Govt employee; ಸದಾನಂದ ಅಮರಾಪುರ ಅಂತರಾಷ್ಟ್ರೀಯ ಐರನ್ ಮ್ಯಾನ್!
ಧಾರವಾಡ, ಜುಲೈ 13; ಸದಾನಂದ ಅಮರಾಪುರ ಕರ್ನಾಟಕದ ಸರ್ಕಾರಿ ಅಧಿಕಾರಿ. ಹುಬ್ಬಳ್ಳಿ ತಾಲೂಕು ಪಂಚಾಯಿತಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಅವರು 'ಅಂತರಾಷ್ಟ್ರೀಯ ಐರನ್ ಮ್ಯಾನ್'. ಈ ಸಾಧನೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆ ಇವರದ್ದು.
ಜುಲೈ 2ರಂದು ಕಜಕಿಸ್ಥಾನದ ರಾಜಧಾನಿ ಆಸ್ತಾನದಲ್ಲಿ ನಡೆದ 'ಅಂತರಾಷ್ಟ್ರೀಯ ಐರನ್ ಮ್ಯಾನ್' ಸ್ಪರ್ಧೆಯಲ್ಲಿ ಸದಾನಂದ ಅಮರಾಪುರ ಭಾಗವಹಿಸಿದ್ದರು. 3.9 ಕಿ.ಮೀ ಈಜು, 180 ಕಿ.ಮೀ. ಸೈಕ್ಲಿಂಗ್ ಅನ್ನು ಹಾಗೂ 42 ಕಿ.ಮೀ. ಓಟವನ್ನು 13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ 'ಅಂತರರಾಷ್ಟ್ರೀಯ ಐರನ್ ಮ್ಯಾನ್' ಆಗಿ ಸಾಧನೆ ಮಾಡಿದ್ದಾರೆ. ಈ ಮೂಲಕ ಕರ್ನಾಟಕ ಮತ್ತು ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಸದಾನಂದ ಅಮರಾಪುರ ಸಾಧನೆಗೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ್ಮೀಯತೆಯಿಂದ ಅವರನ್ನು ಅಭಿನಂದಿಸಿ, ಸನ್ಮಾಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಕ್ರೀಡಾಪಟುವಾಗಿದ್ದ ಸದಾನಂದ ಅಮರಾಪುರ ಅಂತರರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ 62 ದೇಶಗಳಿಂದ ಭಾಗವಹಿಸಿದ್ದ 1200 ಸ್ಪರ್ಧಾಳುಗಳನ್ನು ಹಿಂದಿಕ್ಕಿ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಸರ್ಕಾರಿ ಅಧಿಕಾರಿಯಾಗಿದ್ದಾರೆ.
ಸರ್ಕಾರಿ ಅಧಿಕಾರಿ ಪರಿಚಯ; ಸದಾನಂದ ಅಮರಾಪುರ ತಂದೆ ದಿ.ಹನುಮಂತಪ್ಪ ನಿವೃತ್ತ ಡಿವೈಎಸ್ಪಿ. ತಂದೆಯಂತೆ ಕುಸ್ತಿಯಲ್ಲಿ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 2010ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಕಗದಾಳ, ಇನಾಮ ಹೊಂಗಲ್, ಉಗರಗೋಳ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
