RCB: ಈ ಏಳು ಆಟಗಾರರು ಆರ್ಸಿಬಿಗೆ ಬಂದ್ರೆ ಈ ಸಲ ಕಪ್ ನಮ್ದೇ!
ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ನವೆಂಬರ್ 24, 25ರಂದು ಜೆಡ್ಡಾದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ತಮ್ಮದೇ ಲೆಕ್ಕಾಚಾರ ಹಾಕಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಈ ಬಾರಿ 3 ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು ಮೆಗಾ ಹರಾಜಿನಲ್ಲಿ ಪ್ರಮು ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ.
ಈ ಬಾರಿ ಮೆಗಾ ಹರಾಜಿನಲ್ಲಿ ಪ್ರಮುಖ ಆಟಗಾರರು ಇರುವ ಕಾರಣ, ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟಲು ಉತ್ತಮ ಅವಕಾಶ ಸಿಕ್ಕಿದೆ. ಬೌಲಿಂಗ್ ಮೊದಲಿನಿಂದಲೂ ಆರ್ ಸಿಬಿಗೆ ದೊಡ್ಡ ಸಮಸ್ಯೆಯಾಗಿದೆ. ಈ ಬಾರಿ ಹಲವು ಪ್ರಮುಖ ಬೌಲರ್ ಗಳು ಹರಾಜಿನಲ್ಲಿದ್ದು, ಆರ್ ಸಿಬಿ ಬಲಿಷ್ಠ ಬೌಲಿಂಗ್ ಪಡೆಯನ್ನು ಕಟ್ಟಲು ಅವಕಾಶ ಸಿಕ್ಕಿದೆ.

ರಿಷಬ್ ಪಂತ್, ಕೆಎಲ್ ರಾಹುಲ್, ಜೋಸ್ ಬಟ್ಲರ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರಂತಹ ಪ್ರಮುಖ ಆಟಗಾರರು ಹರಾಜಿನಲ್ಲಿದ್ದು, ಆರ್ ಸಿಬಿ ಯಾರನ್ನೆಲ್ಲಾ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಏಳು ಆಟಗಾರರು ಆರ್ ಸಿಬಿ ತಂಡಕ್ಕೆ ಬಂದರೆ ಕಪ್ ಗೆಲ್ಲುವುದು ಪಕ್ಕಾ ಎಂದು ಅಭಿಮಾನಿಗಳು ಹೇಳಿದ್ದಾರೆ. ಆರ್ ಸಿಬಿ ಕೂಡ ಈ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹರಾಜಿನಲ್ಲಿ ಪ್ರಯತ್ನಿಸಬಹುದು.
ಯುಜ್ವೇಂದ್ರ ಚಹಾಲ್
ಯುಜ್ವೇಂದ್ರ ಚಹಾಲ್ ಮಾಜಿ ಆರ್ ಸಿಬಿ ಆಟಗಾರ, ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಡುತ್ತಿದ್ದ ಅವರನ್ನು ಈ ಬಾರಿ ಬಿಡುಗಡೆ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಹಾಲ್ ಮಾರಕ ಬೌಲರ್ ಆಗಬಲ್ಲರು. ಆರ್ ಸಿಬಿ ಕಳೆದ ಬಾರಿ ಮೆಗಾ ಹರಾಜಿಗೆ ಮುನ್ನ ಅವರನ್ನು ಬಿಡುಗಡೆ ಮಾಡಿ ತಪ್ಪು ಮಾಡಿತ್ತು, ಈ ಬಾರಿ ಆ ತಪ್ಪು ತಿದ್ದಿಕೊಳ್ಳುವ ಸಾಧ್ಯತೆ ಇದೆ. ಅವರು ಅನುಭವ ಆರ್ ಸಿಬಿಗೆ ದೊಡ್ಡ ಆಸ್ತಿಯಾಗಲಿದೆ.
ಜೋಸ್ ಬಟ್ಲರ್
ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಬ್ಯಾಟರ್ ಜೋಸ್ ಬಟ್ಲರ್. ಆರಂಭಿಕರಾಗಿ ಎದುರಾಳಿ ಬೌಲಿಂಗ್ ಪಡೆಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುವ ವಿಕೆಟ್ ಕೀಪರ್ ಬ್ಯಾಟರ್. ಆರ್ ಸಿಬಿ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಬೇಕಿದ್ದು ಬಟ್ಲರ್ ಉತ್ತಮ ಆಯ್ಕೆಯಾಗಿದ್ದಾರೆ. ಕೊಹ್ಲಿ ಜೊತೆ ಬಟ್ಲರ್ ಆರಂಭಿಕರಾಗಿ ಕಣಕ್ಕಿಳಿದರೆ ರನ್ ಹೊಳೆ ಹರಿಯುವುದು ಗ್ಯಾರಂಟಿ.
ಕೆಎಲ್ ರಾಹುಲ್
ಕನ್ನಡಿಗ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರನ್ನು ವಾಪಸ್ ಕರೆತನ್ನಿ ಎಂದು ಆರ್ ಸಿಬಿ ಅಭಿಮಾನಿಗಳು ಆಗ್ರಹಿಸಿದ್ದಾರೆ. ನಾಯಕನಿಗಾಗಿ ಹುಡುಕುತ್ತಿರುವ ಆರ್ ಸಿಬಿಗೆ ಕೆಎಲ್ ರಾಹುಲ್ ಉತ್ತಮ ಆಯ್ಕೆಯಾಗಿದ್ದಾರೆ. ಆರಂಭಿಕರಾಗಿಯಾದರೂ ಸೈ, ಮಧ್ಯಮ ಕ್ರಮಾಂಕದಲ್ಲಿ ಕೂಡ ಆಡಲು ಸೈ ಎನ್ನುವ ಕೆಎಲ್ ರಾಹುಲ್ ತವರಿನ ತಂಡಕ್ಕೆ ಬಂದರೆ ಬ್ಯಾಟಿಂಗ್ಗೆ ಮತ್ತಷ್ಟು ಬಲ ಬರಲಿದೆ.
ರಚಿನ್ ರವೀಂದ್ರ
ರಚಿನ್ ರವೀಂದ್ರ, ಬೆಂಗಳೂರು ಮೂಲದ ನ್ಯೂಜಿಲೆಂಡ್ ಆಟಗಾರ. ಸ್ಪಿನ್ ಆಲ್ರೌಂಡರ್ ರಚಿನ್ ಕಳೆದ ಬಾರಿ ಸಿಎಸ್ಕೆ ಪರವಾಗಿ ಆಡಿದ್ದರು. ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಆರ್ ಸಿಬಿ ರಚಿನ್ ರವೀಂದ್ರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯೋಜಿಸಬಹುದು.
ಕಗಿಸೊ ರಬಾಡ
ಆರ್ ಸಿಬಿ ತಂಡಕ್ಕೆ ಬೌಲಿಂಗ್ ಸಮಸ್ಯೆ ಯಾವಾಗಲೂ ಕಾಡುತ್ತಿದೆ. ದಕ್ಷಿಣ ಆಫ್ರಿಕಾದ ಬೌಲರ್ ಕಗಿಸೊ ರಬಾಡ ಆರ್ ಸಿಬಿ ತಂಡದ ಬೌಲಿಂಗ್ಗೆ ಬಲ ತುಂಬುವ ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಆರ್ ಸಿಬಿ ರಬಾಡ ಅವರ ಮೇಲೂ ಕಣ್ಣಿಟ್ಟಿದೆ. ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಕೂಡ ಆರ್ ಸಿಬಿ ರಬಾಡರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಅರ್ಷದೀಪ್ ಸಿಂಗ್
ಅರ್ಷದೀಪ್ ಸಿಂಗ್ರನ್ನು ಬಿಡುಗಡೆ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ಅಚ್ಚರಿ ಮೂಡಿಸಿದೆ. ಟಿ20 ಕ್ರಿಕೆಟ್ನಲ್ಲಿ ಅರ್ಷದೀಪ್ ಸಿಂಗ್ ಭಾರತದ ಪ್ರಮುಖ ಬೌಲರ್ ಆಗಿದ್ದಾರೆ. ಆರ್ ಸಿಬಿ ಫ್ರಾಂಚೈಸಿ ಅರ್ಷದೀಪ್ ಸಿಂಗ್ ಮೇಲೆ ಕೂಡ ಕಣ್ಣಿಟ್ಟಿದ್ದು, ಬೌಲಿಂಗ್ ಬಲ ಹೆಚ್ಚಿಸಿಕೊಳ್ಳುವ ಉದ್ದೇಶದಲ್ಲಿದೆ.
ರಿಷಬ್ ಪಂತ್
ರಿಷಬ್ ಪಂತ್ ಈ ಬಾರಿ ಐಪಿಎಲ್ ಹರಾಜಿನ ಪ್ರಮುಖ ಆಕರ್ಷಣೆ ಎನ್ನಲಾಗಿದೆ. ಎಲ್ಲಾ ತಂಡಗಳು ಪಂತ್ಗಾಗಿ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಆರ್ ಸಿಬಿ ತಂಡದ ಲಿಸ್ಟ್ನಲ್ಲಿ ಪಂತ್ ಹೆಸರು ಕೂಡ ಇದ್ದು, ತಂಡಕ್ಕೆ ಬಂದರೆ ಬ್ಯಾಟಿಂಗ್ಗೆ ಮತ್ತಷ್ಟು ಬಲ ತುಂಬಲಿದ್ದಾರೆ.












Click it and Unblock the Notifications