IPL 2025: ಅಜಿಂಕ್ಯ ರಹಾನೆಗೆ ನಾಯಕತ್ವ ನೀಡಿದ ಕೆಕೆಆರ್; ಸ್ಫೋಟಕ ಆಲ್ರೌಂಡರ್ ಉಪನಾಯಕ!
ಐಪಿಎಲ್ 2025ರ ಆವೃತ್ತಿಗಾಗಿ ಹಾಲಿ ಚಾಂಪಿಯನ್ ಹೊಸ ನಾಯಕನ ಆಯ್ಕೆ ಮಾಡಿದೆ. 2024ರ ಐಪಿಎಲ್ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ಮೆಗಾ ಹರಾಜಿಗೆ ಮುನ್ನ ಅವರನ್ನೇ ಕೈಬಿಡುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಹಿರಿಯ ಆಟಗಾರನಿಗೆ ನಾಯಕತ್ವದ ಹೊಣೆ ನೀಡಿದೆ.
ಸೋಮವಾರ ಕೆಕೆಆರ್ ಹೊಸ ನಾಯಕನ ಹೆಸರನ್ನು ಘೋಷಣೆ ಮಾಡಿದೆ. ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆಗೆ ಕೆಕೆಆರ್ ನಾಯಕತ್ವ ನೀಡಿದ್ದು, ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಉಪ-ನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟ ಬಳಿಕ ಅನುಭವಿ ಆಟಗಾರನಿಗೆ ಕೆಕೆಆರ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕೊಟ್ಟಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಕೆಕೆಆರ್ ನಾಯಕ ಮತ್ತು ಉಪನಾಯಕನ ಘೋಷಣೆ ಬಳಿಕ ಮಾತನಾಡಿದ ಸಿಇಒ ವೆಂಕಿ ಮೈಸೂರು, "ಅಜಿಂಕ್ಯ ರಹಾನೆ ರೀತಿಯ ಹಿರಿಯ ಅನುಭವಿ ಆಟಗಾರ ಇರುವುದು ಖುಷಿ ತಂದಿದೆ. ನಾಯಕನಾಗಿ ಅವರ ಅನುಭವನ್ನು ತಂಡಕ್ಕೆ ಧಾರೆ ಎರೆಯುವ ವಿಶ್ವಾಸವಿದೆ. ವೆಂಕಟೇಶ್ ಅಯ್ಯರ್ ಕೂಡ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ಇಬ್ಬರೂ ಕೂಡ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ಗೆ ಅಯ್ಯರ್ ನಾಯಕ
ಕೆಕೆಆರ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಐಪಿಎಲ್ ಇತಿಹಾಸದಲ್ಲಿಅವರು ಎರಡನೇ ದುಬಾರಿ ಆಟಗಾರರಾಗಿದ್ದಾರೆ. 2025ರ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಶ್ರೇಯಸ್ ಅಯ್ಯರ್ ಬದಲಾಗಿ ಅಜಿಂಕ್ಯ ರಹಾನೆ ಇದೀಗ ಕೆಕೆಆರ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ನಾಯಕನಾದ ಬಳಿಕ ಮಾತನಾಡಿದ ಅಜಿಂಕ್ಯ ರಹಾನಿ, "ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಕೆಕೆಆರ್ ಅನ್ನು ಮುನ್ನಡೆಸಲು ಅವಕಾಶ ಸಿಕ್ಕಿರುವುದು ಗೌರವದ ಸಂಗತಿಯಾಗಿದೆ. ನಮ್ಮಲ್ಲಿ ಅತ್ಯುತ್ತಮ ಮತ್ತು ಸಮತೋಲಿತ ತಂಡವಿದೆ ಎಂದು ನಾನು ನಂಬಿದ್ದೇನೆ. ಎಲ್ಲರೊಂದಿಗೆ ಕೆಲಸ ಮಾಡಲು ಮತ್ತು ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸವಾಲನ್ನು ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಮಾರ್ಚ್ 22 ರಂದು ಈಡನ್ ಗಾರ್ಡನ್ಸ್ನಲ್ಲಿ ನಡೆಯುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.












Click it and Unblock the Notifications