Abhinav Manohar: ಅಭಿನವ್ ಸ್ಫೋಟಕ ಇನ್ನಿಂಗ್ಸ್; ಗುಲ್ಬರ್ಗ ವಿರುದ್ಧ ಗೆದ್ದ ಶಿವಮೊಗ್ಗ!
ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಅಭಿನವ್ ಮನೋಹರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದೆ. ಮಂಗಳವಾರ ನಡೆದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಅಭಿನವ್ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಶಿವಮೊಗ್ಗ ಲಯನ್ಸ್ಗೆ 6 ವಿಕೆಟ್ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಅಭಿನವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 207 ರನ್ಗಳ ಬೃಹತ್ ಗುರಿಯನ್ನು ಇನ್ನೂ ಐದು ಎಸೆತ ಬಾಕಿ ಇರುವಂತೆಯೇ ಚೇಸ್ ಮಾಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ಲಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.

ನಾಯಕ ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 50 ರನ್ ಗಳಿಸಿದರೆ, ಸಮ್ರನ್ 30 ಎಸೆತಗಳಲ್ಲಿ 1 ಬೌಂಡರಿ 7 ಸಿಕ್ಸರ್ ಸಹಿತ 63 ರನ್ ಗಳಿಸಿದರು. ವಿಜಯ್ ಕುಮಾರ್ ವೈಶಾಕ್ 21 ಎಸೆತಗಳಲ್ಲಿ 38 ರನ್ ಗಳಿಸಿದರು. ಪ್ರವೀಣ್ ದುಬೆ 12 ಎಸೆತಗಳಲ್ಲಿ 24 ರನ್ ಗಳಿಸಿದರು.
ಅಭಿನವ್ ಮನೋಹರ್ ಮಿಂಚಿನ ಆಟ
207 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಶಿವಮೊಗ್ಗ ಲಯನ್ಸ್ ಸಾಧಾರಣ ಆರಂಭ ಪಡೆಯಿತು. ಧೀರಜ್ ಮೋಹನ್ 13 ಎಸೆತಗಳಲ್ಲಿ 18 ರನ್ ಗಳಿಸಿರೆ, ನಿಹಾಲ್ ಉಲ್ಲಾಳ್ 35 ಎಸೆತಗಳಲ್ಲಿ 32 ರನ್ ಗಳಿಸಿದರು. ಭರತ್ ಧುರಿ 14 ರನ್ ಗಳಿಸಿದರು. ಶಿವಮೊಗ್ಗ ಲಯನ್ಸ್ ಸೋಲುತ್ತದೆ ಎನ್ನುವಾಗಲೇ ಕ್ರೀಸ್ಗೆ ಬಂದ ಅಭಿನವ್ ಮನೋಹರ್ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು.
34 ಎಸೆತಗಳಲ್ಲಿ 2 ಬೌಂಡರಿ 9 ಭರ್ಜರಿ ಸಿಕ್ಸರ್ ಸಹಿತ ಅಜೇಯ 76 ರನ್ ಗಳಿಸಿದರು. ಹಾರ್ದಿಕ್ ರಾಜ್ 7 ಎಸೆತಗಳಲ್ಲಿ 17 ರನ್ ಗಳಿಸಿದರೆ, ರೋಹನ್ ನವೀನ್ 14 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 36 ರನ್ ಗಳಿಸಿದರು.
ಈ ಗೆಲುವು ಪಡೆದರೂ ಶಿವಮೊಗ್ಗ ಲಯನ್ಸ್ ಸೆಮಿಫೈನಲ್ ತಲುಪುವುದು ಕಷ್ಟವಾಗಿದೆ. 9 ಪಂದ್ಯಗಳಲ್ಲಿ 3 ರಲ್ಲಿ ಮಾತ್ರ ಗೆದ್ದಿದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಸೋತರೂ ಗುಲ್ಬರ್ಗ ಮಿಸ್ಟಿಕ್ಸ್ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತವಾಗಿದೆ.












Click it and Unblock the Notifications