IPL 2025 Auction: ಆರ್ಸಿಬಿ ಅಭಿಮಾನಿಗಳಿಗೆ ದೊಡ್ಡ ಭರವಸೆ ಕೊಟ್ಟ ಫ್ರಾಂಚೈಸಿಗಳು
ಬೆಂಗಳೂರು, ನವೆಂಬರ್ 25: ಸೌದಿ ಅರೇಬಿಯಾದಲ್ಲಿ ಐಪಿಎಲ್ ಟಿ-20 2025 ಕ್ರಿಕೆಟ್ ಟೂರ್ನಿಯ ಮೊದಲ ದಿನದ ಹರಾಜು ಮುಕ್ತಾಯಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಲವು ಆಟಗಾರರನ್ನು ಖರೀದಿ ಮಾಡಿದೆ. ಆದರೆ ಅಭಿಮಾನಿಗಳು ಫ್ರಾಂಚೈಸಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹರಾಜು ಮುಗಿದ ಬಳಿಕ ಫ್ರಾಂಚೈಸಿಗಳು ಟೀಕೆಗಳಿಗೆ ಉತ್ತರವನ್ನು ನೀಡಿದ್ದಾರೆ.
ಆರ್ಸಿಬಿ 83 ಕೋಟಿ ರೂ. ಮೌಲ್ಯವನ್ನು ಇಟ್ಟುಕೊಂಡು ಭಾನುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಆರ್ಸಿಬಿ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರಲ್ಲಿ ಆರ್ಸಿಬಿ ಯಾರನ್ನು ಖರೀದಿ ಮಾಡಲಿದೆ? ಎಂಬ ಕುತೂಹಲವಿತ್ತು. ಕನ್ನಡಿಗ ಕೆ. ಎಲ್. ರಾಹುಲ್ ಖರೀದಿ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು.

ಮೊದಲ ದಿನದ ಹರಾಜಿನಲ್ಲಿ ಆರ್ಸಿಬಿ 12.50 ಕೋಟಿ ಮೊತ್ತಕ್ಕೆ ಜೋಶ್ ಹ್ಯಾಜಲ್ವುಡ್, 11.50 ಕೋಟಿ ಮೊತ್ತಕ್ಕೆ ಫಿಲ್ ಸಾಲ್ಟ್, 11 ಕೋಟಿ ರೂ.ಗಳಿಗೆ ಜಿತೇಶ್ ಶರ್ಮಾ ಮತ್ತು 8.75 ಕೋಟಿ ರೂ.ಗಳಿಗೆ ಲಿಯಾಮ್ ಲಿವಿಂಗ್ ಸ್ಟೋನ್ ಖರೀದಿ ಮಾಡಿದೆ. ಸೋಮವಾರ ಸಹ 2ನೇ ದಿನದ ಹರಾಜು ಪ್ರಕ್ರಿಯೆ ನಡೆಯಲಿದೆ.
ಅಭಿಮಾನಿಗಳ ಅಸಮಾಧಾನ: ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿಗಳ ನಡೆಯನ್ನು ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಈ ಕುರಿತು ಎಕ್ಸ್, ಟಾಲ್ ಪೇಜ್ಗಳಲ್ಲಿ ಹಲವು ಪೋಸ್ಟ್ಗಳು ಹರಿದಾಡುತ್ತಿವೆ. ಈ ಬಗ್ಗೆ ಫ್ರಾಂಚೈಸಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸ್ ಮೂಲಕ ಫ್ರಾಂಚೈಸಿಗಳು, ತಂಡದ ಯೋಜನೆ ಮತ್ತು ಫ್ರಾಂಚೈಸಿಗಳ ಯೋಜನೆಯ ಮೇಲೆ ನಂಬಿಕೆ ಇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ತಮ್ಮ ಬಳಿ ಯೋಜನೆಯೊಂದಿದೆ, ಅದನ್ನು ನಾವು ಕಾರ್ಯಗತಗೊಳಿಸುತ್ತೇವೆ ಎಂದು ಆರ್ಸಿಬಿ ಅಭಿಮಾನಿಗಳಿಗೆ ಫ್ರಾಂಚೈಸಿಗಳು ಭರವಸೆಯನ್ನು ನೀಡಿದ್ದಾರೆ.
"ಎಲ್ಲವೂ ಮುಗಿದಿಲ್ಲ, ನಮ್ಮ ಬಳಿ ಹಲವು ಯೋಜನೆಗಳಿವೆ ಮತ್ತು ಹಣವೂ ಇದೆ. ಶಾಂತವಾಗಿರಿ ಮತ್ತು ಯೋಜನೆಗಳ ಮೇಲೆ ನಂಬಿಕೆ ಇಡಿ" ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಮತ್ತೊಂದು ಪೋಸ್ಟ್ನಲ್ಲಿ "ಶಾಂತವಾಗಿರಿ ನಾವು ಯೋಜನೆಯನ್ನು ಮಾಡಿದ್ದೇವೆ" ಎಂದು ಹೇಳಿದೆ. ಈ ಮೂಲಕ 2ನೇ ದಿನದ ಖರೀದಿ ಪ್ರಕ್ರಿಯೆಯಲ್ಲಿ ಆರ್ಸಿಬಿಯ ತಂತ್ರದ ಬಗ್ಗೆ ಕುತೂಹಲವನ್ನು ಮೂಡಸಿದ್ದಾರೆ.
ಭಾನುವಾರ ಆಟಗಾರರ ಹರಾಜು ಆರಂಭವಾಗಿ ಎರಡು ರೌಂಡ್ ಮುಗಿದರೂ ಯಾರನ್ನೂ ಖರೀದಿ ಮಾಡದ ಫ್ರಾಂಚೈಸಿಗಳ ವಿರುದ್ಧ ಅಭಿಮಾನಿಗಳು ಗರಂ ಆದರು. ಮೊಹಮದ್ ಸಿರಾಜ್ ಖರೀದಿ ಮಾಡಲು ಫ್ರಾಂಚೈಸಿಗಳು ಆರ್ಟಿಎಂ ಆಯ್ಕೆಯನ್ನು ಪರಿಗಣಿಸಲಿಲ್ಲ, 12.25 ಕೋಟಿಗೆ ಸಿರಾಜ್ ಗುಜರಾತ್ ಟೈಟಾನ್ಸ್ ಪಾಲಾದರು.
ಸಿರಾಜ್ರನ್ನು ಮರಳಿ ತಂಡಕ್ಕೆ ಪಡೆದಿಲ್ಲ ಎಂಬುದು ಮೊದಲು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು. ಆಗ ಸರಣಿ ಟ್ವೀಟ್ಗಳನ್ನು ಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಫ್ರಾಂಚೈಸಿಗಳು ಮೊದಲ ಎರಡು ರೌಂಡ್ನಲ್ಲಿ ಖರೀದಿ ಮಾಡಲಿಲ್ಲ. ಆರ್ಸಿಬಿ ತಂಡ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಇವರಲ್ಲಿ ವಿರಾಟ್ ಕೊಹ್ಲಿ 21 ಕೋಟಿ, ರಜತ್ ಪಾಟಿದಾರ್ 11 ಕೋಟಿ ಮತ್ತು ಯಶ್ ದಯಾಳ್ 4 ಕೋಟಿ.
ಆರ್ಸಿಬಿ ಕನ್ನಡಿಗ ಕೆ. ಎಲ್. ರಾಹುಲ್ ಖರೀದಿ ಮಾಡಲಿದೆ? ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಈ ನಿರೀಕ್ಷೆ ಹುಸಿಯಾಗಿದೆ. ಡೆಲ್ಲಿ ಕ್ಯಾಪಿಟಲ್ ತಂಡ 14 ಕೋಟಿ ರೂ.ಗಳಿಗೆ ಕೆ. ಎಲ್. ರಾಹುಲ್ ಖರೀದಿಸಿದೆ. ಕಳೆದ ಬಾರಿ ರಿಷಬ್ ಪಂತ್ ಬಿಡುಗಡೆ ಮಾಡಿದ್ದ ಡೆಲ್ಲಿ ಈ ಬಾರಿ ರಾಹುಲ್ಗೆ ನಾಯಕ ಸ್ಥಾನವನ್ನು ನೀಡುವ ನಿರೀಕ್ಷೆ ಇದೆ.












Click it and Unblock the Notifications