Maharaja Trophy: ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೋತ ಮಂಗಳೂರು ಡ್ರಾಗನ್ಸ್; ಸೆಮಿಫೈನಲ್ ರೇಸ್ನಿಂದ ಹೊರಕ್ಕೆ
ಮಂಗಳೂರು ಡ್ರಾಗನ್ಸ್ ಇದೀಗ ಅಧಿಕೃತವಾಗಿ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಸೋಮವಾರ ನಡೆದ ಹುಬ್ಬಳ್ಳಿ ಟೈಗರ್ಸ್ ವಿರುದ್ದದ ಪಂದ್ಯದಲ್ಲಿ ಸೋತ ಮಂಗಳೂರು ಡ್ರಾಗನ್ಸ್ ಸೆಮಿಫೈನಲ್ ಆಸೆಯನ್ನು ಕೈಬಿಟ್ಟಿತು. ಮಂಗಳೂರು ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹುಬ್ಬಳ್ಳಿ ಟೈಗರ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ಡ್ರಾಗನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು.

ಕಾರ್ತಿಕೇಯ 9 ರನ್ ಗಳಿಸಿ ಔಟಾದರೆ, ಮೊಹಮ್ಮದ ತಾಹ ಡಕೌಟ್ ಆದರು. ಬಳಿಕ ಜೊತೆಯಾದ ಕೃಷ್ಣನ್ ಶ್ರೀಜಿತ್ ಮತ್ತು ಅನೀಶ್ವರ್ ಗೌತಮ್ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್ಗೆ ಈ ಜೋಡಿ 148 ರನ್ ಕಲೆಹಾಕಿತು. ಕೃಷ್ಣನ್ ಶ್ರೀಜಿತ್ 44 ಎಸೆತಗಳಲ್ಲಿ 7 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 77 ರನ್ ಗಳಿಸಿದರು. ಅನೀಶ್ವರ ಗೌತಮ್ 58 ಎಸೆತಗಳಲ್ಲಿ 8 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 95 ರನ್ ಗಳಿಸಿದರು. ನಾಯಕ ಮನೀಶ್ ಪಾಂಡೆ 11 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ ಮಿಂಚಿದರು.
ಆಲೌಟ್ ಆದ ಮಂಗಳೂರು
210 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮಂಗಳೂರು ಡ್ರಾಗನ್ಸ್ 19.2 ಓವರ್ ಗಳಲ್ಲಿ 167 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 42 ರನ್ಗಳಿಂದ ಸೋಲೊಪ್ಪಿಕೊಂಡಿತು. ರೋಹನ್ ಪಾಟಿಲ್ 25 ರನ್, ಕೆ ಸಿದ್ಧಾರ್ಥ್ 30 ರನ್, ಲೋಚನ್ ಗೌಡ 35 ರನ್, ಶ್ರೇಯಸ್ ಗೋಪಾಲ್ 38 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಹುಬ್ಬಳ್ಳಿ ಟೈಗರ್ಸ್ನ ನಿಶ್ಚಿತ್ ಪೈ 4 ಓವರ್ ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದರೆ, ರಿಶಿ ಬೋಪಣ್ಣ ಕೂಡ 4 ಓವರ್ ಗಳಲ್ಲಿ 28 ರನ್ ಬಿಟ್ಟುಕೊಟ್ಟು 3 ವಿಕೆಟ್ ಗಳಿಸಿದರು. ಈ ಗೆಲುವಿನ ಮೂಲಕ ಹುಬ್ಬಳ್ಳಿ ಟೈಗರ್ಸ್ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.












Click it and Unblock the Notifications