ಭಾರತ ಎ vs ನ್ಯೂಜಿಲೆಂಡ್ ಎ ಟೆಸ್ಟ್: ಹುಬ್ಬಳ್ಳಿ ಫ್ಯಾನ್ಸ್ಗೆ ಮತ್ತೆ ನಿರಾಸೆ ಮೂಡಿಸಿದ ಮಳೆರಾಯ
ಹುಬ್ಬಳ್ಳಿ, ಸೆಪ್ಟೆಂಬರ್ 10 : ಇಲ್ಲಿನ ರಾಜನಗರ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ನ್ಯೂಜಿಲ್ಯಾಂಡ್ ಎ ತಂಡಗಳ ನಡುವಿನ ಚತುರ್ದಿನ ಟೆಸ್ಟ್ ಪಂದ್ಯಕ್ಕೆ ಮತ್ತೆ ಮಳೆ ಅಡಚಣೆಯನ್ನುಂಟು ಮಾಡಿದೆ. ಈಗಾಗಲೇ ಪಂದ್ಯ 3ನೇ ದಿನಕ್ಕೆ ಕಾಲಿಟ್ಟಿದೆ, ಮೊದಲ ದಿನ ಮಳೆಗೆ ಸಂಪೂರ್ಣ ಆಹುತಿಯಾದರೆ, 2ನೇ ದಿನ ಆಡ ತಡವಾಗಿ ಆರಂಭವಾದರೂ ದಿನಪೂರ್ತಿ ಆಟ ನಡೆದಿತ್ತು.
ಆದರೆ, 3ನೇ ದಿನವಾದ ಶನಿವಾರ ಮತ್ತೆ ಪಂದ್ಯ ಮುಂದುವರಿಯಲು ಸಾಧ್ಯವಾಗಿಲ್ಲ, ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಪಿಚ್ ಅನ್ನು ಮುಚ್ಚಲಾಗಿದ್ದು, ಹೊರ ಮೈದಾನದಲ್ಲಿ ನಿಂತಿರುವ ಮಳೆ ನೀರನ್ನು ಸಿಬ್ಬಂದಿ ಇಂದು ತೆರವುಗೊಳಿಸುತ್ತಿದ್ದಾರೆ. ಶುಕ್ರವಾರ ತಡರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಬೆಳಗ್ಗೆ 10 ಗಂಟೆ ತನಕ ತುಂತುರು ಮಳೆ ಮುಂದುವರಿದಿತ್ತು. ಕ್ರೀಡಾಂಗಣ ಸಾಕಷ್ಟು ಹಸಿಯಾಗಿದೆ. ಅದನ್ನು ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸತತ ಮಳೆ ಹಾಗೂ ಮೈದಾನದಲ್ಲಿ ತೇವಾಂಶವಿರುದ ಕಾರಣ ಪಂದ್ಯ ಆರಂಭ ಕಾಣುವುದು ಅನುಮಾನವಾಗಿದೆ.
ಹೋಟೆಲ್ಗೆ ಮರಳಿದ ಆಟಗಾರರು
ಬೆಳಿಗ್ಗೆ ಎಂದಿನಂತೆ ಭಾರತ ತಂಡದ ಆಟಗಾರರು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ, ಆಟವಾಡಲು ಪರಿಸ್ಥಿತಿ ಅನುಕೂಲವಿಲ್ಲದ್ದರಿಂದ ಆಟಗಾರರು ಹೋಟೆಲ್ಗೆ ಮರಳಿದರು.ಇತ್ತ ಮಳೆಯ ಕಾರಣಕ್ಕೆ ಆಟ ಆರಂಭವಾಗುವ ಅನುಮಾನದಿಂದ ಕಿವೀಸ್ ತಂಡದ ಆಟಗಾರರು ಬೆಳಗ್ಗೆ ಕ್ರೀಡಾಂಗಣಕ್ಕೆ ಬರದೇ ಹೋಟೆಲ್ನಲ್ಲೇ ಉಳಿದರು.

ಇನ್ನು ಟಾಸ್ ಸೋತು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್ಗಳಲ್ಲಿ 6ವಿಕೆಟ್ ಕಳೆದುಕೊಂಡು 229 ರನ್ ಗಳಿಸಿದೆ. ವಿಕೆಟ್ ಕೀಪರ್ ಬ್ಯಾಟೆರ್ ಕೆ.ಎಸ್.ಭರತ್ 104 ಎಸೆತಗಳಲ್ಲಿ 10 ಬೌಂಡರಿ ಸಹಿತ 74 ಹಾಗೂ ರಾಹುಲ್ ಚಾಹರ್ 4 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಇನ್ನು ನಾಯಕ ಪ್ರಿಯಾಂಕ್ ಪಾಂಚಾಲ್ 148 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 87 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಭವಿಷ್ಯ ಆಟಗಾರರೆನಿಸಿಕೊಂಡಿರುವ ಋತುರಾಜ್ ಗಾಯಕ್ವಾಡ್(5)ತಿಲಕ್ ವರ್ಮಾ(0) ನಿರಾಶೆ ಮೂಡಿಸಿದರು. ಉಳಿದಂತೆ ಅಭಿಮನ್ಯು ಈಶ್ವರನ್ 22, ಶಾರ್ದೂಲ್ ಠಾಕೂರ್ 26 ರನ್ ಗಳಿಸಿದರು. ಕಿವೀಸ್ ಪರ ಜಾಕೋಬ್ ಡಫ್ಫಿ 55ಕ್ಕೆ 2, ಲೊಗಾನ್ ವ್ಯಾನ್ ಬೀಕ್ 39ಕ್ಕೆ 2, ರಚಿನ್ ರವೀಂದ್ರ ಹಾಗೂ ಸೀನ್ ಸೊಲಿಯಾ ತಲಾ ಒಂದು ವಿಕೆಟ್ ಪಡೆದರು.












Click it and Unblock the Notifications