತ್ ಕೇಶವ್ ಅವರು ದೂರಿನ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿ ಆಸ್ಟ್ರೇಲಿಯಾ ಆಟಗಾರನಿಗೆ ಭಾರತದಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಮೊಹಮ್ಮದ್ ಶಮಿ ಅಸಮಾಧಾನ
ಐಸಿಸಿ ವಿಶ್ವಕಪ್ 2023 ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮೊಹಮ್ಮದ್ ಶಮಿ ಮಾರ್ಷ್ ಅವರ ಕ್ರಮಗಳಿಗೆ ಪ್ರತಿಕ್ರಿಯಿಸಿದ್ದಾರೆ, ಮಿಚೆಲ್ ಮಾರ್ಷ್ ಅವರ ವರ್ತನೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಮಿ, "ನನಗೆ ನೋವಾಗಿದೆ. ವಿಶ್ವದ ಎಲ್ಲಾ ತಂಡಗಳು ಹೋರಾಡುವ ಟ್ರೋಫಿ, ನೀವು ನಿಮ್ಮ ತಲೆಯ ಮೇಲೆ ಎತ್ತಲು ಬಯಸುವ ಟ್ರೋಫಿ, ಆ ಟ್ರೋಫಿಯ ಮೇಲೆ ಕಾಲಿಟ್ಟುಕೊಂಡದ್ದು ನನಗೆ ಬೇಸರ ತರಿಸಿದೆ" ಎಂದು ಹೇಳಿದರು.
ಮಿಚೆಲ್ ಮಾರ್ಷ್ ವಿವಾದದ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಮತ್ತು ಪ್ರಶಸ್ತಿಯನ್ನು ಗೆದ್ದ ನಂತರ ಆಸ್ಟ್ರೇಲಿಯಾಕ್ಕೆ ಮರಳಿದರು.












Click it and Unblock the Notifications