ಭಾರತ ಸೌತ್ ಆಫ್ರಿಕಾ ಪಂದ್ಯ ನಡೆಯುವ ಸ್ಟೇಡಿಯಂಗೆ ಕರೆಂಟ್ ಕಟ್
ತಿರುವನಂತಪುರಂ, ಸೆ. 18: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸೆಪ್ಟೆಂಬರ್ 28ರಂದು ಟಿ20 ಪಂದ್ಯ ನಡೆಯುವ ಗ್ರೀನ್ಫೀಲ್ಡ್ ಸ್ಟೇಡಿಯಂ ಕತ್ತಲಲ್ಲಿ ಮುಳುಗಿದೆ. ಎಲೆಕ್ಟ್ರಿಕ್ ಬಿಲ್ ಕಟ್ಟಿಲ್ಲವೆಂದು ಕೇರಳ ರಾಜ್ಯ ವಿದ್ಯುಚ್ಚಕ್ತಿ ಮಂಡಳಿ ಈ ಸ್ಟೇಡಿಯಂಗೆ ಪವರ್ ಸರಬರಾಜು ನಿಲ್ಲಿಸಿದೆ.
ಇದು ಸಾಲದು ಎಂಬಂತೆ ನೀರಿನ ಬಿಲ್ ಕಟ್ಟಿಲ್ಲವೆಂದು ಕೇರಳ ಜಲ ಪ್ರಾಧಿಕಾರ ಕೂಡ ನೀರಿನ ಸರಬರಾಜು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ತಿರುವನಂತಪುರಂನ ಗ್ರೀನ್ಫೀಲ್ಡ್ ಸ್ಟೇಡಿಯಂ ಕಟ್ಟಬೇಕಿರುವ ವಿದ್ಯುತ್ ಬಿಲ್ ಬಾಕಿ ಮೊತ್ತ ಬರೋಬ್ಬರಿ 2.5 ಕೋಟಿ ರೂ. ಕಳೆದ ಮೂರು ವರ್ಷಗಳಿಂದಲೂ ಸ್ಟೇಡಿಯಂ ಯಾವುದೇ ವಿದ್ಯುತ್ ಮತ್ತು ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿರುವುದು ತಿಳಿದುಬಂದಿದೆ.

ವಿದ್ಯುತ್ ಸರಬರಾಜು ನಿಲ್ಲಿಸಿರುವುದು ಇವತ್ತು ಅಥವಾ ನಿನ್ನೆಯಲ್ಲ. ಕಳೆದ ವಾರದಿಂದಲೂ ಪವರ್ ಕಟ್ ಆಗಿದೆ. ಐದು ದಿನಗಳಿಂದ ಜನರೇಟರ್ ಬಳಸಿಕೊಂಡು ಸ್ಟೇಡಿಯಂನ ಪಾಲನೆ ಕೆಲಸ ಮಾಡಲಾಗುತ್ತಿದೆ.
ಸೆಪ್ಟೆಂಬರ್ 28ರಂದು ನಡೆಯಲಿರುವ ಭಾರತ ಸೌತ್ ಆಫ್ರಿಕಾ ಟಿ20 ಪಂದ್ಯಕ್ಕೆ ಭದ್ರತಾ ವ್ಯವಸ್ಥೆ ಪರಿಶೀಲಿಸಲು ಇದೇ ಸ್ಟೇಡಿಯಂನಲ್ಲಿ ವಿದ್ಯುತ್ ಬೆಳಕು ಇಲ್ಲದೆಯೇ ಸಭೆ ನಡೆಯಿತು.
"ಗ್ರೀನ್ಫೀಲ್ಡ್ ಸ್ಟೇಡಿಯಂನ ನಿರ್ವಹಣೆ ಹೊಣೆ ಕೇರಳ ಸ್ಪೋರ್ಟ್ಸ್ ಫೆಕಲ್ಟಿ (ಕೆಎಸ್ಎಫ್ಎಲ್) ಸಂಸ್ಥೆಯದ್ದಾಗಿದೆ. ಕಳೆದ ಮೂರು ವರ್ಷಗಳಿಂದ ಅದು ವಿದ್ಯುತ್ ಮತ್ತು ನೀರಿನ ಬಿಲ್ ಕಟ್ಟಿಲ್ಲ. ಆದರೆ, ಕೇರಳ ಸರಕಾರದಿಂದ ವಾರ್ಷಿಕ ನಿಧಿ ಬರದ ಹಿನ್ನೆಲೆಯಲ್ಲಿ ಬಿಲ್ ಕಟ್ಟಲು ಸಾಧ್ಯವಾಗಿಲ್ಲ ಎಂಬುದು ಕೆಎಸ್ಎಫ್ಎಲ್ನ ಹೇಳಿಕೆ" ಎಂದು ಕೇರಳದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಅತ್ತ, ಕೇರಳ ಕ್ರಿಕೆಟ್ ಸಂಸ್ಥೆ ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಬೇಗ ಈ ಸಮಸ್ಯೆ ಇತ್ಯರ್ಥವಾಗಬಹುದು ಎಂಬ ಆಶಾಭಾವನೆಯಲ್ಲಿದೆ. ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ದಾಖಲೆಯ 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ.
ಮೊಹಾಲಿಯಲ್ಲೂ ಇದೇ ಕಥೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ20 ಪಂದ್ಯ ಆಯೋಜಿಸುವ ಚಂದೀಗಡದ ಮೊಹಾಲಿ ಸ್ಟೇಡಿಯಂ ಕೂಡ ಇಂಥದ್ದೇ ವಿವಾದಕ್ಕೆ ಸಿಲುಕಿದೆ. ಹಿಂದಿನ ಪಂದ್ಯಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಿದ್ದ ಚಂದೀಗಡ ಪೊಲೀಸರಿಗೆ ಕೊಡಬೇಕಿರುವ 5 ಕೋಟಿ ರೂ ಬಾಕಿ ಹಣವನ್ನು ಉಳಿಸಿಕೊಳ್ಳಲಾಗಿದೆ. ಈ ಹಣವನ್ನು ಕಟ್ಟುವಂತೆ ಪೊಲೀಸರು ತಿಳಿಸಿದ್ದಾರೆ.
"ಚಂಡೀಗಡದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಭದ್ರತಾ ವ್ಯವಸ್ಥೆ ಮಾಡಿದ್ದೇವೆ.. ಮೊಹಾಲಿಯಲ್ಲಿ ಹಿಂದೆ ನಡೆದ ಪಂದ್ಯಗಳಿಗೂ ಭದ್ರತಾ ವ್ಯವಸ್ಥೆ ಮಾಡಿದ್ದೆವು. ಬಾಕಿ ಉಳಿಸಿಕೊಳ್ಳಲಾಗಿರುವ ಆ ಹಣವನ್ನು ಕಟ್ಟುವಂತೆ ಪಂಜಾಬ್ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದೇವೆ" ಎಂದು ಚಂಡೀಗಡದ ಎಸ್ಎಸ್ಪಿ ಮನೀಶಾ ಚೌಧರಿ ಹೇಳಿದ್ದಾರೆ.
ಕ್ರಿಕೆಟ್ ಸರಣಿಗಳು
ಸೆಪ್ಟೆಂಬರ್ 20, 23 ಮತ್ತು 25ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಮೊದಲ ಪಂದ್ಯವೇ ಮೊಹಾಲಿಯಲ್ಲಿದೆ. ನಾಗಪುರ ಮತ್ತು ಹೈದರಾಬಾದ್ನಲ್ಲಿ ಉಳಿದೆರಡು ಪಂದ್ಯಗಳು ನಡೆಯಲಿವೆ.
ಇದಾದ ಬಳಿಕ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಆ ನಂತರ ಅಕ್ಟೋಬರ್ 6ರಿಂದ 11ರವರೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಈ ಎರಡು ಸರಣಿ ಬಳಿಕ ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾಗೆ ಟೀಮ್ ಇಂಡಿಯಾ ತೆರಳಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications