ಶೀಘ್ರದಲ್ಲೇ ರಾಹುಲ್-ಆಥಿಯಾ ಶೆಟ್ಟಿ ವಿವಾಹ, ದಿನಾಂಕದ ಬಗ್ಗೆ ಸುನೀಲ್ ಶೆಟ್ಟಿ ಅಪ್ಡೇಟ್
ಮುಂಬೈ, ನವೆಂಬರ್ 24: ಭಾರತದ ಸ್ಟಾರ್ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ವಿವಾಹವಾಗಲಿದ್ದಾರೆ. ಆಥಿಯಾ ತಂದೆ ಬಾಲಿವುಟ್ ನಟ ಸುನೀಲ್ ಶೆಟ್ಟಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ರಾಹುಲ್ ಹಾಗೂ ಆಥಿಯಾ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಹಲವು ಸಂದರ್ಭಗಳಲ್ಲಿ ಒಟ್ಟಿಗಿರುವ ಫೋಟೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯನ್ನು ಖಾತ್ರಿ ಪಡಿಸಿವೆ. ಆದರೆ ವಿವಾಹದ ಬಗ್ಗೆ ಮಾತ್ರ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ವಿವಾಹದ ದಿನಾಂಕದ ಬಗ್ಗೆ ಈಗಾಗಲೆ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ಇದೀಗ ನಟ ಸುನಿಲ್ ಶೆಟ್ಟಿ ಸ್ವತಃ ಶೀಘ್ರದಲ್ಲೇ ವಿವಾಹ ನಡೆಯಲಿದೆ ಎಂದು ಹಿಂದೂಸ್ಥಾನ್ ಟೈಮ್ಸ್ಗೆ ಸಂದರ್ಶನದ ವೇಳೆ ಖಚಿತಪಡಿಸಿದ್ದಾರೆ.
FIFA World Cup 2022 : ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಫಿಫಾ ವಿಶ್ವಕಪ್ ಲೈವ್ ಪ್ರದರ್ಶನ
ವಿವಾಹದ ದಿನಾಂಕವನ್ನು ರಾಹುಲ್ ಮತ್ತು ಆಥಿಯಾರ ವೇಳಾಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಅವರಿಬ್ಬರೂ ತಮಗೆ ಹೊಂದಿಕೊಳ್ಳುವ ಸಂಭವನೀಯ ದಿನಾಂಕವನ್ನು ನೋಡುತ್ತಿದ್ದಾರೆ. ಮದುವೆ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ ಎಂದು ನಾವು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಸುನೀಲ್ ಹೇಳಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ ಇಬ್ಬರು ಸೆಲೆಬ್ರೆಟಿಗಳ ವಿವಾಹ ಫೈವ್ ಸ್ಟಾರ್ನಂತಹ ಸ್ಥಳದಲ್ಲಿ ನಡೆಯುವ ಸಾಧ್ಯತೆಯಿಲ್ಲ, ಬದಲಾಗಿ ಸುನೀಲ್ ಶೆಟ್ಟಿಯವರ ಖಂಡಾಲದಲ್ಲಿನ ಮನೆಯಲ್ಲಿ ನಡೆಯಲಿದೆ ಎನ್ನುವ ಮಾಹಿತಿಯಿದೆ. ಈ ವಿವಾಹವನ್ನು ಪ್ರಸಿದ್ಧ ವೆಡ್ಡಿಂಗ್ ಇವೆಂಟ್ ತಂಡ ನಡೆಸಿಕೊಡಲಿದೆ, ಇದಕ್ಕಾಗಿ ಸಾಕಷ್ಟು ಬಾರಿ ಸುನೀಲ್ ಶೆಟ್ಟಿ ಮನೆಗೆ ಭೇಟಿ ನೀಡಿ ಅಲಂಕಾರ ಹಾಗೂ ವಿವಾಹ ಕುರಿತ ಕಾರ್ಯಕ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಥಿಯಾ ಮತ್ತು ಕೆಎಲ್ ರಾಹುಲ್ ಕುಟುಂಬಗಳು ವಿವಾಹ ಕುರಿತಂತೆ ಕೆಲವು ತಿಂಗಳ ಹಿಂದೆ ಭೇಟಿಯಾಗಿ ಈ ಕುರಿತಂತೆ ಆರಂಭಿಕ ಹಂತದ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಎರಡೂ ಕುಟುಂಬಗಳಿಗೆ ಈ ಮದುವೆ ಅದ್ಧೂರಿ ಆಚರಣೆಯಾಗಲಿದೆ.
ಇನ್ನು ಕೆಎಲ್ ರಾಹುಲ್ ವೈಯಕ್ತಿಕ ಜೀವನದಲ್ಲಿ ಖುಷಿಯಲ್ಲಿದ್ದರೂ , ವೃತ್ತಿ ಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಸದ್ಯಕ್ಕೆ ವಿಶ್ರಾಂತಿಯಲ್ಲಿರುವ ರಾಹುಲ್ ಕಿವೀಸ್ ಪ್ರವಾಸದಿಂದ ಹೊರಗಿದ್ದಾರೆ. ಮುಂಬರುವ ಬಾಂಗ್ಲಾದೇಶ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದು, ಉಪನಾಯಕನಾಗಿ ಮುಂದುವರಿಯಲಿದ್ದಾರೆ.
ಕುಕ್ಕೆಗೆ ಭೇಟಿ ನೀಡಿದ ರಾಹುಲ್
ವಿಶ್ವಕಪ್ ವೈಫಲ್ಯದ ನಂತರ ಕ್ರಿಕೆಟ್ನಿಂದ ಬ್ರೇಕ್ ತೆಗೆದುಕೊಂಡಿರುವ ರಾಹುಲ್ ಬುಧವಾರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಳೆದ ಬಾರಿ ಫಾರ್ಮ್ ಕಳೆದುಕೊಂಡಾಗಲೂ ರಾಹುಲ್ ಕುಕ್ಕೆಗೆ ಭೇಟಿ ನೀಡಿದ್ದನ್ನು ಸ್ಮರಿಸಬಹುದು.