ಚಿನ್ನ ಬೆಳ್ಳಿ ಕಂಚುಗಳ ನಡುವೆ ಭಾರತಕ್ಕೆ ನಿರಾಶೆಯ ಪದಕ
ಏಷಿಯನ್ ಪಂದ್ಯಾವಳಿ ಈಗ ತಾನೇ ಮುಗಿಯಿತು. ಈ ಆಟಗಳ ಫಲಿತಾಂಶ ನನಗೆ ಸಾಕಷ್ಟು ಸಂತೋಷ, ಸಮಾಧಾನಗಳನ್ನು ನೀಡಿದರೂ ಸ್ವಲ್ಪ ಮಟ್ಟಿಗೆ ಅಸಮಾಧಾನ ಮತ್ತು ದುಃಖ ಕೂಡಾ ಆಯಿತು.
ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ಮ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳೆರಡೂ ಕೊನೆಯ ಕ್ಷಣದಲ್ಲಿ ಕಳಪೆ ಆಟವಾಡಿ ಚಿನ್ನದ ಪದಕ ಪಡೆಯುವ ಅವಕಾಶ ಕಳೆದುಕೊಂಡವು. 2020ರ ಟೋಕಿಯೋ ಓಲಿಂಪಿಕ್ಸ್ ನ ಹಾಕಿ ಪಂದ್ಯಾವಳಿಯಲ್ಲಿ ನೇರ ಪ್ರವೇಶ ಪಡೆಯುವ ಉತ್ತಮ ಅವಕಾಶ ಕಳೆದುಕೊಂಡವು. ಅಲ್ಲದೇ ನಿಶ್ಚಿತ ಬಂಗಾರದ ಪದಕ ಪಡೆಯುವ ಆಟವಾದ ಕಬಡ್ಡಿ ಪಂದ್ಯದಲ್ಲಿ ಕೂಡ ಪುರುಷ ಮತ್ತು ಮಹಿಳೆಯರ ತಂಡಗಳೆರಡೂ ಸೋತು ಬಂಗಾರದ ಪದಕಗಳನ್ನು ಕಳೆದುಕೊಂಡವು.
ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ದಾಖಲೆಯ ಪದಕ ಬೇಟೆ!
ಅಲ್ಲದೇ ಈ ಬಾರಿ ಬಾಕ್ಸಿಂಗ್, ಕುಸ್ತಿ ಮತ್ತು ಬಿಲ್ಲು ಬಾಣ ಪಂದ್ಯಗಳಲ್ಲಿ ಕೂಡ ಭಾರತ ಅಂತಹ ಹೆಚ್ಚಿನ ಸಾಧನೆಯನ್ನೇನೂ ಮಾಡಲಿಲ್ಲ. ಕುಸ್ತಿಯಲ್ಲಿ ಎರಡು ಓಲಿಂಪಿಕ್ ಪದಕಗಳನ್ನು ಪಡೆದ ಸುಶೀಲ್ ಕುಮಾರ್ ಈ ಬಾರಿ ಪ್ರಥಮ ಪಂದ್ಯದಲ್ಲಿಯೇ ಸೋತು ಹೊರ ಬಿದ್ದರು. ಬಿಲ್ಲು ಬಾಣದ ಪಂದ್ಯದಲ್ಲಿ ಜಗತ್ತಿನಲ್ಲಿ ಉನ್ನತ ಕ್ರಮಾಂಕ ಪಡೆದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಅವರು ಕೂಡಾ ಯಾವುದೇ ಪದಕಗಳನ್ನು ಪಡೆಯಲು ವಿಫಲರಾದರು.
ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದ ಎಲ್ಲರ ಸಂಕ್ಷಿಪ್ತ ವಿವರ
ಆದರೂ ಈ ವೈಫಲ್ಯಗಳ ಮಧ್ಯೆ ಕೂಡ ಭಾರತದ ಒಟ್ಟಾರೆ ಪ್ರದರ್ಶನ ಹಿಂದೆಂದಿಗಿಂತಲೂ ಉತ್ತಮವಾಗಿತ್ತು. ಈ ಬಾರಿಯ ಒಟ್ಟಾರೆ ಪದಕಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚು. 2010ರ ಗುವಾಂಗ್ಜೌ ಏಷಿಯನ್ ಪಂದ್ಯಾವಳಿಯಲ್ಲಿ ಭಾರತ ಒಟ್ಟು 65 ಪದಕ(14 ಚಿನ್ನ, 17 ಬೆಳ್ಳಿ ಮತ್ತು 34 ಕಂಚು)ಗಳನ್ನು ಗಳಿಸಿತ್ತು. ಈ ಬಾರಿ 69 ಪದಕ (15 ಚಿನ್ನ, 24 ಬೆಳ್ಳಿ ಮತ್ತು 30 ಕಂಚು)ಗಳನ್ನು ಗಳಿಸಿ 2010ರ ತನ್ನ ದಾಖಲೆಯನ್ನು ಮೀರಿದೆ. ಭಾರತ ಈ ಬಾರಿ 15 ಚಿನ್ನದ ಪದಕಗಳನ್ನು ಗಳಿಸಿ 1952ರ ದೆಹಲಿ ಪಂದ್ಯಾವಳಿಯ ನಂತರ ಪ್ರಥಮ ಬಾರಿಗೆ ಮತ್ತೆ ಅಷ್ಟು ಚಿನ್ನದ ಪದಕಗಳನ್ನು ಗಳಿಸಿತು. ಈ ಬಾರಿಯ ಬೆಳ್ಳಿ ಪದಕಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚು.
ಪದಕಗಳ ಕೊಳ್ಳೆ ಹೊಡೆದ ಯುವಪೀಳಿಗೆ
ಮತ್ತೊಂದು ಸಂತಸಕರ ಬೆಳವಣಿಗೆಯೇನೆಂದರೆ, ಈ ಬಾರಿ ಹದಿವಯಸ್ಸಿನ ಅನೇಕ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ. ಶೂಟಿಂಗ್ನಲ್ಲಿ 16 ವರ್ಷದ ಸೌರಭ್ ಚೌಧರಿ ಚಿನ್ನದ ಪದಕ ಪಡೆದರೆ, 15 ವರ್ಷದ ಶಾರ್ದೂಲ್ ವಿಹಾನ್ ಮತ್ತು 19 ವರ್ಷದ ಲಕ್ಷ್ಯ ಶೋರಾನ್ ಬೆಳ್ಳಿಯ ಪದಕಗಳನ್ನು ಗಳಿಸಿದರು. ಅಲ್ಲದೇ 18 ವರ್ಷದ ಹಿಮಾ ದಾಸ್ ಮಹಿಳೆಯರ ವೈಯುಕ್ತಿಕ 400 ಮೀ ಓಟದಲ್ಲಿ ಬೆಳ್ಳಿಯ ಪದಕ ಮತ್ತು 4X400 ಮೀ ರಿಲೇ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದರು. ಇಪ್ಪತ್ತು ವಯಸ್ಸಿನ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, 24ರ ಹರೆಯದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗತ್ ಕುಸ್ತಿಯಲ್ಲಿ ಚಿನ್ನದ ಪದಕ ಪಡೆದು ಭಾರತದ ಕಿರೀಟದಲ್ಲಿ ಗರಿ ಮೂಡಿಸಿದರು.
