Champions Trophy Ind vs Ban: ಮೊಹಮ್ಮದ್ ಶಮಿ 5 ವಿಕೆಟ್; ಭಾರತಕ್ಕೆ 229 ರನ್ಗಳ ಗುರಿ ನೀಡಿದ ಬಾಂಗ್ಲಾದೇಶ
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಬಾಂಗ್ಲಾದೇಶ ಬಳಿಕ ಚೇತರಿಸಿಕೊಂಡಿತು. 35 ರನ್ ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡಿದ್ದ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. ಬಳಿಕ ತೌವಿದ್ ಹ್ರಿದೋಯ್ ಮತ್ತು ಜೇಕರ್ ಅಲಿ ತಂಡಕ್ಕೆ ಆಸರೆಯಾದರು.
6ನೇ ವಿಕೆಟ್ಗೆ ಈ ಜೋಡಿ 154 ರನ್ಗಳನ್ನು ಕಲೆ ಹಾಕುವ ಮೂಲಕ ತಂಡವನ್ನು ಕಡಿಮೆ ಮೊತ್ತಕ್ಕೆ ಕುಸಿಯುವ ಅಪಾಯದಿಂದ ಪಾರು ಮಾಡಿದರು. ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಮಾಡಿತು. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಫೀಲ್ಡಿಂಗ್ನಲ್ಲಿ ಮಾಡಿದ ತಪ್ಪುಗಳು ಬಾಂಗ್ಲಾದೇಶಕ್ಕೆ ನೆರವಾವು.

ಬಾಂಗ್ಲಾದೇಶ 35 ರನ್ ಗಳಿಸಿದ್ದಾಗ ಜೇಕರ್ ಅಲಿ ತಮ್ಮ ಮೊದಲನೇ ಎಸೆತದಲ್ಲೇ ಔಟ್ ಆಗಬೇಕಿತ್ತು, ಆದರೆ ನಾಯಕ ರೋಹಿತ್ ಶರ್ಮಾ ಸುಲಭವಾದ ಕ್ಯಾಚ್ ಕೈ ಚೆಲ್ಲಿದರು. ಬಳಿಕ ಜೇಕರ್ ಅಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. 114 ಎಸೆತಗಳಲ್ಲಿ ತಾಳ್ಮೆಯ 68 ರನ್ ಗಳಿಸಿ ಮಿಂಚಿದರು.
ತೌವಿದ್ ಹ್ರಿದೋಯ್ ಕಾಲು ನೋವಿನ ನಡುವೆ ಕೂಡ ಸ್ಮರಣೀಯ ಶತಕ ಗಳಿಸುವ ಮೂಲಕ ಬಾಂಗ್ಲಾದೇಶ ತಂಡಕ್ಕೆ ನೆರವಾದರು. ಸಂಕಷ್ಟದ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ಗೆ ಬಂದ ಅವರು, ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು ಆಡಿದರು. ಒಂದು ಹಂತದಲ್ಲಿ ಕಾಲುನೋವಿನಿಂದ ಬಳಲುತ್ತಿದ್ದರೂ ಛಲ ಬಿಡದೆ ಆಡಿದರು. 114 ಎಸೆತಗಳಲ್ಲಿ 6 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ ಶತಕ ಬಾರಿಸಿದರು.
5 ವಿಕೆಟ್ ಪಡೆದ ಮೊಹಮ್ಮದ್ ಶಮಿ
9ನೇ ಓವರ್ ನಲ್ಲಿ ದಾಳಿಗೆ ಇಳಿದ ಅಕ್ಷರ್ ಪಟೇಲ್ ಬಾಂಗ್ಲಾದೇಶ ಆಘಾತ ನೀಡಿದರು. ಎರಡನೇ ಎಸೆತದಲ್ಲೇ ತಂಜಿದ್ ಹಸನ್ರನ್ನು ಔಟ್ ಮಾಡಿದರೆ, ಮೂರನೇ ಎಸೆತದಲ್ಲಿ ಮುಷ್ಫಿಕರ್ ರಹೀಮ್ರನ್ನು ಔಟ್ ಮಾಡಿದರು. ಹ್ಯಾಟ್ರಿಕ್ ಅವಕಾಶ ಗಳಿಸಿಕೊಂಡ ಅಕ್ಷರ್ ಪಟೇಲ್, ಮೂರನೇ ಎಸೆತದಲ್ಲೂ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದ್ದರು. ಸ್ಲಿಪ್ನಲ್ಲಿದ್ದ ರೋಹಿತ್ ಶರ್ಮಾ ಜೇಕರ್ ಅಲಿ ಅವರ ಕ್ಯಾಚ್ ಕೈಚೆಲ್ಲುವ ಮೂಲಕ ಅಕ್ಷರ್ ಪಟೇಲ್ ಹ್ಯಾಟ್ರಿಕ್ ಪಡೆಯುವ ಅವಕಾಶ ಕಳೆದುಕೊಂಡರು.
ಮೊಹಮ್ಮದ್ ಶಮಿ 10 ಓವರ್ ಗಳಲ್ಲಿ 53 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು. ಹರ್ಷಿತ್ ರಾಣಾ 7.4 ಓವರ್ ಗಳಲ್ಲಿ ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದುಕೊಂಡರು. ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಪಡೆದರು.












Click it and Unblock the Notifications