RCB: ಆರ್ಸಿಬಿ 'ರಿಟೆನ್ಷನ್' ಟೆನ್ಷನ್; ತಂಡದಲ್ಲಿ ಉಳಿಯೋದ್ಯಾರು?
ಐಪಿಎಲ್ 2025ರ ಮೆಗಾಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. 4 ಆಟಗಾರರನ್ನು ರಿಟೇನ್ ಮಾಡಲು ಅವಕಾಶ ಇದ್ದು, ಆರ್ ಟಿಎಮ್ ಬಳಸಿ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಅಕ್ಟೋಬರ್ 31ರಂದು ಬಿಡುಗಡೆ ಮಾಡಿರುವ ಮತ್ತು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲು ಕೊನೆಯ ದಿನವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಕೊನೆಯ ಹಂತದ ಸರ್ಕಸ್ ಮಾಡುತ್ತಿದ್ದು, ಎಲ್ಲಾ ಲೆಕ್ಕಾಚಾರ ಮಾಡಿ ಯಾರನ್ನು ಉಳಿಸಿಕೊಳ್ಳಬೇಕು, ಬಿಡುಗಡೆ ಮಾಡಬೇಕು ಎಂದು ನಿರ್ಧಾರ ಮಾಡಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ಯಾರನ್ನು ಉಳಿಸಿಕೊಳ್ಳಲಿದೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಉಳಿಯುವುದು ಖಚಿತವಾಗಿದೆ. ಆದರೆ ಉಳಿದ ಐವರು ಆಟಗಾರರು ಯಾರು ಎನ್ನುವ ಕುತೂಹಲವಿದೆ.

ಕ್ರಿಕೆಟ್ ಪಂಡಿತರು ಆರ್ ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರ ಬಗ್ಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ತಂಡದಲ್ಲಿ ಉಳಿಯುವುದು ಖಚಿತವಾಗಿದ್ದು, ಉಳಿದಂತೆ ರಜತ್ ಪಟಿದಾರ್, ವಿಲ್ ಜ್ಯಾಕ್ಸ್, ಮೊಹಮ್ಮದ್ ಸಿರಾಜ್ ಮತ್ತು ಯಶ್ ದಯಾಳ್ ಅವರ ಹೆಸರು ಕೇಳಿಬಂದಿದೆ.
ತಂಡದಲ್ಲಿ ಉಳಿಯೋದ್ಯಾರು?
ಇದೀಗ ಮೆಗಾ ಹರಾಜು ಇರುವ ಕಾರಣ ಹಣದ ಲೆಕ್ಕಾಚಾರ ಕೂಡ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆಟಗಾರರನ್ನು ರಿಟೇನ್ ಮಾಡಲು ದುಬಾರಿ ಹಣ ನೀಡಬೇಕಾಗಿದೆ. ವಿರಾಟ್ ಕೊಹ್ಲಿ ರಿಟೈನ್ ಮಾಡಿಕೊಳ್ಳಲು ಆರ್ ಸಿಬಿ 18 ಕೋಟಿ ರೂಪಾಯಿ ಕೊಡಲಿದೆ. ರಜತ್ ಪಟಿದಾರ್ ರನ್ನು ತಂಡದಲ್ಲಿ ಉಳಿಸಿಕೊಳ್ಳಲು 14 ಕೋಟಿ ರೂಪಾಯಿ ನೀಡಲಿದೆ ಎಂದು ಹೇಳಲಾಗಿದೆ. ಮೊಹಮ್ಮದ್ ಸಿರಾಜ್ ಅಥವಾ ವಿಲ್ ಜ್ಯಾಕ್ಸ್ರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದ್ದು 14 ಕೋಟಿ ರೂಪಾಯಿ ಪಡೆಯಲಿದ್ದಾರೆ. ಅನ್ಕ್ಯಾಪ್ಡ್ ಆಟಗಾರ ಯಶ್ ದಯಾಳ್ರನ್ನು 4 ಕೋಟಿ ರೂಪಾಯಿಗೆ ರಿಟೈನ್ ಮಾಡುವ ಸಾಧ್ಯತೆ ಇದೆ.
ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಆರ್ ಸಿಬಿ ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚು ಮಾಡಲಿದ್ದು, 73 ಕೋಟಿ ರೂಪಾಯಿ ಪರ್ಸ್ ಜೊತೆ ಐಪಿಎಲ್ ಮೆಗಾಹರಾಜಿಗೆ ಹೋಗಬಹುದಾಗಿದೆ. ಮೆಗಾ ಹರಾಜಿನಲ್ಲಿ ನಾಯಕ ಫಾಫ್ ಡುಪ್ಲೆಸಿಸ್, ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಸೇರಿದಂತೆ ಹಲವು ಆಟಗಾರರನ್ನು ಮತ್ತೆ ಖರೀದಿ ಮಾಡುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗಕ್ಕೆ ಬಲ
ಆರ್ ಸಿಬಿ ತಂಡಕ್ಕೆ ಎಂದಿಗೂ ಬೌಲಿಂಗ್ ದೊಡ್ಡ ಸಮಸ್ಯೆಯಾಗಿದೆ. ಟಿ20 ಮಾದರಿಯಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ ಉದಾಹರಣೆಗಳು ಕಡಿಮೆ, ಯಶ್ ದಯಾಳ್ ಆರ್ ಸಿಬಿ ತಂಡದ ಪ್ರಮುಖ ಅಸ್ತ್ರವಾಗಲಿದ್ದು, ಈ ಬಾರಿ ಮೆಗಾ ಹರಾಜಿನಲ್ಲಿ ಬೌಲಿಂಗ್ ಪಡೆಯನ್ನು ಬಲಪಡಿಸಲು ಫ್ರಾಂಚೈಸಿ ಯೋಜಿಸುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ, ರಜತ್ ಪಟಿದಾರ್, ವಿಲ್ ಜ್ಯಾಕ್ಸ್ ತಂಡದ ಬ್ಯಾಟಿಂಗ್ಗೆ ಬಲ ತುಂಬಲಿದ್ದಾರೆ. ಇವರ ಜೊತೆ ದೇಶೀಯ ಮತ್ತು ವಿದೇಶಿ ಸ್ಫೋಟಕ ಬ್ಯಾಟರ್ ಮತ್ತು ಆಲ್ರೌಂಡರ್ ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ ಸಿಬಿ ಯೋಜಿಸುವ ಸಾಧ್ಯತೆ ಇದೆ.












Click it and Unblock the Notifications