ಕ್ರೀಡೆಯಲ್ಲಿ ಭಾರತದ ಸಾಧನೆ ಕಡಿಮೆಯೆ
ಆದರೂ ಇತರ ದೇಶಗಳೊಡನೆ ಹೋಲಿಸಿದಾಗ ಭಾರತದ ಸಾಧನೆ ಕಡಿಮೆಯೇ ಎನ್ನಬೇಕು. ಆಟದ ವಿಶ್ವ ಶಕ್ತಿಗಳಾದ ಚೀನ (289 ಪದಕಗಳು), ಜಪಾನ್ (205 ಪದಕಗಳು) ಮತ್ತು ದಕ್ಷಿಣ ಕೊರಿಯ (177 ಪದಕಗಳು)ಗಳ ಸಮೀಪಕ್ಕೂ ನಾವಿಲ್ಲ. 98 ಪದಕಗಳನ್ನು ಗಳಿಸಿದ ಇಂಡೋನೇಶಿಯಾ, 76 ಪದಕ ಗಳಿಸಿದ ಕಝಾಕಿಸ್ತಾನ, 73 ಪದಕಗಳನ್ನು ಗಳಿಸಿದ ಥೈಲ್ಯಾಂಡ್, 70 ಪದಕಗಳನ್ನು ಪಡೆದ ಉಜ್ಬೇಕಿಸ್ತಾನ ಮುಂತಾದ ಚಿಕ್ಕ ರಾಷ್ಟ್ರಗಳು ಕೂಡ ನಮಗಿಂತ ಅದೆಷ್ಟೋ ಉತ್ತಮ ಪ್ರದರ್ಶನ ಕೊಟ್ಟಿವೆ. ಹಾಂಗ್ ಕಾಂಗ್ (46 ಪದಕ), ತೈವಾನ್ (67 ಪದಕ) ಮತ್ತು ಸಿಂಗಪುರ (22 ಪದಕ)ದಂತಹ ಪುಟ್ಟ ದೇಶಗಳು ಕೂಡ ತಮ್ಮ ವಿಸ್ತೀರ್ಣ ಮತ್ತು ಜನಸಂಖ್ಯೆಗೆ ಹೋಲಿಸಿದರೆ ಬಹಳ ಉತ್ತಮ ಪ್ರದರ್ಶನ ನೀಡಿವೆ. ಹಾಗೆ ನೋಡಿದರೆ ವಿಸ್ತೀರ್ಣ ಮತ್ತು ಜನಸಂಖ್ಯೆಗಳಲ್ಲಿ ನಮ್ಮ ಹೋಲಿಕೆ ಚೀನದೊಂದಿಗೆ ಮಾತ್ರ ಸಾಧ್ಯ. ಉಳಿದೆಲ್ಲ ರಾಷ್ಟ್ರಗಳು ಬಹಳ ಚಿಕ್ಕವು. ಆದರೂ ಈ ದೇಶಗಳು ಅದು ಹೇಗೆ ಇಷ್ಟೊಂದು ಉತ್ತಮ ಪ್ರದರ್ಶನ ನೀಡುತ್ತಿವೆ? ನಮ್ಮ ಒಟ್ಟಾರೆ ಪ್ರದರ್ಶನ ಅದೇಕೆ ಅಷ್ಟೊಂದು ಸುಧಾರಿಸಿಲ್ಲ?
ಉತ್ತರ ಗೊತ್ತಿಲ್ಲದೆ ತಬ್ಬಿಬ್ಬಾಗಿದ್ದೆ
2002ರಲ್ಲಿ ದಕ್ಷಿಣ ಕೊರಿಯಾದ ಬುಸಾನ್ ನಗರದಲ್ಲಿ ಏಷಿಯನ್ ಪಂದ್ಯಾವಳಿ ನಡೆದಾಗ ನಾನು ಅಲ್ಲಿಯೇ ಕೆಲಸ ಮಾಡುತ್ತಿದ್ದೆ. ಆಗಲೂ ನಮ್ಮ ಪ್ರದರ್ಶನ ಕಳಪೆಯಾಗಿಯೇ ಇತ್ತು. 11 ಚಿನ್ನದ ಪದಕಗಳೊಂದಿಗೆ ಒಟ್ಟಾರೆ 36 ಪದಕಗಳನ್ನು ಮಾತ್ರ ನಮ್ಮ ದೇಶ ಗಳಿಸಿತ್ತು. ನನ್ನ ಸಹೋದ್ಯೋಗಿಯಾಗಿದ್ದ ಕೊರಿಯನ್ ಒಬ್ಬರು ನನಗೆ ಇದೇ ಪ್ರಶ್ನೆಯನ್ನು ಕೇಳಿದ್ದರು. ಏಷ್ಯಾದ ಎರಡನೇ ಅತಿ ದೊಡ್ಡ ದೇಶ ಭಾರತ ಅದೇಕೆ ಆಟಗಳಲ್ಲಿ ಇಷ್ಟೊಂದು ಹಿಂದೆ? ನಾನು ತಡವರಿಸುತ್ತಲೇ, ನಮ್ಮ ದೇಶ ಇನ್ನೂ ಅಭಿವೃದ್ದಿ ಹೊಂದುತ್ತಿರುವ ಬಡ ದೇಶ. ಅದೇ ಕಾರಣವಿರಬಹುದು ಎಂದು ಹೇಳಿದ್ದೆ. ಆಗ ಅವರು, ಕಝಾಕಿಸ್ತಾನ ಮತ್ತು ಉಜ್ಬೇಕಿಸ್ತಾನ ಭಾರತಕ್ಕಿಂತ ಬಡ ರಾಷ್ಟ್ರಗಳು. ಅವು ಹೇಗೆ ಇಷ್ಟೊಂದು ಚೆನ್ನಾಗಿ ಪ್ರದರ್ಶನ ನೀಡುತ್ತಿವೆ ಎಂದು ಕೇಳಿದಾಗ ನಿರುತ್ತರನಾಗಿದ್ದೆ. ಆಗ ಅವರು ಕೊರಿಯನ್ ವೃತ್ತ ಪತ್ರಿಕೆಯೊಂದರಲ್ಲಿ ಈ ಬಗ್ಗೆ ಪ್ರಕಟವಾದ ಲೇಖನವೊಂದನ್ನು ತೋರಿಸುತ್ತಾ, ನನ್ನ ಮುಂದೆ ಹಲವಾರು ಕಾರಣಗಳ ಪಟ್ಟಿ ನೀಡಿದ್ದರು.
