Hardik Pandya: ಅಂದು ವಿಲನ್ ಇಂದು ಹೀರೋ; ಹಾರ್ದಿಕ್ ಪಾಂಡ್ಯ ಶಾಪ ವಿಮೋಚನೆ!
17 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಬಾರ್ಬಡೋಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ರೋಚಕ ಗೆಲುವು ಸಾಧಿಸಿ, ಪ್ರಶಸ್ತಿ ಗೆದ್ದುಕೊಂಡಿತು.
ಭಾರತ ಗೆಲುವು ಸಾಧಿಸುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ನೆಲಕ್ಕೆ ಕುಸಿದು ಬಿದ್ದರು. ಅವರ ಮುಖದಲ್ಲಿ ಕೊನೆಗೂ ಸಾಧಿಸಿದ ನೆಮ್ಮದಿ, ಸಂತೋಷದ ಕಣ್ಣೀರು ಇತ್ತು. ಇದೇ ಹಾರ್ದಿಕ್ ಪಾಂಡ್ಯ 1 ತಿಂಗಳ ಹಿಂದೆ ವಿಲನ್ ಆಗಿದ್ದರು. ಆದರೆ ಈಗ ಆತ ಭಾರತ ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೀರೋ!

2024ರ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಪಾಂಡ್ಯ, ರೋಹಿತ್ ಶರ್ಮಾರಿಂದ ನಾಯಕತ್ವ ಪಡೆದುಕೊಂಡಿದ್ದರು. ಇದು ರೋಹಿತ್ ಶರ್ಮಾ ಅಭಿಮಾನಿಗಳನ್ನು ಕೆರಳಿಸಿತ್ತು.
ಗುಜರಾತ್ ಟೈಟಾನ್ಸ್ ಬಿಟ್ಟಿದ್ದಕ್ಕೆ ಅಲ್ಲಿನ ಅಭಿಮಾನಿಗಳು ಕೂಡ ಕೋಪಗೊಂಡಿದ್ದರು. ಹೋದಲ್ಲೆಲ್ಲಾ ಹಾರ್ದಿಕ್ ಪಾಂಡ್ಯಗೆ ಅವಮಾನವೇ ಸಿಕ್ಕಿತ್ತು. ಮೈದಾನದಲ್ಲಿ ಅಭಿಮಾನಿಗಳು ಹಾರ್ದಿಕ್ರನ್ನು ಅವಹೇಳನ ಮಾಡಿದ್ದರು.
ಅದಕ್ಕೆ ತಕ್ಕಂತೆ ಈ ಬಾರಿ ಐಪಿಎಲ್ನಲ್ಲಿ ಪಾಂಡ್ಯರಿಂದ ನಿರೀಕ್ಷಿತ ಪ್ರದರ್ಶನ ಸಿಕ್ಕಿರಲಿಲ್ಲ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅವರು ವಿಫಲರಾಗಿದ್ದರು. ಮುಂಬೈ ಇಂಡಿಯನ್ಸ್ ಕೂಡ ಹೀನಾಯ ಪ್ರದರ್ಶನ ನೀಡಿತ್ತು. 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದು 10 ಪಂದ್ಯಗಳಲ್ಲಿ ಸೋಲನುಭವಿಸಿತ್ತು.
ಸತತ ವೈಫಲ್ಯದ ನಡುವೆಯೂ ಪಾಂಡ್ಯ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅವರ ಆಯ್ಕೆ ಬಗ್ಗೆ ಕೂಡ ಸಾಕಷ್ಟು ಟೀಕೆ ಕೇಳಿಬಂದಿತ್ತು. ವಿಫಲವಾದರೂ ಪಾಂಡ್ಯಗೆ ಅವಕಾಶ ಸಿಕ್ಕಿದ್ದೇಗೆ ಎಂದು ಪ್ರಶ್ನೆ ಮಾಡಿದ್ದರು. ಆದರೆ ಪಾಂಡ್ಯ ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚು ಹರಿಸಿದರು. ಆರು ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ ಅವರು 48 ಸರಾಸರಿಯಲ್ಲಿ 144 ರನ್ ಗಳಿಸಿದರು. ಜೊತೆಗೆ 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಪಂದ್ಯದ ದಿಕ್ಕು ಬದಲಿಸಿದ ಪಾಂಡ್ಯ
ಫೈನಲ್ ಪಂದ್ಯದಲ್ಲಿ 177 ರನ್ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಸುಲಭವಾಗಿ ಗೆಲ್ಲುತ್ತದೆ ಎನ್ನುವ ಹಂತದಲ್ಲಿತ್ತು. ಹೆನ್ರಿಚ್ ಕ್ಲಾಸೆನ್ 27 ಎಸೆತಗಳಲ್ಲಿ 57 ರನ್ ಗಳಿಸಿ ಅಪಾಯಕಾರಿ ಬ್ಯಾಟರ್ ಆಗಿದ್ದರು. ಈ ಹಂತದಲ್ಲಿ ಬೌಲಿಂಗ್ ಮಾಡಿದ ಪಾಂಡ್ಯ ಕ್ಲಾಸೆನ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಬದಲಿಸಿದರು. ಅಂದು ವಿಲನ್ ಆಗಿದ್ದ ಪಾಂಡ್ಯ ಇಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೀರೋ ಆಗಿದ್ದಾರೆ.
ಬಳಿಕ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಕೊನೆಯಲ್ಲಿ ಬಿಗಿ ಬೌಲಿಂಗ್ ದಾಳಿ ಮಾಡುವ ಮೂಲಕ ಹರಿಣಗಳನ್ನು ಕಟ್ಟಿಹಾಕಿದರು.












Click it and Unblock the Notifications