Team India: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮುನ್ನವೇ ದಿಢೀರ್ ಮನೆಗೆ ತೆರಳಿದ ಭಾರತ ತಂಡದ ಬೌಲಿಂಗ್ ಕೋಚ್
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯವನ್ನಾಡಲು ಭಾರತ ಸಜ್ಜಾಗಿದೆ. ಫೆಬ್ರವರಿ 19ರಂದು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದ್ದು, ಫೆಬ್ರವರಿ 20 ರಂದು ಭಾರತ ಮೊದಲ ಪಂದ್ಯ ಆಡಲಿದೆ. ಮೊದಲ ಪಂದ್ಯಕ್ಕೆ ಮುನ್ನವೇ ಭಾರತಕ್ಕೆ ಆಘಾತ ಎದುರಾಗಿದೆ. ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ದಿಢೀರ್ ವಾಪಸ್ ತೆರಳಿದ್ದಾರೆ.
ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿರುವ ಮೋರ್ನೆ ಮಾರ್ಕೆಲ್ ಅವರ ತಂದೆ ನಿಧನರಾಗಿದ್ದು ದುಬೈನಿಂದ ತವರಿಗೆ ವಾಪಸ್ ಹೋಗಿದ್ದಾರೆ. ಫೆಬ್ರವರಿ 15 ರಂದು ಭಾರತ ತಂಡದ ಸದಸ್ಯರ ಜೊತೆ ದುಬೈಗೆ ತೆರಳಿದ್ದರು. ಈಗಾಗಲೇ ಭಾರತ ತಂಡ ಅಭ್ಯಾಸ ನಡೆಸಿದ್ದು ಮಾರ್ನೆ ಮಾರ್ಕೆಲ್ ವೈಯಕ್ತಿಕ ಕಾರಣದಿಂದಾ ಅನಿವಾರ್ಯವಾಗಿ ವಾಪಸ್ ತೆರಳಬೇಕಾಗಿದೆ.

ಸೋಮವಾರ ಭಾರತ ತಂಡ ಅಭ್ಯಾಸ ನಡೆಸಿದ್ದು ಮೋರ್ನೆ ಮಾರ್ಕೆಲ್ ಪಾಲ್ಗೊಂಡಿರಲಿಲ್ಲ. ದಕ್ಷಿಣ ಆಫ್ರಿಕಾಗೆ ತೆರಳಿರುವ ಮಾರ್ನೆ ಮಾರ್ಕೆಲ್ ವಾಪಸ್ ಭಾರತ ತಂಡವನ್ನು ಯಾವಾಗ ಸೇರಿಕೊಳ್ಳುತ್ತಾರೆ ಎನ್ನುವುದು ಇನ್ನೂ ದೃಢೀಕರಿಸಲು ಆಗಿಲ್ಲ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ಮೊದಲ ಪಂದ್ಯಕ್ಕೆ ಇನ್ನೂ ಒಂದು ದಿನ ಇರುವಾಗಲೇ ಬೌಲಿಂಗ್ ಕೋಚ್ ಅಲಭ್ಯತೆ ಭಾರತ ತಂಡದ ಮೇಲೆ ಪರಿಣಾಮ ಬೀರುತ್ತದೆ.
ಭಾರತ ತಂಡದ ಕಠಿಣ ಅಭ್ಯಾಸ
2024ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವ ಅವಕಾಶ ಕಳೆದುಕೊಂಡಿತು. ಇದೀಗ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದು ಕಠಿಣ ಅಭ್ಯಾಸ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಫಾರ್ಮ್ಗೆ ಮರಳಿರುವುದು ಭಾರತ ತಂಡದ ಬಲವನ್ನು ಹೆಚ್ಚಿಸಿದೆ. ಶ್ರೇಯಸ್ ಅಯ್ಯರ್ ಕೂಡ ಉತ್ತಮ ಫಾರ್ಮ್ನಲ್ಲಿದ್ದು ಮಧ್ಯಮ ಕ್ರಮಾಂಕಕ್ಕೆ ಬಲ ತಂದುಕೊಡಲಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ತಂಡದ ಫಿನಿಷರ್ ಆಗಿ ಕಣಕ್ಕಿಳಿಯಲಿದ್ದು ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ರಿಷಬ್ ಪಂತ್ ಅಭ್ಯಾಸದ ವೇಳೆಯಲ್ಲಿ ಗಾಯಗೊಂಡಿದ್ದರು ಅವರು ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಆದರೂ ಪಂತ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 29 ಎಸೆತಗಳಲ್ಲಿ 40 ರನ್ ಗಳಿಸಿದ ರಾಹುಲ್, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. 5 ಅಥವಾ 6ನೇ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ಗೆ ಇಳಿಯಲಿದ್ದಾರೆ. ಅಭ್ಯಾಸದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವತ್ತ ಹೆಚ್ಚು ಗಮನ ಹರಿಸಿದ್ದಾರೆ.












Click it and Unblock the Notifications