RCB: ಎರಡು ವರ್ಷದಿಂದ ಕಾಯುತ್ತಿರುವ ಕನ್ನಡಿಗನಿಗೆ ಅವಕಾಶ ಕೊಡಿ ಎಂದ ಅಭಿಮಾನಿಗಳು
ವಿಜಯ್ ಮಲ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾಲೀಕರಾಗಿದ್ದಾಗ ಕರ್ನಾಟಕದ ಆಟಗಾರರಿಗೆ ತಂಡದಲ್ಲಿ ಹೆಚ್ಚಾಗಿ ಅವಕಾಶ ಸಿಗುತ್ತಿತ್ತು. ಆದರೆ ಅವರು ಮಾಲೀಕತ್ವ ತೊರೆದ ನಂತರ ಆರ್ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ.
ತಂಡದಲ್ಲಿದ್ದ ಕರ್ನಾಟಕ ಆಟಗಾರರನ್ನು ಕೈಬಿಟ್ಟ ಆರ್ಸಿಬಿ ಹೆಸರಿಗಷ್ಟೇ ಒಂದಿಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತದೆ. ಎರಡು ಮೂರು ವರ್ಷ ತಂಡದಲ್ಲಿದ್ದರೂ ಅವರಿಗೆ ಅವಕಾಶ ಕೊಡದೆ ಬಳಿಕ ತಂಡದಿಂದ ಬಿಡುಗಡೆ ಮಾಡುತ್ತದೆ. ಆರ್ಸಿಬಿ ಫ್ರಾಂಚೈಸಿಯ ಈ ವರ್ತನೆ ಬಗ್ಗೆ ಅಭಿಮಾನಿಗಳಿಗೆ ಮೊದಲಿನಿಂದಲೂ ಅಸಮಾಧಾನ ಇದೆ.

ಈ ಬಾರಿ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಆರ್ಸಿಬಿ ತಂಡ, ಆಡಿರುವ 9 ಪಂದ್ಯಗಳಲ್ಲಿ 22 ಆಟಗಾರರಿಗೆ ಅವಕಾಶ ಕೊಟ್ಟಿದೆ. ಇನ್ನು ಮೂವರು ಆಟಗಾರರು ಮಾತ್ರ ಈ ಆವೃತ್ತಿಯಲ್ಲಿ ಒಂದು ಪಂದ್ಯವನ್ನು ಆಡಿಲ್ಲ.
ಟಾಮ್ ಕರನ್, ರಜನ್ ಕುಮಾರ್ ಮತ್ತು ಕನ್ನಡಿಗ ಮನೋಜ್ ಭಾಂಡಗೆ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಇದುವರೆಗೂ ಅವಕಾಶ ಸಿಕ್ಕಿಲ್ಲ. ಮನೋಜ್ ಭಾಂಡಗೆ ಕಳೆದ ಆವೃತ್ತಿಯಿಂದ ತಂಡದಲ್ಲಿದ್ದರೂ, ಅತ್ಯುತ್ತಮ ಆಲ್ರೌಂಡರ್ ಆಗಿದ್ದರೂ ಅವರಿಗೆ ಅವಕಾಶ ಸಿಗದೇ ಇರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.
ಮುಂದಿನ ಪಂದ್ಯದಲ್ಲಾದರೂ ಅವಕಾಶ ಕೊಡಿ
ಈಗಾಗಲೇ ಆರ್ಸಿಬಿ ಪ್ಲೇಆಫ್ ಕನಸು ಬಹುತೇಕ ಕೈಬಿಟ್ಟಿದೆ. ಮುಂದಿನ 5 ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಬಹಳ ಕಡಿಮೆ ಇದೆ. ಈ ಸಂದರ್ಭದಲ್ಲಿ ಮನೋಜ್ ಭಾಂಡಗೆ ಅವರಿಗೂ ಮುಂದಿನ ಪಂದ್ಯಗಳಲ್ಲಿ ಅವಕಾಶ ಕೊಟ್ಟು ನೋಡಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಮನೋಜ್ ಭಾಂಡಗೆ ಅತ್ಯುತ್ತಮ ಆಲ್ರೌಂಡರ್, ದೇಶೀಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 21 ಟಿ20 ಪಂದ್ಯಗಳನ್ನಾಡಿರುವ ಅವರು 10 ಇನ್ನಿಂಗ್ಸ್ಗಳಲ್ಲಿ 151 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 142.45 ಆಗಿದೆ. 15 ಇನ್ನಿಂಗ್ಸ್ಗಳಲ್ಲಿ 11 ವಿಕೆಟ್ ಕೂಡ ಪಡೆದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದು, ಒಂದು ಅವಕಾಶ ಕೊಟ್ಟು ನೋಡಲಿ ಎನ್ನುವುದು ಅಭಿಮಾನಿಗಳ ಆಗ್ರಹ.
ಬೆಂಗಳೂರಿನಂತಹ ಪಿಚ್ಗಳಲ್ಲಿ ಮಧ್ಯಮ ವೇಗಿಯಾಗಿರುವ ಮನೋಜ್ ಭಾಂಡಗೆ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಕರ್ನಾಟಕ ತಂಡಕ್ಕೆ ಆಡುವ ಅವರಿಗೆ ಪಿಚ್ ಬಗ್ಗೆ ಕೂಡ ಗೊತ್ತಿರುತ್ತದೆ. ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಆಡುವ ಸಾಮರ್ಥ್ಯ ಕೂಡ ಅವರಿಗೆ ಇದೆ.
ಮುಂದಿನ ಪಂದ್ಯಗಳಲ್ಲಾದರೂ ಎರಡು ವರ್ಷದಿಂದ ಬೆಂಚ್ ಕಾದಿರುವ ಕನ್ನಡಿಗನಿಗೆ ಆರ್ ಸಿಬಿ ಒಂದು ಅವಕಾಶ ನೀಡಲಿ.












Click it and Unblock the Notifications