2018ರಲ್ಲಿ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹುದ್ದೆಗೆ ಬಡ್ತಿ ಹೊಂದಿದ ಇವರು ಗ್ರಾಮೀಣ ಕೂಲಿ ಕಾರ್ಮಿಕರಿಗಾಗಿ ಸೇವೆ ಸಲ್ಲಿಸಿದ್ದಕ್ಕೆ ಅತ್ಯುತ್ತಮ ಸಹಾಯಕ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಗ್ರಾಮಗಳ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದು. ಊಟ ಮತ್ತು ಸೈಕಲ್ ಮೂಲಕ ಬೆಳಗ್ಗೆ ಹಳ್ಳಿಗಳಿಗೆ ತೆರಳಿ ಜನ ಜಾಗೃತಿ ಮೂಡಿಸುತ್ತಿರುವ ಯುವ ಅಧಿಕಾರಿ ಸದ್ಯ ಹುಬ್ಬಳ್ಳಿ ತಾಲೂಕು ಪಂಚಾಯಿತಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೆಲಸದ ಒತ್ತಡದ ಮಧ್ಯೆಯೂ ದೇಹದ ತೂಕವನ್ನು ನಿಯಂತ್ರಿಸಿಕೊಳ್ಳಲು ಪ್ರಾರಂಭಿಸಿದ ಇವರ ಸೈಕ್ಲಿಂಗ್ ಹವ್ಯಾಸ ಇಂದು ಈ ಸಾಧನೆಯ ಮಟ್ಟಕ್ಕೆ ಬೆಳೆಸಿದೆ. ಬಿಡುವಿನ ಮತ್ತು ರಜಾ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡದ ಸೈಕ್ಲಿಂಗ್ಗಳೊಂದಿಗೆ ಅಭ್ಯಾಸ ಮಾಡುತ್ತಾ ಹವ್ಯಾಸವಾಗಿ ಪ್ರಾರಂಭಗೊಂಡ ಸೈಕ್ಲಿಂಗ್, ಓಟ, ಈಜು, ಇಂದು ಹಲವಾರು ಪ್ರಶಸ್ತಿಗಳಿಗೆ ಕಾರಣವಾಗಿದೆ.
ಹುಬ್ಬಳ್ಳಿ ಸೈಕ್ಲಿಂಗ್ ವತಿಯಿಂದ 2017ರಲ್ಲಿ ಆಯೋಜಿಸಿದ್ದ ಎಂ.ಟಿ.ಬಿ ಚಾಂಪಿಯನ್ಶಿಪ್ನಲ್ಲಿ 8ನೇ ಸ್ಥಾನ, ಗೋವಾದಲ್ಲಿ 2017ರ ಅಕ್ಟೋಬರ್ನಲ್ಲಿ ನಡೆದ ಟಪ್ ಮ್ಯಾನ್ ಪೂರ್ಣಗೊಳಿಸಿದ್ದಾರೆ. 2018ರಲ್ಲಿ ಹುಬ್ಬಳ್ಳಿ ಫಿಟ್ನೆಸ್ ಕ್ಲಬ್ನಿಂದ ಆಯೋಜಿಸಿದ್ದ ಡುವಾತ್ಲಾನ್ನಲ್ಲಿ ಪ್ರಥಮ. 2019ರಲ್ಲಿ ಒಂದೇ ವರ್ಷದಲ್ಲಿ 100, 200, 300, 400 ಮತ್ತು 600 ಕಿ. ಮೀ. ಸೈಕ್ಲಿಂಗ್ನಲ್ಲಿ ಸೂಪರ್ ರಾಡರ್ ಆಗಿದ್ದಾರೆ. 2019ರಲ್ಲಿ ಕೊಲ್ಲಾಪುರದಲ್ಲಿ ಅರ್ಜಿಸಿದ್ದ ಸ್ಪರ್ಧೆಯಲ್ಲಿ ಲೋಹ ಪುರುಷ ಆಗಿದ್ದಾರೆ.
ಹಲವಾರು ಪ್ರಶಸ್ತಿಗಳು; ಸದಾನಂದ ಅಮರಾಪುರ 2020ರ ಫೆಬ್ರವರಿಯಲ್ಲಿ ನಾಗಪುರದಲ್ಲಿ ನಡೆದ ಟೈಗರ್ ಮ್ಯಾನ್ ಡುವಾತ್ಲಾನ್ ಆಗಿದ್ದಾರೆ. 2021ರಲ್ಲಿ ಒರಿಸ್ಸಾದಲ್ಲಿ ಹಕ್ರೋಲಿಯನ್ ಟೈಯತ್ಲಾನ್ ಪೂರ್ಣಗೊಳಿಸಿದ್ದಾರೆ. ಅಕ್ಟೋಬರ್ 2021ರಲ್ಲಿ ಆಜಾಧಿ ಕಾ ಅಮೃತ್ ಮಹೋತ್ಸವ ಅಂಗವಾಗಿ ವ್ಯಸನ ಮುಕ್ತ ಭಾರತ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಜಾಗೃತಿಗಾಗಿ 3,800 ಕಿ. ಮೀ. ಸೈಕ್ಲಿಂಗ್ ಅನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 14 ದಿನ 14 ಗಂಟೆಗಳ ಕಾಲ ಕ್ರಮಿಸಿ ಪೂರ್ಣಗೊಳಿಸಿದ್ದಾರೆ.