ಭಾರತ ಹಿಂದುಳಿದಿರುವುದಕ್ಕೆ ಕಾರಣಗಳು
1.
ಸರಕಾರ
ಸ್ಪರ್ಧಾತ್ಮಕ
ಆಟಗಳಿಗೆ
ತಕ್ಕ
ಮಟ್ಟಿಗೆ
ಆದ್ಯತೆ
ನೀಡುತ್ತಿಲ್ಲ.
2.
ಉತ್ತಮ
ತರಗತಿಯ
ಕ್ರೀಡಾ
ಸೌಲಭ್ಯಗಳನ್ನು
ಒದಗಿಸುವತ್ತ
ವಿಫಲವಾಗಿದೆ.
3.
ಒಳ್ಳೆಯ
ಕ್ರೀಡಾಪಟುಗಳನ್ನು
ಗುರುತಿಸಿ
ತರಬೇತಿ
ನೀಡುವ
ವಿಷಯವನ್ನು
ನಿರ್ಲಕ್ಷಿಸಿದೆ.
4.
ಇಂತಹ
ಪ್ರತಿಕೂಲ
ಪರಿಸ್ಥಿತಿಯಲ್ಲಿ
ಕೂಡ
ಒಳ್ಳೆಯ
ಸಾಧನೆ
ಮಾಡಿದವರಿಗೆ
ತಕ್ಕ
ಮಟ್ಟಿಗೆ
ಧನ
ಸಹಾಯ
ನೀಡುವುದರಲ್ಲಿ
ಆಸಕ್ತಿ
ತೋರಿಸುತ್ತಿಲ್ಲ.
5.
ಕ್ರಿಕೆಟ್
ಆಟಕ್ಕೆ
ಅಗತ್ಯಕ್ಕಿಂತ
ಹೆಚ್ಚಿನ
ಮಹತ್ವ
ನೀಡುತ್ತಿರುವುದು.
6.
ಭಾರತೀಯ
ಸಮಾಜ
ಕೂಡ
ಸ್ಪರ್ಧಾತ್ಮಕ
ಆಟಗಳನ್ನು
ಗಂಭೀರವಾಗಿ
ಪರಿಗಣಿಸುತ್ತಿಲ್ಲ.
ಇತ್ಯಾದಿ
ಇತ್ಯಾದಿ.
