ಉತ್ತರ ಕನ್ನಡ; ಶಿರಸಿ ಮಾರಿಕಾಂಬ ಜಾತ್ರೆಗೆ ದಿನಾಂಕ ನಿಗದಿ
ಶಿರಸಿ, ಜನವರಿ 09; ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಮಾರಿಕಾಂಬಾ ದೇವಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ.
ಮಾರಿಗುಡಿಯ ಅರ್ಚಕ ವಿದ್ವಾನ್ ರಾಮಕೃಷ್ಣ ಭಟ್ ಕೇರೈಕೈ ಜಾತ್ರೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಮಾರ್ಚ್ 15 ರಿಂದ 23ರ ತನಕ ಸಂಪ್ರದಾಯದ ಪ್ರಕಾರ ಶಿರಸಿ ಮಾರಿಕಾಂಬ ಜಾತ್ರೆ ನಡೆಯಲಿದೆ.
ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿ ಮಾಡಲು ಸಂಪ್ರದಾಯದಂತೆ ಸಭೆ ನಡೆಯಿತು. ನಾಡಿಗ ಮನೆತನದ ಅಜಯ್ ನಾಡಿಗ ಮುಹೂರ್ತ ದೀಪ ಬೆಳಗಿದರು. ದೇವಾಲಯದ ಆಡಳಿತ ಮಂಡಳಿಯವರು, ಬಾಬುದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿಯೂ ಕೋವಿಡ್ ನೆರಳಿನಲ್ಲಿ, ಕೋವಿಡ್ ಮಾರ್ಗಸೂಚಿಗಳ ಪಾಲನೆ ಅನ್ವಯ ಜಾತ್ರೆ ನಡೆಸಬೇಕಿದೆ.
ಈ ಬಾರಿ ಪ್ಲವನಾಮ ಸಂವತ್ಸರದ ಫಾಲ್ಗುಣ ಶುಕ್ಲ ದ್ವಾದಶಿಯಂದು ಮಾರಿಕಾಂಬ ಜಾತ್ರೆ ಆರಂಭವಾಗಲಿದೆ. ಜನವರಿ 26ರಿಂದ ದೇವಾಲಯದಲ್ಲಿ ಜಾತ್ರೆಯ ವಿಧಿವಿಧಾನಗಳು ಆರಂಭವಾಗಲಿವೆ.
ಶಿರಸಿ ಮಾರಿಕಾಂಬ ದೇವಿಗೆ ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಭಕ್ತರಿದ್ದಾರೆ. ಜಾತ್ರೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕು.
ಧಾರ್ಮಿಕ ವಿಧಿ ವಿಧಾನಗಳು; ಶಿರಸಿ ಮಾರಿಕಾಂಬ ಜಾತ್ರೆ ಅಂಗವಾಗಿ ವಿಧಿ ವಿಧಾನಗಳು ಜನವರಿ 26ರಂದು ಆರಂಭವಾಗಿವೆ. ಶ್ರೀ ದೇವಿಯ ಪ್ರತಿಷ್ಠಾ ಮಂಟಪ ಕಳಚುವ ಮೂಲಕ ವಿದ್ಯುಕ್ತವಾಗಿ ಜಾತ್ರೆಗೆ ಚಾಲನೆ ಸಿಕ್ಕಿದೆ.
ಫೆಬ್ರವರಿ 22ರಂದು ಪೂರ್ವ ದಿಕ್ಕಿಗೆ ಮೊದಲ ಹೊರಬೀಡು ರಾತ್ರಿ 9.30ರ ನಂತರ ತೆರಳಲಿದ್ದು, ಫೆಬ್ರವರಿ 25ರಂದು ಎರಡನೇ ಹೊರಬೀಡು ಉತ್ತರ ದಿಕ್ಕಿಗೆ ರಾತ್ರಿ 9.30ರ ನಂತರ ತೆರಳಲಿದೆ. ಮೂರನೇ ಹೊರಬೀಡು ಮಾರ್ಚ್ 1ರಂದು ರಾತ್ರಿ 9.30ಕ್ಕೆ ತೆರಳಲಿದೆ.
ಮಾರ್ಚ್ 4ರಂದು ವೃಕ್ಷಪೂಜೆ ನಡೆಯಲಿದ್ದು, ಅಂದು ನಾಲ್ಕನೇ ಹೊರಬೀಡು ತೆರಳಲಿದೆ. ಮಾರ್ಚ್ 8ರಂದು ದೇವಿಯ ರಥದ ಮರ ತರುವ ಕಾರ್ಯ, ಮಾರ್ಚ್ 9ರಂದು ದೇವಿಯ ವಿಗ್ರಹ ವಿಸರ್ಜನೆ ನಡೆಯಲಿದೆ.
ಮಾರ್ಚ್ 16ರಂದು ದೇವಿಯ ರಥಾರೋಹಣ ಹಾಗೂ ಮಾರ್ಚ್ 17ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವೆಗಳು ನಡೆಯಲಿವೆ. ಮಾರ್ಚ್ 23ರಂದು ಜಾತ್ರೆ ಮುಕ್ತಾಯಗೊಳ್ಳಲಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈಗಾಗಲೇ ಶಿರಸಿ ಮಾರಿಕಾಂಬ ದೇವಾಲಯದಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಾರ್ಚ್ ವೇಳೆಗೆ ಕೋವಿಡ್ ಪರಿಸ್ಥಿತಿ ಏನಾಗಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications