ತಮಿಳುನಾಡಿನ ಕ್ರಿಕೆಟ್ ಆಟಗಾರರಿಗೆ ಸ್ಪಾಟ್ ಫಿಕ್ಸಿಂಗ್ ಗಾಳ: ಜೈಲು ಪಾಲಾದ ಬನ್ನಿ ಆನಂದ!
ಬೆಂಗಳೂರು, ಜ. 21: ಕ್ರಿಕೆಟ್ ಬೆಟ್ಟಿಂಗ್ನಿಂದಾಗಿ ಸಾಲದ ಸುಳಿಗೆ ಸಿಲುಕಿದ್ದ ಯುವಕನೊಬ್ಬ ಕ್ರಿಕೆಟ್ನಿಂದಲೇ ಹಣ ಮಾಡಲು ಖತರ್ನಾಕ್ ಪ್ಲಾನ್ ರೂಪಿಸಿದ್ದ. ಕ್ರಿಕೆಟ್ ಆಟಗಾರರಿಗೆ ಬೆಟ್ಟಿಂಗ್ ಅಮಿಷವೊಡ್ಡಿ ಖೆಡ್ಡಾಗೆ ಬೀಳಿಸಲು ಹೋದ ಯುವಕನೊಬ್ಬ ಆತ ತೋಡಿದ ಖೆಡ್ಡಾಗೆ ಬಿದ್ದು ಜೈಲು ಸೇರಿದ್ದಾನೆ.
ಐಪಿಎಲ್ ಕ್ರಿಕೆಟ್ ಆಟಗಾರರಿಗೆ ಬೆಟ್ಟಿಂಗ್ ಅಮಿಷವೊಡ್ಡಿ ಬ್ಲಾಕ್ ಮೇಲ್ ಮಾಡಿ ಹಣ ಗಳಿಸಲು ಯತ್ನಿಸಿದ ಬಾಗೇಪಲ್ಲಿ ಮೂಲದ ಆನಂದ ಕುಮಾರ್ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಾಗೇಪಲ್ಲಿ ಮೂಲದ ಆನಂದ್ ಕುಮಾರ್ ಅಲಿಯಾಸ್ ಬನ್ನಿ ಆನಂದ್ 9 ವರ್ಷದ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿದ್ದ. ತನ್ನ ತಾಯಿ ಜತೆ ವಾಸವಾಗಿದ್ದ. ಕ್ರಿಕೆಟ್ ಬಗ್ಗೆ ಹುಚ್ಚು ಬೆಳೆಸಿಕೊಂಡಿದ್ದ ಆನಂದ್, ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ಹೀಗಾಗಿ ಐದು ಲಕ್ಷ ಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಕ್ರಿಕೆಟ್ ಬೆಟ್ಟಿಂಗ್ನಿಂದ ಹಣ ಕಳೆದುಕೊಂಡಿದ್ದ ಆನಂದ್, ಕ್ರಿಕೆಟ್ನಿಂದಲೇ ಹಣ ಗಳಿಸುವ ಯೋಜನೆ ಹಾಕಿಕೊಂಡಿದ್ದ.

ಅದರಂತೆ ತಮಿಳುನಾಡಿನ ಕ್ರಿಕೆಟಿಗ ರಾಜಗೋಪಾಲ್ ಸತೀಶ್ಗೆ ಸ್ಪಾಟ್ ಫಿಕ್ಸಿಂಗ್ ಅಮಿಷವೊಡ್ಡಿ ಇನ್ಸ್ಟಾಗ್ರಾಂ ಮೂಲಕ ಸಂದೇಶ ರವಾನಿಸಿದ್ದ. ಟಿಎನ್ಪಿಎಲ್ನಲ್ಲಿ ಫಿಕ್ಸಿಂಗ್ನಲ್ಲಿ ಭಾಗಿಯಾಗುವಂತೆ ಸಂದೇಶ ರವಾನಿಸಿದ್ದ. ತಾನು ಹೇಳಿದಂತೆ ಕೇಳಿದ್ರೆ ಪ್ರತಿ ಪಂದ್ಯಕ್ಕೆ 40 ಲಕ್ಷ ರೂ. ಹಣ ನೀಡುವುದಾಗಿ ಸಂದೇಶ ರವಾನಿಸಿದ್ದ.
ಈ ಸಂದೇಶ ನೋಡಿ ಗಾಬರಿಯಾಗಿದ್ದ ಕ್ರಿಕೆಟಿಗ ರಾಜಗೋಪಾಲ ಸತೀಶ್ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಬಿಸಿಸಿಐ ನೀಡಿದ ದೂರಿನ ಆಧಾರದ ಮೇಲೆ ದಕ್ಷಿಣ ವಿಭಾಗದ ಭ್ರಷ್ಟಾಚಾರ ನಿಗ್ರಹ ಘಟಕ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರಿನ ಅನ್ವಯ ಆನಂದ್ ಕುಮಾರ್ನನ್ನು ಬಂಧಿಸಿದಾಗ ಬೆಟ್ಟಿಂಗ್ ಅಮಿಷವೊಡ್ಡಿ ಮೆಸೇಜ್ ಮಾಡುವುದು. ಅದಕ್ಕೆ ಸಮ್ಮತಿಸಿದರೆ ಅಂತಹ ಕ್ರಿಕೆಟಿಗನನ್ನು ಬ್ಲಾಕ್ ಮೇಲ್ ಮಾಡಿ ಹಣ ಮಾಡಲು ಪ್ಲಾನ್ ರೂಪಿಸಿರುವುದು ಗೊತ್ತಾಗಿದೆ.

ಮಾತ್ರವಲ್ಲ ಇದೇ ರೀತಿ ಇತರೆ ನಾಲ್ವರು ಕ್ರಿಕೆಟ್ ಆಟಗಾರರಿಗೆ ಸಂದೇಶ ರವಾನಿಸಿದ್ದಾನೆ. ಆದರೆ ಅವರು ಯಾರೂ ಈತನ ಸಂದೇಶ ನೋಡದೇ ಸುಮ್ಮನಾಗಿದ್ದಾರೆ. ತಮಿಳುನಾಡಿನ ಕ್ರಿಕೆಟಿಗ ಆಂಟೋನಿದಾಸ್, ಅಶ್ವಿನ್ ಕ್ರಿಸ್ಟ್, ಎಂ. ಸಿದ್ದಾರ್ಥ ಎಂಬವರಿಗೂ ಸ್ಪಾಟ್ ಫಿಕ್ಸಿಂಗ್ ಸಂದೇಶ ರವಾನಿಸಿದ್ದಾನೆ. ಇವರ ಪೈಕಿ ರಾಜಗೋಪಾಲ್ ಸತೀಶ್ ಬಿಸಿಸಿಐ ಗಮನಕ್ಕೆ ತಂದು ದೂರು ಕೊಡಿಸಿದ್ದಾರೆ. ಅದರ ಆಧಾರದ ಮೇಲೆ ಬನ್ನಿ ಅನಂದನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications