RCB Good News: ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೂ ಗುಡ್ನ್ಯೂಸ್ ಕೊಟ್ಟ ಡಿ.ಕೆ.ಶಿವಕುಮಾರ್
ಆರ್ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದು ಬಂದು ಇತಿಹಾಸ ನಿರ್ಮಿಸಿದೆ. ಆದರೆ ಅಭಿಮಾನಿಗಳ ಸಂಭ್ರಮಾಚರಣೆಯು ಶೋಕಾಚರಣೆಯಾಗಿ ಮಾರ್ಪಟ್ಟಿದ್ದ ದುರಂತ ಇನ್ನೂ ಮಾಸಿಲ್ಲ. ಆರ್ಸಿಬಿ ಆಟಗಾರರನ್ನು ಅಭಿನಂದಿಸಲು ಬಂದಿದ್ದ ಕೆಲ ಅಭಿಮಾನಿಗಳು ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದರು. ಈ ಘಟನೆ ಬಳಿಕ ಬೆಂಗಳೂರಿನಲ್ಲಿ ಮುಂದಿನ ಐಪಿಎಲ್ ಟೂರ್ನಿಯ ಆರ್ಸಿಬಿ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಇದರಿಂದ ಆತಂಕಗೊಂಡಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೂ ರಿಲೀಫ್ ಸಿಕ್ಕಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹತ್ವದ ಸಂದೇಶ ನೀಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಇಲ್ಲಿ ಆರ್ಸಿಬಿ ಪಂದ್ಯಾವಳಿಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿತ್ತು. ಇದರಿಂದ ಕೋಟ್ಯಂತರ ಆರ್ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು. ಈ ಗೊಂದಲದಲ್ಲೇ ಇದ್ದ ಅಭಿಮಾನಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಹಿಸುದ್ದಿ ನೀಡಿದ್ದಾರೆ. ಅಲ್ಲದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ವಾಪಸ್ ತರುವ ಬಗ್ಗೆ ಡಿಕೆಶಿ ಮಹತ್ವದ ಮಾಹಿತಿ ನೀಡಿದ್ದಾರೆ.

ನಾನೂ ಕ್ರಿಕೆಟ್ ಅಭಿಮಾನಿ, ಆರ್ಸಿಬಿ ನಮ್ಮ ಹೆಮ್ಮೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೋಗುತ್ತಿರುವ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನಾವು ವಾಪಸ್ ತರ್ತೀವಿ. ನಮ್ಮ ಬೆಂಗಳೂರು ಎಂದಿಗೂ ಕ್ರಿಕೆಟ್ ಹಬ್ ಆಗಿ ಉಳಿಯಬೇಕು. ಹೀಗಾಗಿ 2026ರ ಐಪಿಎಲ್ ಪಂದ್ಯಗಳು ಕೂಡ ಬೆಂಗಳೂರಿನಲ್ಲೇ ನಡೆಯುತ್ತವೆ. ಐಪಿಎಲ್ನಂತಹ ದೊಡ್ಡ ಟೂರ್ನಿಗಳು ಬೆಂಗಳೂರಿನ ಕೈತಪ್ಪದಂತೆ ನೋಡಿಕೊಳ್ಳುತ್ತೇವೆ. ನಾನು ಕೂಡ ಕ್ರಿಕೆಟ್ ಅಭಿಮಾನಿ, ಆರ್ಸಿಬಿ ನಮ್ಮ ಹೆಮ್ಮೆ, ನಾನು ಎಲ್ಲ ಸಮಸ್ಯೆಯನ್ನ ಸರಿ ಮಾಡುತ್ತೇನೆ ಎಂದು ಅಭಯ ನೀಡಿದ್ದಾರೆ. ತಮ್ಮ ಮಾತಿನ ಮೂಲಕ ಡಿಕೆಶಿ, ನಿರಾಸೆಯಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ರಿಲೀಫ್ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಚುನಾವಣೆಯ ಮತದಾನದ ಬಳಿಕ ಈ ವಿಚಾರದ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ನಾನು ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ. ಯಾವುದೇ ಕಾರಣಕ್ಕೂ ಇಲ್ಲಿಂದ ಐಪಿಎಲ್ ಪಂದ್ಯಗಳು ಕೈತಪ್ಪಲು ಬಿಡುವುದಿಲ್ಲ. ನಮ್ಮ ಹೆಮ್ಮೆಯಾದ ಆರ್ಸಿಬಿ ತಂಡದ ಎಲ್ಲ ಪಂದ್ಯಗಳು ತವರಿನಲ್ಲೇ ನಡೆಯಲಿವೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಹಿಂದೆ ಏನೆಲ್ಲ ಅನಾಹುತ ಆಗಿದೆಯೋ ಅದನ್ನು ತಪ್ಪಿಸಿ, ಬೆಂಗಳೂರು ನಗರದ ಗೌರವ ಉಳಿಸುವ ಕೆಲಸವನ್ನು ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಅಭಿಮಾನಿಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಟೇಡಿಯಂ ಅನ್ನು ಜಾಗ್ರತೆಯಿಂದ ಬಳಸುತ್ತೇವೆ. ಚಿನ್ನಸ್ವಾಮಿಗೆ ಪರ್ಯಾಯವಾಗಿ ಬೇರೆ ಸ್ಟೇಡಿಯಂ ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆಗಳು ನಡೆದಿವೆ ಎಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ಬೆಂಗಳೂರಿನಿಂದ ಸ್ಥಳಾಂತರವಾಗುವ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಂತಾಗಿದೆ.












Click it and Unblock the Notifications