ಸಿಂಗಪುರದಲ್ಲಿ ಇವೆ ಎಲ್ಲ ಸವಲತ್ತುಗಳು
ಮೊದಲು ನಮ್ಮ ದೇಶದ ಬಗ್ಗೆ ಟೀಕೆ ಮಾಡುತ್ತಿದ್ದ ಅವರ ಮಾತು ಕೇಳಿ ಸಿಟ್ಟು ಬಂದರೂ, ಅವರು ಹೇಳುತ್ತಿರುವುದರಲ್ಲಿ ತಪ್ಪೇನೂ ಇಲ್ಲವಲ್ಲ ಎನಿಸಿತು. ದಕ್ಷಿಣ ಕೊರಿಯದ ಶಾಲೆಗಳಲ್ಲಿರುವ ಆಟದ ಮೈದಾನಗಳು ಮತ್ತು ಕ್ರೀಡಾ ವ್ಯವಸ್ಥೆಗಳನ್ನು ನೋಡಿದ ನನಗೆ, ಅಂತಹ ವ್ಯವಸ್ಥೆಗಳು ನಮ್ಮ ದೇಶದ ಓಲಿಂಪಿಕ್ ತರಬೇತಿ ಕೇಂದ್ರಗಳಲ್ಲಿ ಕೂಡಾ ಇಲ್ಲ ಎನಿಸಿತ್ತು. ಈಗ ನಾನಿರುವ ಸಿಂಗಪುರದಲ್ಲಿ ಕೂಡ ಪ್ರತಿ ಬಡಾವಣೆಯಲ್ಲಿ ಒಂದು ಕ್ರೀಡಾ ಸಂಕೀರ್ಣವಿದೆ. ಅಲ್ಲಿ ಫುಟ್ ಬಾಲ್, ಹಾಕಿ ಅಂತಹ ಆಟಗಳನ್ನು ಆಡಲು ವಿಶ್ವಮಟ್ಟದ ಕ್ರೀಡಾಂಗಣಗಳು ಮತ್ತು ಬ್ಯಾಡ್ಮಿಂಟನ್, ಟೆನಿಸ್, ಈಜುಕೊಳ, ಬಾಸ್ಕೆಟ್ ಬಾಲ್ ಅಂತಹ ಕ್ರೀಡೆಗಳನ್ನು ಆಡಲು ವ್ಯವಸ್ಥೆಗಳನ್ನು ಸರಕಾರ ಏರ್ಪಾಡು ಮಾಡಿದೆ. ದೇಹ ದಾರ್ಢ್ಯ ಬೆಳೆಸಿಕೊಳ್ಳಲು ಜನರಿಗೆ ಅನೇಕ ಅನುಕೂಲ ಮಾಡಿಕೊಟ್ಟಿದೆಯಲ್ಲದೇ, ಆ ನಿಟ್ಟಿನಲ್ಲಿ ಜನರನ್ನು ಪ್ರೇರಿಸುವ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.
ಸಮಾಜ ಒಡೆಯುವ ನಾಯಕರಿಗೆ ಬೇಕಿಲ್ಲ
ಇವೆಲ್ಲಾ ನಮ್ಮಲ್ಲೇಕೆ ಸಾಧ್ಯವಾಗುತ್ತಿಲ್ಲ? ಯಾವಾಗ ನೋಡಿದರೂ, ಋಣಾತ್ಮಕ ಅಂಶಗಳನ್ನೇ ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸವನ್ನೇ ಮಾಡುತ್ತಿರುವ ನಾಯಕರುಗಳಿಗೆ, ಇಂತಹ ನಾಯಕರನ್ನೋ, ಕ್ರಿಕೆಟರುಗಳನ್ನೋ, ಅಥವಾ ಸಿನಿಮಾ ತಾರೆಗಳನ್ನೋ ತಮ್ಮ ಆದರ್ಶವನ್ನು ಮಾಡಿಕೊಂಡು ಕಾಲಹರಣ ಮಾಡುತ್ತಿರುವ ನಮ್ಮ ತರುಣರಿಗೆ, ಮಕ್ಕಳನ್ನು ಬರೀ ಓದುವ ಯಂತ್ರಗಳನ್ನಾಗಿ ಪರಿವರ್ತಿಸುವ ಗೀಳು ಹೊಂದಿದ ತಂದೆ ತಾಯಿಯರಿಗೆ ದೇಶದ ಒಟ್ಟಾರೆ ಅಭಿವೃದ್ಧಿಗೆ ಕ್ರೀಡೆಗಳು ಅತ್ಯಗತ್ಯ ಎಂದು ಮನದಟ್ಟಾಗುವವರೆಗೆ ಹೀಗೆಯೇ ಮುಂದುವರೆಯುತ್ತದೆ ಎಂದು ನನ್ನ ಭಾವನೆ. ಆದರೆ 2018ರ ಏಷ್ಯನ್ ಕ್ರೀಡೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ತರುಣರನ್ನು ನೋಡಿದಾಗ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬ ಧನಾತ್ಮಕ ಭಾವನೆ ನನ್ನಲ್ಲಿ ಮೂಡಿದೆ.