ಭಾರತದ ಎದುರು ಸೋತ ಪಾಕಿಸ್ತಾನದ ಬಾಕ್ಸರ್ ಮತ್ತು ಬ್ಯಾಡ್ಮಿಂಟನ್ ಟೀಮ್
ಬರ್ಮಿಂಗ್ಹ್ಯಾಂ, ಜುಲೈ 29: ಇಲ್ಲಿ ಶುಕ್ರವಾರ ಆರಂಭಗೊಂಡ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ಫಲ ಅನುಭವಿಸಿದೆ. ಬಾಕ್ಸಿಂಗ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಹಾಕಿ ಸ್ಪರ್ಧೆಯಲ್ಲಿ ಭಾರತೀಯರು ಸುಲಭ ಗೆಲುವು ಪಡೆದಿದ್ದಾರೆ.
ಬಾಕ್ಸಿಂಗ್ನಲ್ಲಿ ಪಾಕಿಸ್ತಾನೀ ಆಟಗಾರನ ಎದುರು ಭಾರತದ ಶಿವ ಥಾಪ ಸುಲಭ ಜಯ ಸಂಪಾದಿಸಿದರು. ಬ್ಯಾಡ್ಮಿಂಟನ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಕ್ಲೀನ್ ಸ್ವೀಪ್ ಮಾಡಿತು. ಟೇಬಲ್ ಟೆನಿಸ್ನಲ್ಲಿ ಭಾರತ ಮಹಿಳಾ ತಂಡ ಸತತ ಎರಡು ಗೆಲುವು ಪಡೆಯಿತು. ಹಾಕಿಯಲ್ಲಿ ಭಾರತದ ವನಿತೆಯರು ಘಾನಾವನ್ನು ಬಗ್ಗುಬಡಿದರು.
ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಸೆಮಿಫೈನಲ್ ಪ್ರವೇಶಿಸಿದ್ದು, ಶನಿವಾರ ಫೈನಲ್ ತಲುಪುವ ಪ್ರಯತ್ನ ಮಾಡಲಿದ್ದಾರೆ. ಇದು ಬಿಟ್ಟರೆ ಕ್ರಿಕೆಟ್ನಲ್ಲಿ ಭಾರತದ ಮಹಿಳಾ ತಂಡಕ್ಕೆ ಸೋಲಿನ ಆರಂಭ ಸಿಕ್ಕಿತು. ಸೈಕ್ಲಿಂಗ್, ಟ್ರಯಾಥ್ಲಾನ್ ಮತ್ತು ಲಾನ್ ಬಾಲ್ ಸ್ಪರ್ಧೆಗಳಲ್ಲಿ ಭಾರತ ಪ್ರಬಲ ಪೈಪೋಟಿ ನೀಡದೆಯೇ ನಿರ್ಗಮಿಸಿತು.

ಬಾಕ್ಸಿಂಗ್:
ಭಾರತದ ಶಿವ್ ಥಾಪ ಪಾಕಿಸ್ತಾನದ ಸುಲೇಮಾನ್ ಬಲೂಚ್ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿದರು. ಪುರುಷರ 63 ಕಿಲೋ ವಿಭಾಗದಲ್ಲಿ ಈ ಹಣಾಹಣಿ ನಡೆದಿತ್ತು. ಥಾಪ ಅವರ ವೇಗದ ಆಟಕ್ಕೆ ಬಲೂಚ್ ಸಾಟಿಯಾಗಲಿಲ್ಲ.
ಟೇಬಲ್ ಟೆನಿಸ್
ಭಾರತ ತಂಡ ಎರಡು ಗೆಲುವು ಸಾಧಿಸಿದೆ. ಫಿಜಿ ಮತ್ತು ಸೌತ್ ಆಫ್ರಿಕಾ ವಿರುದ್ಧ ಭಾರತದ ಮಹಿಳೆಯರು ಭರ್ಜರಿ ಗೆಲುವು ಪಡೆದರು. ಮಾನಿಕಾ ಬಾತ್ರಾ, ಶ್ರೀಜಾ ಅಕುಲಾ ಮತ್ತು ರೀತ್ ಟೆನಿಸನ್ ಭಾರತ ತಂಡದ ಪರ ಆಡಿದರು. ಭಾರತ ಮಹಿಳಾ ತಂಡ ಕಳೆದ ಬಾರಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿತ್ತು.
ಬ್ಯಾಡ್ಮಿಂಟನ್
ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 5-0ಯಿಂದ ಗೆಲುವು ಸಾಧಿಸಿತು. ಭಾರತದ ಪರ ಬಿ ಸುಮೀತ್ ರೆಡ್ಡಿ, ಅಶ್ವಿನಿ ಪೊನ್ನಪ್ಪ, ಎಸ್ ಕಿಡಂಬಿ, ಪಿ.ವಿ. ಸಿಂಧು, ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಆಡಿದರು.

