ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಬೇಕು?
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆಗಳನ್ನ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇನೆ. ಕೇವಲ ಅಪಘಾತ ಆದಾಗ ಮಣಿಪಾಲಕ್ಕೆ ಹೋಗಬೇಕು ಎನ್ನುವುದು ಮಾತ್ರ ಅಲ್ಲ ಇನ್ನೂ ಬಹಳಷ್ಟು ಕಾರಣಗಳಿವೆ. ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು ಎಂಬ ಟ್ವೀಟ್ ಅಭಿಯಾನ ಹಾಗೂ ಈ ಮನವಿ ಆಚೆಗಿನ ಅಗತ್ಯ, ಬೇಡಿಕೆಗಳ ಬಗ್ಗೆ ಪತ್ರಕರ್ತ ವಿನಯ್ ಹೆಗಡೆ ಬೆಳಕು ಚೆಲ್ಲಿದ್ದಾರೆ.
45 ವರ್ಷ ಗಳ ಕಾಲ ರಾಜಕೀಯ ಬದುಕು ಕಂಡಿರುವ ಆರ್ ವಿ ದೇಶಪಾಂಡೆ ಅವರು ಶಾಸಕ, ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 22 ವರ್ಷಗಳ ರಾಜಕೀಯ ಅನುಭವದಲ್ಲಿ ಶಾಸಕ, ಸಚಿವರಾಗಿ ಜನಾನುರಾಗಿ ಬೆಳೆದಿದ್ದಾರೆ. ಅನಂತ ಕುಮಾರ್ ಹೆಗಡೆ ಅವರು 21 ವರ್ಷಕ್ಕೂ ಅಧಿಕ ಕಾಲದಿಂದ ಈ ಪ್ರದೇಶದ ಮತದಾರರಿಂದ ಆಯ್ಕೆಯಾಗಿದ್ದಾರೆ.
ಇವರಲ್ಲದೆ ಮಾರ್ಗರೇಟ್ ಆಳ್ವಾ, ಬಸವರಾಜ ಹೊರಟ್ಟಿ, ಎಂಎಲ್ ಸಿ ಎಸ್ ವಿ ಸಂಕನೂರ್, ಶಾಸಕಿ ರೂಪಾಲಿ ನಾಯ್ಕ, ದಿನಕರ ಶೆಟ್ರು, ಸುನೀಲ್ ನಾಯ್ಕ, ಶಿವರಾಮ ಹೆಬ್ಬಾರರು, ಭೀಮಣ್ಣ ನಾಯ್ಕ, ಶಶಿಭೂಷಣ ಹೆಗಡೆ, ನಿವೇದಿತಾ ಆಳ್ವಾ, ಪ್ರಶಾಂತ್ ದೇಶಪಾಂಡೆ, ಆನಂದ್ ಆಸ್ನೋಟಿಕರ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೂ ಈ ಮನವಿಯನ್ನು ತಲುಪಿಸಲು ಉತ್ತರ ಕನ್ನಡದ ಮಂದಿ ಸಾಮಾಜಿಕ ಜಾಲ ತಾಣ ಬಳಸುತ್ತಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಖಾತೆಯಿಂದ ಈ ಬಗ್ಗೆ ಪ್ರತಿಕ್ರಿಯೆ, ಭರವಸೆ ಕೂಡಾ ಬಂದಿದೆ.

ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು..
ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು..ಸಾಮಾಜಿಕ ಜಾಲ ತಾಣದಲ್ಲಿ ಹ್ಯಾಷ್ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಜತೆಗೆ ಇನ್ನೂ ಕೆಲವು ಕೆಲಸಮಾಡೋಣವಾ?
ನಮ್ಮದೇ ಶಾಸಕರಿಗೆ, ಸಂಸದರಿಗೆ, ರಾಜ್ಯದ ಆರೋಗ್ಯ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಸರಣಿ ಪತ್ರವನ್ನು ಬರೆಯೋಣವಾ? (ಪೋಸ್ಟ್ ಕಾರ್ಡಿಗೆ 50 ಪೈಸೆ ಮಾತ್ರ ಖರ್ಚು ಬರುತ್ತದೆ) ಈಗ ಹುಟ್ಟಿಕೊಂಡಿರುವ ಕೂಗು ಆರದಂತೆ, ಸಣ್ಣದಾಗದಂತೆ ನೋಡಿಕೊಳ್ಳೋಣವಾ? ಎಂದು ಅಭಿಯಾನದಲ್ಲಿ ಭಾಗವಹಿಸಿದವರು ಕರೆ ನೀಡಿದ್ದಾರೆ.

