ಶಿರಸಿ ಮಾರಿಕಾಂಬ ಜಾತ್ರೆಗೆ 110 ಹೆಚ್ಚುವರಿ ಬಸ್ ವ್ಯವಸ್ಥೆ
ಉತ್ತರ ಕನ್ನಡ, ಫೆಬ್ರವರಿ 21 : ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಫೆ.27ರಿಂದ ಮಾ.7ರವರೆಗೆ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ. ಮಾರಿ ಗದ್ದುಗೆ ಸಮೀಪದ ಹಳೆಬಸ್ ನಿಲ್ದಾಣದಿಂದ ಫೆ.25ರಿಂದ ಬಸ್ ಸಂಚಾರ ಬಂದ್ ಆಗಲಿದ್ದು, ಗಣೇಶನಗರ ಸಮೀಪದ ಹೊಸ ನಿಲ್ದಾಣದಿಂದಲೇ ಬಸ್ಗಳು ಸಂಚಾರ ನಡೆಸಲಿವೆ.
ಸಾಮಾನ್ಯವಾಗಿ ನಗರದಲ್ಲಿ ಹೊಸ ಬಸ್ ನಿಲ್ದಾಣವಿದ್ದರೂ ಹಳೆಬಸ್ ನಿಲ್ದಾಣವೇ ಯಾವಾಗಲೂ ಜನರಿಂದ ಹಾಗೂ ಬಸ್ಗಳಿಂದ ತುಂಬಿರುತ್ತದೆ. ನಗರದ ಹೃದಯ ಭಾಗದಲ್ಲಿ ನಿಲ್ದಾಣ ಇರುವುದರಿಂದ ಜನರ ಓಡಾಟಕ್ಕೆ ಅನುಕೂಲವಾಗಿದ್ದು, ಇದಕ್ಕೆ ಕಾರಣವಾಗಿದೆ.

ಆದರೆ, ಫೆ 27ರಿಂದ 9 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಈ ನಿಲ್ದಾಣದಿಂದ ಬಸ್ಗಳ ಸಂಚಾರ ಇರುವುದಿಲ್ಲ. ಮಾರಿಕಾಂಬೆ ದೇವಿ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಈ ಸಂದರ್ಭದಲ್ಲಿ ಸುತ್ತ-ಮುತ್ತ ಜಾತ್ರಾ ಅಂಗಡಿಗಳನ್ನು ಹಾಕುವುದರಿಂದ ಬಸ್ ಸಂಚಾರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ, ಫೆ.25ರ ಮುಂಜಾನೆಯಿಂದ ಹಳೇ ಬಸ್ ನಿಲ್ದಾಣದ ಸಾರಿಗೆ ಕಾರ್ಯಾಚರಣೆಗಳನ್ನು ಹೊಸ ಬಸ್ ನಿಲ್ದಾಣದಿಂದ ನಡೆಸಲಾಗುತ್ತದೆ.
ಬಸ್ ಸಂಚಾರದ ಮಾರ್ಗ : ಹಾನಗಲ್, ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಬಸ್ ಶಿರಸಿ ಹೊಸ ಬಸ್ ನಿಲ್ದಾಣದಿಂದ ವಿಕಾಸಾಶ್ರಮ-ಎಪಿಎಂಸಿ-ಶಿರಸಿ ಘಟಕ- ವಿವೇಕಾನಂದ ನಗರ ಕ್ರಾಸ್-ಚಿಪಗಿ ಕ್ರಾಸ್ ಮಾರ್ಗದಲ್ಲಿ ಸಂಚಾರ ನಡೆಸಲಿವೆ.
ಶ್ರೀ ಮಾರಿಕಾಂಬಾ ದೇವಸ್ಥಾನದ ಮುಂಭಾಗದ ರಸ್ತೆಯನ್ನು ಬಸ್ ಸಂಚಾರಕ್ಕೆ ನಿಷೇಧಿಸಿರುವುದರಿಂದ ಬನವಾಸಿ ಮಾರ್ಗದ ಬಸ್ಗಳು ರಾಮನಬೈಲ್ ಕ್ರಾಸ್ ನಿಂದ ಸಂಚಾರ ನಡೆಸಲಿವೆ.
ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಮಾರ್ಗದ ಬಸ್ಸುಗಳು ಶಿರಸಿ ಹೊಸ ಬಸ್ ನಿಲ್ದಾಣದಿಂದ ಪದ್ಮಶ್ರೀ ಸರ್ಕಲ್, ಹನುಮಾನ ವ್ಯಾಯಾಮಶಾಲೆ ಮಾರ್ಗದ ಮೂಲಕ ಸಂಚರಿಸುತ್ತವೆ.
ಹೆಚ್ಚುವರಿ 11ಬಸ್ : ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲವಾಗಲಿ ಎಂದು ಹೆಚ್ಚುವರಿಯಾಗಿ 110 ವಿಶೇಷ ಬಸ್ ಓಡಿಸಲಾಗುತ್ತಿದೆ.
ಶಿರಸಿಯಿಂದ ಹಾನಗಲ್, ಹಾವೇರಿ, ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ, ಯಲ್ಲಾಪುರ, ದಾಂಡೇಲಿ, ಅಂಕೋಲಾಕ್ಕೆ ವಿಶೇಷ ಬಸ್ ಸಂಚಾರ ನಡೆಸಲಿವೆ.
ಪಿಕ್ಅಪ್ ಪಾಯಿಂಟ್ : ಜಾತ್ರೆ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಕಾಸಾಶ್ರಮ ಕ್ರಾಸ್, ರಾಮನಬೈಲ್ ಕ್ರಾಸ್, ಎಪಿಎಂಸಿ ಕ್ರಾಸ್(ಹುಬ್ಬಳ್ಳಿ ರಸ್ತೆ), ಹನುಮಾನ ವ್ಯಾಯಾಮ ಶಾಲೆ ಆವರಣ ಮತ್ತು ರಾಯಪ್ಪ ಹುಲೇಕಲ್ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ.
ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆ : ಶಿರಸಿ ಹೊಸ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಹಳೇ ಬಸ್ ನಿಲ್ದಾಣದ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ಸಹ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications