IPL 2023: ತಂಡದ ಸೋಲಿಗೆ ಕಾರಣವನ್ನು ವಿವರಿಸಿದ RCB ಕೋಚ್ ಸಂಜಯ್ ಬಂಗಾರ್
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡ ಮೊದಲ ಸೋಲು ಕಂಡಂತಾಗಿದೆ. ಆರಂಭದಲ್ಲಿ ಅದ್ಭುತ ಯಶಸ್ಸಿನ ಹೊರತಾಗಿಯೂ ಆರ್ಸಿಬಿ ಹೀನಾಯ ಸೋಲು ಕಾಣುವಂತಾಗಿದ್ದು ತಂಡದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಸೋಲಿನ ಬಳಿಕ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಪ್ರತಿಕ್ರಿಯೆ ನೀಡಿದ್ದು ಸೋಲಿಗೆ ಕಾರಣವಾದ ಅಂಶವನ್ನು ವಿವರಿಸಿದ್ದಾರೆ.
ಸೋಲಿನ ಹಿನ್ನೆಲೆಯಲ್ಲಿ ಮಾತನಾಡಿದ ಸಂಜಯ್ ಬಂಗಾರ್ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಎಲ್ಲಾ ವಿಭಾಗದಲ್ಲಿಯೂ ಕೊಲ್ಕತ್ತಾ ತಂಡಕ್ಕಿಂತ ಹಿನ್ನಡೆಯನ್ನು ಅನುಭವಿಸಿತು ಎಂದಿದ್ದಾರೆ. ಕೆಕೆಆರ್ ತಂಡ ಎಲ್ಲಾ ವಿಭಾಗದಲ್ಲಿಯೂ ಮೇಲುಗೈ ಸಾಧಿಸಿದ್ದು ಪಂದ್ಯವನ್ನು ಕಸಿದುಕೊಂಡಿತು ಎಂದು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ವಿವರಿಸಿದ್ದಾರೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ತಮಡ 7 ವಿಕೆಟ್ ಕಳೆದುಕೊಂಡು 204 ರನ್ಗಳಿಸಿತು. ಇದಕ್ಕೆ ಪ್ರತಿಯಾಗಿ ಆರ್ಸಿಬಿ ತಂಡ 123 ರನ್ಗಳಿಸಿ ಆಲೌಟ್ ಆಗಿದೆ.

"ನಾವು ಎಲ್ಲಾ ವಿಭಾಗದಲ್ಲಿಯೂ ಹಿನ್ನಡೆ ಅನುಭವಿಸಿದೆವು. ಅವರು ಬಹಳ ಸುಲಭವಾಗಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿದ್ದಾರೆ. ಬ್ಯಾಟಿಂಗ್ನಲ್ಲಿ ಯಾವುದು ಕೂಡ ನಮ್ಮ ಪರವಾಗಿ ಆಗಲಿಲ್ಲ" ಎಂದು ಸಂಜಯ್ ಬಂಗಾರ್ ಸೋಲಿನ ಬಳಿಕ ಮಾತನಾಡಿದ್ದಾರೆ. ಇನ್ನು ಮುಂದುವರಿದು ಅವರು ಆರ್ಸಿಬಿ ತಂಡ ಮಧ್ಯಮ ಓವರ್ಗಳಲ್ಲಿ ಲಯವನ್ನು ಕಳೆದುಕೊಂಡಿತು ಎಂದಿದ್ದು ಕೆಕೆಆರ್ ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
KKR vs RCB: ಇದು ಎಲ್ಲಿಂದ ಬಂತು ಗೊತ್ತಿಲ್ಲ: ತನ್ನ ಬ್ಯಾಟಿಂಗ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಶಾರ್ದೂಲ್ ಠಾಕೂರ್!
"ಇದು ರನ್ ಬೆನ್ನಟ್ಟಲು ಉತ್ತಮವಾದ ಕ್ರೀಡಾಂಗಣ. ಬ್ಯಾಟಿಂಗ್ ಹಾಗೂ ಬೌಲಿಂಗ್ಗೆ ಉತ್ತಮವಾಗಿ ನೆರವು ನೀಡುವಂತಾ ಪಿಚ್ ಆಗಿತ್ತು. ಅಂತ್ಯದ ಸಂದರ್ಭದಲ್ಲಿ ಬ್ಯಾಟರ್ಗಳಿಗೆ ಹೆಚ್ಚಿನ ನೆರವು ನೀಡುವಂತಾ ಪಿಚ್ ಆಗಿರುವ ಕಾರಣ ವಿಕೆಟ್ಗಳನ್ನು ಕೈಯ್ಯಲ್ಲಿ ಉಳಿಸಿಕೊಳ್ಳಬೇಕಾಗಿತ್ತು. ಆದರೆ 200ಕ್ಕಿಂತ ಅಧಿಕ ರನ್ಗಳನ್ನು ಬೆನ್ನಟ್ಟುತ್ತುದ್ದೀರಿ ಎಂದಾದರೆ ಅದು ಯಾವಾಗಲೂ ಒತ್ತಡವನ್ನುಂಟು ಮಾಡುತ್ತದೆ" ಎಂದಿದ್ದಾರೆ ಸಂಜಯ್ ಬಂಗಾರ್.
ಮುಂದುವರಿದು ಮಾತನಾಡಿದ ಅವರು "ನಾವು ಉತ್ತಮವಾದ ಆರಂಭವನ್ನು ಪಡೆದುಕೊಂಡಿದ್ದೆವು. ಆದರೆ ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ನಮ್ಮ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾದರು. ಮಧ್ಯಮ ಓವರ್ಗಳಲ್ಲಿ ನಮ್ಮ ಲಯವನ್ನು ನಾವು ಕಳೆದುಕೊಂಡೆವು" ಎಂದಿದ್ದಾರೆ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 89 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. ಆದರೆ ಬಳಿಕ ಜೊತೆಯಾದ ರಿಂಕು ಸಿಂಗ್ ಹಾಗೂ ಶಾರ್ದೂಲ್ ಠಾಕೂರ್ ಸ್ಪೋಟಕ ಪ್ರದರ್ಶನ ನಿಡಿದ್ದು ಶತಕದ ಜೊತೆಯಾಟ ನೀಡಿದರು. ರಿಂಕು ಸಿಂಗ್ 33 ಎಸೆತಗಳಲ್ಲಿ 46 ರನ್ಗಳಿಸಿದರೆ ಠಾಕೂರ್ 29 ಎಸೆತಗಳಲ್ಲಿ 68 ರನ್ಗಳಿಸಿ ಅಬ್ಬರಿಸಿದರು. ಹೀಗಾಗಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡ ಉತ್ತಮ ಆರಂಬವನ್ನು ಪಡೆದುಕೊಂಡಿತಾದರೂ ಬಳಿಕ ಕುಸಿತ ಕಂಡಿತು. ಯಾವ ಬ್ಯಾಟರ್ ಕೂಡ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸದ ಕಾರಣ ಆರ್ಸಿಬಿ ತಂಡ ಕೇವಲ 123 ರನ್ಗಳಿಗೆ ಆಲೌಟ್ ಆಗಿದ್ದು 81 ರನ್ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಆರ್ಸಿಬಿ ಈ ಆವೃತ್ತಿಯಲ್ಲಿ ಮೊದಲ ಸೋಲಿನ ರುಚಿ ಕಂಡಿದೆ.












Click it and Unblock the Notifications