ಮಾರಕ ಖಾಯಿಲೆಗಳು ಹಿಂಡಿ ಹಿಪ್ಪೆ ಮಾಡುತ್ತಿದೆ
* ಯಲ್ಲಾಪುರ ತಾಲೂಕಿನ ಪಶ್ಚಿಮ ಭಾಗವಾದ ಕೊಡಸಳ್ಳಿ ಡ್ಯಾಂ ಹಿನ್ನೀರಿನ ಪ್ರದೇಶ, ಜೋಯಿಡಾ ತಾಲೂಕಿನ ಕೊಡಥಳ್ಳಿ ಸೇರಿ ಸುತ್ತಮುತ್ತಲಿನ ಭಾಗಗಳಲ್ಲಿ ಜನಸಾಮಾನ್ಯರನ್ನು ಮಾರಕ ಖಾಯಿಲೆಗಳು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ಭಾಗದ ಜನರು ಬಹುತೇಕ ಚಿಕಿತ್ಸೆಗೆ ಹೋಗುತ್ತಿರುವುದು ಮಂಗಳೂರಿನ ಕೆ. ಎಸ್. ಹೆಗಡೆ ಆಸ್ಪತ್ರೆಗೆ...
ಪರಿಸರ ಹತ್ಯೆಯ ಯೋಜನೆಗಳಿಗೆ ನಮ್ಮ ಜಿಲ್ಲೆ ನೆನಪಾಗುತ್ತದೆ. ಕೈಗಾ, ಕಾಳಿ, ಸೀಬರ್ಡ್ ಯೋಜನೆ ಹೀಗೆ ಹಲವು ಯೋಜನೆಗಳನ್ನು ಹೇರಲಾಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾಕೆ ಕೊಡೋದಿಲ್ಲ ಎಂದು #weneedemergencyhospital_in_uttarakannada ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ನಡೆಸಲಾಗುತ್ತಿದೆ.

ಅಪಘಾತವಾದರೆ 100 ಕಿಲೋಮೀಟರ್ ಚಿಕಿತ್ಸೆಗಾಗಿ ಓಡಬೇಕು
ಶಿರಸಿಯ ಜನರು ತೀವ್ರ ಸ್ವರೂಪದ ಕಾಯಿಲೆ, ಅಪಘಾತ ಬಂದಾಗ 100 ಕಿಲೋಮೀಟರ್ ದೂರದ ಹುಬ್ಬಳ್ಳಿ (ಎರಡೂವರೆ ತಾಸು), 130 ಕಿಮಿ ದೂರದ ಶಿವಮೊಗ್ಗ(ಎರಡೂವರೆ ತಾಸು), 210 ಕಿಲೋಮೀಟರ್ ದೂರದ ಮಣಿಪಾಲ (3.5 ತಾಸು) ಪ್ರಯಾಣ ಮಾಡಬೇಕು. ಯಲ್ಲಾಪುರದವರಿಗೆ 60 ಕಿಮಿ ದೂರದಲ್ಲಿ ಹುಬ್ಬಳ್ಳಿ ಇದ್ದರೆ ಮಣಿಪಾಲ, ಶಿವಮೊಗ್ಗವಂತೂ ಬಹುದೂರ.. ಇನ್ನು ಕುಮಟಾದವರ ಪಾಡಂತೂ ಬೇಡವೇ ಬೇಡ ಎಂಬಂತಾಗಿದೆ. ಕುಮಟಾ, ಹೊನ್ನಾವರದವರು ಮಣಿಪಾಲವೋ ಇಲ್ಲವೆ ಪಕ್ಕದ ಗೋವಾದ ಯಾವುದೋ ಆಸ್ಪತ್ರೆಯನ್ನು ಅರಸಬೇಕಾಗುತ್ತದೆ. ಈ ಸ್ಥಳಗಳಿಗೆ ಆ್ಯಂಬುಲೆನ್ಸ್ ಮೂಲಕವೋ, ಇತರ ವಾಹನ ಮೂಲಕವೋ ಹೋಗುವ ಸಮಯ ಲೆಕ್ಕ ಹಾಕಿ

ಚಿಕಿತ್ಸೆ ಸಿಗದೆ ಅನೇಕ ಮಂದಿ ಮೃತಪಟ್ಟಿದ್ದಾರೆ
ಹೆಚ್ಚು ಮಳೆ ಬೀಳುವ ಜಿಲ್ಲೆಯಲ್ಲಿ ಮಲೆರಿಯಾ, ಡೆಂಗ್ಯೂ ಹೀಗೆ ಮಾರಕ ಜ್ವರಗಳ ಹಾವಳಿ ಹೆಚ್ಚು. ಈ ಜ್ವರಗಳು ಬಂದಾಗ ಜಿಲ್ಲೆಯ ಬಹುತೇಕ ವೈದ್ಯರು ಹೇಳುವ ಒಂದೇ ಮಾತು 'ನಮ್ ಕೈಲಿ ಆಗೂದಿಲ್ಲ. ಹುಬ್ಬಳ್ಳಿಗೋ, ಮಣಿಪಾಲಕ್ಕೋ ಬರೆದು ಕೊಡ್ತೇನೆ..' ಎನ್ನೋದು. ಮಂಗನ ಕಾಯಿಲೆ ಕೂಡ ತೀವ್ರ ಹಾವಳಿ ಮಾಡಿದ್ದು ಮರೆಯುವಂತೆ ಇಲ್ಲ. ಆಗ ಜನರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಇಲ್ಲದೇ ಸತ್ತಿದ್ದನ್ನ ಮರೆಯುವಂತೆಯೇ ಇಲ್ಲ..

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾಕೆ ಕೊಡೋದಿಲ್ಲ
ಜಿಲ್ಲೆಯಲ್ಲಿ ಸ್ಕ್ಯಾನ್, ರಕ್ತ ಪರೀಕ್ಷೆ ಮುಂತಾದವುಗಳಿಗೆ ಸೂಕ್ತ ಉಪಕರಣಗಳ ಕೊರತೆ ಖಂಡಿತ ಇದೆ. ಕೆಲವು ಸಂದರ್ಭಗಳಲ್ಲಿ ರಕ್ತ ಪರೀಕ್ಷೆ ಸಂದರ್ಭದಲ್ಲಿ ಹುಬ್ಬಳ್ಳಿಗೋ, ಬೆಳಗಾವಿಗೋ, ಇತರ ಸ್ಥಳಗಳಿಗೋ ಬರೆದುಕೊಟ್ಟಿದ್ದು ಇದೆ.. ಇದು ತಪ್ಪಿಸಲೇಬೇಕು...ಇನ್ನೂ ಹಲವು ಕಾರಣಗಳು ಇದ್ದೇ ಇದೆ.. ಪರಿಸರಕ್ಕೆ ಹಾನಿಯಾಗುವಂಥ ಯಾವುದೇ ಯೋಜನೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಜನರೂ ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.
ಕೈಗಾ, ಕಾಳಿ, ಸೀಬರ್ಡ್ ಯೋಜನೆ ಹೀಗೆ ಹಲವು ಯೋಜನೆಗಳನ್ನು ಹೇರಲಾಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾಕೆ ಕೊಡೋದಿಲ್ಲ ಎಂದು #weneedemergencyhospital_in_uttarakannada ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ನಡೆಸಲಾಗುತ್ತಿದೆ.












Click it and Unblock the Notifications