ಅನಂತ್ಕುಮಾರ್ ಹೆಗಡೆ ವಿರುದ್ಧ ಸುಳ್ಳು ಸುದ್ದಿ, ಪೊಲೀಸರಿಗೆ ದೂರು
ಶಿರಸಿ, ಮಾರ್ಚ್ 11: ಬಿಜೆಪಿಯ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರ ವಿರುದ್ಧ ಫೇಸ್ಬುಕ್ನಲ್ಲಿ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಆರೋಪಿಸಿ ಸಚಿವರ ಆಪ್ತ ಕಾರ್ಯದರ್ಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೇಸ್ಬುಕ್ ಪೇಜ್ ಆದ ಪ್ರಜಾಕೀಯ ಸಪೋರ್ಟರ್ಸ್ ಮತ್ತು ಮಂಜು ಪವರ್ ಸ್ಟಾರ್ ಎನ್ನುವ ಫೆಸ್ಬುಕ್ ಖಾತೆಯಿಂದ ಅನಂತ್ಕುಮಾರ್ ಹೆಗಡೆ ಅವರು ಹೇಳದೇ ಇರುವ ಆಕ್ಷೇಪಾರ್ಹ ಹೇಳಿಕೆಯನ್ನು ಅನಂತ್ಕುಮಾರ್ ಹೆಗಡೆ ಅವರು ಹೇಳಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಸುರೇಶ ಗೋವಿಂದ ಶೆಟ್ಟಿ ಅವರು ದೂರು ದಾಖಲಿಸಿದ್ದಾರೆ.
ಅನಂತಕುಮಾರ್ ಹೆಗಡೆಯವರಿಗೆ ವೃದ್ಧೆ ಎಸೆದ ಪ್ರಶ್ನೆ ಏನು?
'ನಾವು ಅಧಿಕಾರಕ್ಕೆ ಬಂದರೆ ಕೆಂಪೇಗೌಡರ ಪ್ರತಿಮೆ ಕೆಡವಿ ಅಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸುತ್ತೇವೆ' ಎಂಬ ವಾಕ್ಯಯುಳ್ಳ ಪೋಸ್ಟರ್ ಸೃಷ್ಠಿಸಿ ಅದರಲ್ಲಿ ಅನಂತ್ಕುಮಾರ್ ಹೆಗಡೆ ಅವರ ಚಿತ್ರ ಹಾಕಿ, ಈ ಹೇಳಿಕೆಯನ್ನು ಅನಂತ್ಕುಮಾರ್ ಹೆಗಡೆ ನೀಡಿದ್ದಾರೆ ಎಂದು ಫೇಸ್ಬುಕ್ಗಳಲ್ಲಿ ಹರಿಬಿಡಲಾಗಿದೆ.
ಪ್ರಜಾಕೀಯ ಸಪೋರ್ಟರ್ಸ್ ಮತ್ತು ಮಂಜು ಪವರ್ಸ್ಟಾರ್ ಅವರು ಈ ಪೋಸ್ಟ್ ಹಾಕಿದ್ದು, ಹಲವು ಜನಕ್ಕೆ ಟ್ಯಾಗ್ ಕೂಡಾ ಮಾಡಿದ್ದರು, ಆದರೆ ದೂರು ದಾಖಲಾದ ಮೇಲೆ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ. ಈ ಪೋಸ್ಟ್ಗೆ ಹಲವು ಕೆಟ್ಟ ಕಮೆಂಟ್ಗಳು ಬಂದಿದ್ದು, ಮಂಜು ಪವರ್ ಸ್ಟಾರ್ ಫೆಸ್ಬುಕ್ ಖಾತೆಯಿಂದ 'ಅನಂತ್ಕುಮಾರ್ ಹೆಗಡೆ, ನೀನು ಬೆಂಗಳೂರಿಗೆ ಬಾ ನಿನ್ನನ್ನು ನೋಡಿಕೊಳ್ಳುತ್ತೇವೆ' ಎಂದು ಪೋಸ್ಟ್ ಮಾಡಲಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಶಿರಸಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 550/2 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೋಸ್ಟ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸುರೇಶ ಗೋವಿಂದ ಶೆಟ್ಟಿ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.