ಹಾಕಿ
ಭಾರತ ಮಹಿಳಾ ಹಾಕಿ ತಂಡ ಘಾನಾ ವಿರುದ್ಧ 5-0ಯಿಂದ ಭರ್ಜರಿ ಜಯ ಸಾಧಿಸಿತು.
ಕ್ರಿಕೆಟ್
ಭಾರತ ಮಹಿಳಾ ಕ್ರಿಕೆಟ್ ತಂಡ ಬಲಿಷ್ಠ ಆಸ್ಟ್ರೇಲಿಯನ್ನರ ಎದುರು 3 ವಿಕೆಟ್ಗಳಿಂದ ಸೋಲನುಭವಿಸಿದರು. 20 ಓವರ್ಗಳ ಪಂದ್ಯದಲ್ಲಿ ಗೆಲ್ಲಲು ಭಾರತ ಒಡ್ಡಿದ 155 ರನ್ ಗುರಿಯನ್ನು ಒಂದು ಓವರ್ ಇರುವಂತೆ ಕಾಂಗರೂಗಳ ಪಡೆ ಯಶಸ್ವಿಯಾಗಿ ಬೆನ್ನಟ್ಟಿತು. ಆದರೆ, ಗೆಲುವು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ. ಭಾರತದ ಮಹಿಳೆಯರೂ ಕೂಡ ಗೆಲುವಿನ ಅವಕಾಶವನ್ನು ಕೈಚೆಲ್ಲಿ ನಿರಾಸೆಗೊಳಿಸಿದರು. ಮುಂದಿನ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನದ ಸುಲಭ ಸವಾಲು ಇದೆ.
ಈಜು:
ಪುರುಷರ 100 ಮೀಟರ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಸೆಮಿಫೈನಲ್ ಪ್ರವೇಶಿಸಿದರು. ತಮ್ಮ ಹೀಟ್ನಲ್ಲಿ ಅವರು 54.68 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದಿದ್ದರು.
400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 22 ವರ್ಷದ ಕುಶಾಗ್ರ ರಾವತ್ 8ನೇ ಸ್ಥಾನ ಪಡೆದು ನಿರಾಶೆಗೊಳಿಸಿದರು.
ಸೈಕ್ಲಿಂಗ್:
ಪುರುಷ ತಂಡದ 4000 ಮೀಟರ್ ಪರ್ಸ್ಯೂಟ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅರ್ಹತಾ ಸುತ್ತಿನಲ್ಲಿ ಭಾರತದ ರೋಜಿತ್ ಯಾಂಗ್ಲೆಮ್, ರೊನಾಲ್ಡೊ ಲಾಯಿಟೊನ್ಜಾಮ್, ಡೇವಿಡ್ ಎಲ್ಕಟೊಚೂಂಗೊ ಮತ್ತು ಎಸೋ ಆಲ್ಬೆನ್ ಕೊನೆಯ ಸ್ಥಾನ ಪಡೆದರು.
ಟ್ರಯಾಥ್ಲಾನ್
ಭಾರತದ ಟ್ರಯಾತ್ಲಾನ್ ಪಟುಗಳಾದ ಆದರ್ಶ್ ಮುರಳೀಧರನ್ ನಾಯರ್ ಮತ್ತು ವಿಶ್ವನಾಥ್ ಯಾದವ್ ಅವರು ಕ್ರಮವಾಗಿ ೩೦ ಮತ್ತು ೩೩ನೇ ಸ್ಥಾನ ಪಡೆದು ನಿರಾಶೆಗೊಳಿಸಿದರು.
ಲಾನ್ ಬಾಲ್
ಲಾನ್ ಬಾಲ್ ಕ್ರೀಡೆಯಲ್ಲಿ ಇವತ್ತು ನಡೆದ ಎಲ್ಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಾರತೀಯರು ಸೋಲನುಭವಿಸಿದರು. ಮಹಿಳಾ ಸಿಂಗಲ್ಸ್ನಲ್ಲಿ ಭಾರತದ ಭರವಸೆಯ ಆಟಗಾರ್ತಿ ತಾನಿಯಾ ಚೌಧರಿ ಎರಡೂ ಪಂದ್ಯಗಳಲ್ಲಿ ಸೋತರು. ಎರಡನೇ ಪಂದ್ಯದಲ್ಲಿ ವೀರೋಚಿತ ಸೋಲನಭವಿಸಿದ್ದು ಮಾತ್ರ ಸಮಾಧಾನ ತಂದಿತು. ಪುರುಷರ ತಂಡದ ಟ್ರಿಪಲ್ಸ್ ಸ್ಪರ್ಧೆಯಲ್ಲಿ ನ್ಯೂಜಿಲೆಂಡ್ ಎದುರು ಭಾರತ 23-6 ಅಂತರದಿಂದ ಹೀನಾಯ ಸೋಲನುಭವಿಸಿತು.
(ಒನ್ಇಂಡಿಯಾ ಸುದ್ದಿ)
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications