Ind vs Aus: ಸಿಡ್ನಿ ಟೆಸ್ಟ್ಗೆ ಜಸ್ಪ್ರೀತ್ ಬುಮ್ರಾ ನಾಯಕ?
ಮೆಲ್ಬೋರ್ನ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲನುಭವಿಸಿದೆ. ಭಾರತ ತಂಡದ ಸೋಲಿಗೆ ಹಲವು ಮಾಜಿ ಕ್ರಿಕೆಟಿಗರು ವ್ಯಾಪಕವಾಗಿ ಟೀಕೆ ಮಾಡುತ್ತಿದ್ದಾರೆ. ತಂಡದಲ್ಲಿ ಬದಲಾವಣೆ ಮಾಡಬೇಕು ಎನ್ನುವ ಕೂಗು ಜೋರಾಗಿದೆ. ಪದೇ ಪದೇ ವಿಫಲವಾಗುತ್ತಿರುವ ಆಟಗಾರರಿಗೆ ಮಣೆ ಹಾಕುತ್ತಿರುವುದೇಕೆ ಎನ್ನುವ ಪ್ರಶ್ನೆ ಬಂದಿದ್ದು, ರೋಹಿತ್ ಶರ್ಮಾರ ನಾಯಕತ್ವವನ್ನು ಕೂಡ ಪ್ರಶ್ನೆ ಮಾಡಲಾಗುತ್ತಿದೆ.
ಜನವರಿ 3ರಿಂದ ಸರಣಿಯ ಕೊನೆಯ ಟೆಸ್ಟ್ ಆರಂಭವಾಗಲಿದ್ದು ಭಾರತ ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಭಾರತಕ್ಕೆ ಕೊನೆಯ ಅವಕಾಶ ಉಳಿದುಕೊಂಡಿದ್ದು ಸಿಡ್ನಿ ಟೆಸ್ಟ್ನಲ್ಲಿ ಗೆಲ್ಲಲೇಬೇಕಾಗಿದೆ.

ಜಸ್ಪ್ರೀತ್ ಬುಮ್ರಾ ನಾಯಕ?
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಇತ್ತೀಚೆಗೆ ಉತ್ತಮ ಪ್ರದರ್ಶನ ಕಾಣುತ್ತಿಲ್ಲ. ಕೊನೆಯ 7 ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ಒಂದೇ ಒಂದು ಟೆಸ್ಟ್, ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದರು ಎನ್ನುವುದು ವಿಶೇಷ. ಉಳಿದ ಆರು ಟೆಸ್ಟ್ಗಳಲ್ಲಿ 5ರಲ್ಲಿ ಸೋತಿದ್ದು ಒಂದು ಟೆಸ್ಟ್ ಮಾತ್ರ ಡ್ರಾನಲ್ಲಿ ಅಂತ್ಯವಾಗಿದೆ. ಇದೇ ಕಾರಣಕ್ಕೆ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಬುಮ್ರಾ ನಾಯಕರಾಗಬೇಕು ಎನ್ನುವ ಒತ್ತಡವಿದ್ದು ಕೊನೆಯ ಟೆಸ್ಟ್ನಲ್ಲಿ ಬುಮ್ರಾ ನಾಯಕರಾಗುವ ಸಾಧ್ಯತೆ ಕೂಡ ಇದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸದ್ಯ ಉತ್ತಮ ಫಾರ್ಮ್ನಲ್ಲಿ ಇಲ್ಲ. ಇಬ್ಬರಿಗೂ ಒಂದು ಟೆಸ್ಟ್ಗೆ ವಿಶ್ರಾಂತಿ ನೀಡುವ ಸಾಧ್ಯತೆ ಕೂಡ ಇದೆ. ವಿರಾಟ್ ಕೊಹ್ಲಿಗೆ ಅವಕಾಶ ನೀಡಿದರೂ, ರೋಹಿತ್ ಶರ್ಮಾರಿಗೆ ವಿಶ್ರಾಂತಿ ನೀಡಬೇಕು ಎಂದು ಹೇಳಲಾಗಿದ್ದು, ಅವರ ಬದಲಿಗೆ ಶುಭಮನ್ ಗಿಲ್ ಅವಕಾಶ ಪಡೆಯುವ ಸಾಧ್ಯತೆ ಇದೆ. ರೋಹಿತ್ಗೆ ವಿಶ್ರಾಂತಿ ನೀಡಿದರೆ, ಯಶಸ್ವಿ ಜೈಸ್ವಾಲ್ ಜೊತೆಗೆ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಹರ್ಷಿತ್ ರಾಣಾ, ಪ್ರಸಿದ್ಧ್ಗೆ ಅವಕಾಶ?
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತಕ್ಕೆ ಬುಮ್ರಾ ಮಾತ್ರ ಆಸರೆಯಾಗಿದ್ದಾರೆ. ಉಳಿದ ಯಾವ ಬೌಲರ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಇದೇ ಕಾರಣಕ್ಕೆ ಕೊನೆ ಟೆಸ್ಟ್ನಲ್ಲಿ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ರನ್ನು ಕೈಬಿಟ್ಟು ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣಗೆ ಅವಕಾಶ ಕೊಡಬೇಕು ಎನ್ನಲಾಗಿದೆ. ಮೊಹಮ್ಮದ್ ಶಮಿ ಹೊರಗುಳಿದ ಬಳಿಕ ತಂಡಕ್ಕೆ ಸೇರ್ಪಡೆಯಾಗಿರುವ ತನುಷ್ ಕೊಟ್ಯಾನ್ಗೆ ಕೂಡ ಅವಕಾಶ ಸಿಗುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಪ್ರಸಿದ್ಧ್ ಕೃಷ್ಣ ಎತ್ತರವಾಗಿದ್ದು ಅವರ ಬೌಲಿಂಗ್ ಪರಿಣಾಮಕಾರಿಯಾಗಿರಬಹುದು ಎಂದು ಅಭಿಪ್ರಾಯಪಡಲಾಗಿದೆ.
ಸಿಡ್ನಿ ಟೆಸ್ಟ್ಗೆ ಸಂಭಾವ್ಯ ತಂಡ
ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ / ತನುಷ್ ಕೋಟ್ಯಾನ್ / ಆಕಾಶ್ ದೀಪ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.












Click it and Unblock the Notifications