IPL 2025: ಐಪಿಎಲ್ ಪಂದ್ಯಾವಳಿ ಮತ್ತೆ ಆರಂಭ: ಮುಖ್ಯಸ್ಥರಿಂದ ಮಹತ್ವದ ಸುಳಿವು
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ತಲೆದೋರಿದ್ದರಿಂದ ಐಪಿಎಲ್ 2025ರ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು. ಒಂದು ವಾರದ ಕಾಲ ಪಂದ್ಯಾವಳಿಯನ್ನು ಸ್ಥಗಿತಗೊಳಿಸಿರುವುದಾಗಿ ಬಿಸಿಸಿಐ ತಿಳಿಸಿದ್ದರೂ, ಯುದ್ಧದ ಸನ್ನಿವೇಶದಲ್ಲಿ ಪಂದ್ಯಾವಳಿ ನಡೆಯುವ ಬಗ್ಗೆ ಯಾವುದೇ ಖಚಿತತೆ ಇರಲಿಲ್ಲ. ಆದರೆ ಶನಿವಾರ ಕದನ ವಿರಾಮ ಘೋಷಣೆ ಮಾಡಿದ್ದು ಐಪಿಎಲ್ ಪಂದ್ಯಾವಳಿ ಮತ್ತೆ ಆರಂಭವಾಗುವುದು ಬಹುತೇಕ ಖಚಿತವಾಗಿದೆ.
ಶನಿವಾರ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಭಾರತ ಸರ್ಕಾರ ಏನು ನಿರ್ಧಾರ ಮಾಡಲಿದೆ ಎನ್ನುವುದರ ಮೇಲೆ ಬಿಸಿಸಿಐ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಕದನ ವಿರಾಮ ಘೋಷಣೆಯಾದ ಬಳಿಕ ಐಪಿಎಲ್ ಆರಂಭದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.

ಐಪಿಎಲ್ ಸ್ಥಗಿತವಾದ ಬೆನ್ನಲ್ಲೇ ಬಹುತೇಕ ವಿದೇಶಿ ಆಟಗಾರರು ಶನಿವಾರ ತವರಿಗೆ ವಾಪಸಾಗಿದ್ದಾರೆ. ದೇಶೀಯ ಕ್ರಿಕೆಟಿಗರನ್ನು ಕೂಡ ಮನೆಗೆ ಕಳಿಸಲಾಗಿದೆ. ಕದನ ವಿರಾಮ ಘೋಷಣೆಯಾದ ಬಳಿಕ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು ಬಿಸಿಸಿಐ ಐಪಿಎಲ್ ಅನ್ನು ಶೀಘ್ರದಲ್ಲೇ ಪುನರಾರಂಭಿಸುವ ಸಾಧ್ಯತೆಯ ಬಗ್ಗೆ ಯೋಚಿಸುತ್ತಿದೆ ಎಂದರು.
ಭಾನುವಾರ ಮಹತ್ವದ ಸಭೆ
ಕದನ ವಿರಾಮವನ್ನು ಘೋಷಿಸಲಾಗಿದೆ. ಐಪಿಎಲ್ ಅನ್ನು ಪುನರಾರಂಭಿಸುವ ಮತ್ತು ಮುಕ್ತಾಯಗೊಳಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ತಕ್ಷಣ ಐಪಿಎಲ್ ಮತ್ತೆ ಆರಂಭಿಸುವುದು ಸಾಧ್ಯವಾದರೆ ನಾವು ಸ್ಥಳ, ದಿನಾಂಕಗಳು ಮತ್ತು ಎಲ್ಲವನ್ನೂ ನಿರ್ಧಾರ ಮಾಡಬೇಕು. ತಂಡದ ಮಾಲೀಕರು, ಪ್ರಸಾರಕರು ಮತ್ತು ಭಾಗಿಯಾಗಿರುವ ಎಲ್ಲರೂ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಮಾತನಾಡುತ್ತೇವೆ ಮತ್ತು ಮುಂದುವರಿಯುವುದು ಹೇಗೆ ಎಂಬುದರ ಕುರಿತು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ. ಮುಖ್ಯವಾಗಿ, ನಾವು ಸರ್ಕಾರದೊಂದಿಗೆ ಚರ್ಚಿಸಬೇಕಾಗುತ್ತದೆ ಎಂದು ಧುಮಾಲ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಟೈಮ್ಸ್ ಆಫ್ ಇಂಡಿಯಾ (TOI) ವರದಿಯ ಪ್ರಕಾರ, ಐಪಿಎಲ್ 2025 ಗುರುವಾರ ಅಥವಾ ಗರಿಷ್ಠ ಶುಕ್ರವಾರ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. "ಗಡಿಯಲ್ಲಿ ಉದ್ವಿಗ್ನತೆಯಿಂದಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಐಪಿಎಲ್ ಅನ್ನು ಸ್ಥಗಿತಗೊಳಿಸಿತ್ತು ಆದರೆ ಈಗ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಪ್ರತಿಯೊಂದು ಫ್ರಾಂಚೈಸಿಯ ವಿದೇಶಿ ಆಟಗಾರರು ಮನೆಗೆ ಮರಳುತ್ತಿದ್ದಾರೆ ಆದರೆ ಆದಷ್ಟು ಬೇಗ ತಮ್ಮ ತಂಡಗಳನ್ನು ಸೇರಲು ಕೇಳಲಾಗುತ್ತದೆ" ಎಂದು ವರದಿ ತಿಳಸಿದೆ.
ಇಲ್ಲಿನ ಬೆಳವಣಿಗೆಗಳನ್ನು ನೋಡಿ ವಿದೇಶಿ ಆಟಗಾರರು ಭಯಭೀತರಾಗಿದ್ದರು ಆದರೆ ವಿಮಾನ ನಿಲ್ದಾಣ ಸ್ಥಗಿತಗೊಂಡಿದ್ದರಿಂದ ಹೆಚ್ಚು ಆತಂಕವಾಗಿತ್ತು. ಅವರು ಫ್ರಾಂಚೈಸಿಗಳ ಮಾತುಗಳನ್ನು ತಾಳ್ಮೆಯಿಂದ ಕೇಳಿದರು ಮತ್ತು ಸಂಪೂರ್ಣ ವಿಶ್ವಾಸ ಹೊಂದಿದ್ದರು ಎಂದು ಹೇಳಲಾಗಿದೆ.
ಸಂಬಂಧಿತ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನದ ನಂತರ ಪರಿಷ್ಕೃತ ವೇಳಾಪಟ್ಟಿ ಮತ್ತು ಪಂದ್ಯಾವಳಿಯ ಉಳಿದ ಸ್ಥಳಗಳ ಕುರಿತು ನವೀಕರಣಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.












Click it and Unblock the Notifications