2022ರಲ್ಲಿ ಗೋವಾದಲ್ಲಿ ನಡೆದ ಹಾಲ್ಪ ಐರನ್ ಮ್ಯಾನ್ ಪೂರ್ಣಗೊಳಿಸಿದ್ದಾರೆ. ಹವ್ಯಾಸದಿಂದ ಕನಸನ್ನು ನನಸಾಗಿಸಿಕೊಂಡ ಸದಾನಂದ ಅವರ ಸತತ ಪರಿಶ್ರಮ, ಛಲ, ತಾಳ್ಮೆ ಯುವಕರಿಗೆ ಮಾದರಿಯಾಗಿದೆ. ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಯುವದಿನದ ಅಂಗವಾಗಿ ನಡೆದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ದೇಸಿ ಕ್ರೀಡೆಗಳ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಗ್ರಾಮೀಣ ಸರಕಾರಿ ಶಾಲೆಗಳಲ್ಲಿ 8 ಹೈಟೆಕ್ ಆಟದ ಮೈದಾನಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಕ್ರೀಡೋತ್ಸವಕ್ಕೆ ಸ್ಪೂರ್ತಿಯಾಗಿದ್ದಾರೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾಗಿರುವ ಇವರ ಪತ್ನಿ ಮುಕ್ತಾ.ಕೆ. ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ, ಸಣ್ಣ ಮಕ್ಕಳಿಗೆ, ಕ್ರೀಡಾ ಮಾರ್ಗದರ್ಶನ ಮಾಡುತ್ತಾರೆ. ಒಲಂಪಿಕ್ನಲ್ಲಿ ಭಾರತೀಯರಿಗೆ ಹೆಚ್ಚಿನ ಅವಕಾಶಗಳಿವೆ, ತರಬೇತಿಯ ಅವಶ್ಯಕತೆ ಎಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ, ಇತ್ತೀಚಿಗೆ ಸ್ವಗ್ರಾಮವಾದ ಹಾವೇರಿಯ ಇಚ್ಚಂಗಿಯಲ್ಲಿ ತಂದೆಯವರ ಪುಣ್ಯಸ್ಮರಣೆ ಅಂಗವಾಗಿ ಮುಕ್ತ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಿ ದೇಶದ ನೂರಾರು ಜನ ಕುಸ್ತಿಪಟುಗಳು ಭಾಗವಹಿಸುವಂತೆ ಮಾಡಿ. ತಮ್ಮ ಕ್ರೀಡಾಸಕ್ತಿಯನ್ನು ಮೆರೆದಿದ್ದಾರೆ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, "ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸದಾನಂದ ಅಮರಾಪುರ ಇವರ ಸಾಧನೆ ಅಮೋಘವಾದದ್ದು, ಧಾರವಾಡ ಜಿಲ್ಲಾಡಳಿತದ ಪರವಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಹೇಳಿದ್ದಾರೆ.
ಸದಾನಂದ ಅಮರಾಪುರ ಅವರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳಾದ ಎಲ್. ಕೆ. ಅತಿಕ್, ಜಿಲ್ಲಾ ಪಂಚಾಯತ್ ಅಧಿಕಾರಿಗಳ, ಕುಟುಂಬ ವರ್ಗ, ಸ್ನೇಹಿತರ ಬೆಂಬಲ, ಸಹಕಾರ ಮತ್ತು ಸತತ ಕಠಿಣ ಪರಿಶ್ರಮ, ತಾಳ್ಮೆಯಿಂದ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಿದೆ.












Click it and Unblock the Notifications