ಪಟ್ಟಣಗಳು ಖಾಲಿ ಖಾಲಿ.. ಯುವಕರನ್ನು ಹಳ್ಳಿಗೆ ಕರೆತಂದ ಕೊರೊನಾ
ಕೆಲಸ ಹುಡುಕಿಕೊಂಡು ಹಳ್ಳಿಯ ಯುವಕ/ಯುವತಿಯರು ಪಟ್ಟಣಕ್ಕೆ ಹೋಗುತ್ತಾರೆ. ಓದಿ ಕೆಲಸಕ್ಕೆಂದು ಬೆಂಗಳೂರು ಸೇರುವ ಎಷ್ಟೋ ಯುವಕ-ಯುವತಿಯರು ತಮ್ಮ ಊರಿನಿಂದ ದೂರವಾಗಿಬಿಡುತ್ತಾರೆ. ಆದರೆ, ಇದೀಗ ಕೊರೊನಾ ಪರಿಣಾಮದಿಂದ ಅವರೆಲ್ಲ ಮತ್ತೆ ಹಳ್ಳಿ ಸೇರಿದ್ದಾರೆ.
ಹಬ್ಬ, ಜಾತ್ರೆ, ಮದುವೆ ಹೀಗೆ ಎಷ್ಟೇ ಮುಖ್ಯ ಕಾರ್ಯಕ್ರಮ ಇದ್ದರೂ, ಕೆಲಸದ ಕಾರಣದಿಂದ ಎಷ್ಟೋ ಯುವಕ-ಯುವತಿಯರು ತಮ್ಮ ಮನೆಯವರ ಜೊತೆಗೆ ಇರಲು ಆಗುತ್ತಿರಲಿಲ್ಲ. ಕಂಪನಿಯ ಕೆಲಸದ ಒತ್ತಡದ ನಡುವೆ ಊರಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಎಷ್ಟೇ ಕೆಲಸ ಇದ್ದರೂ, ಅವರೆಲ್ಲ ತಮ್ಮೂರಿಗೆ ಬರುವಂತೆ ಆಗಿದೆ. ಅದಕ್ಕೆ ಕಾರಣ ಕೊರೊನಾ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ. ಒಬ್ಬ ವೃದ್ಧ ಮೃತರಾಗಿದ್ದಾರೆ. ಬಿಬಿಎಂಪಿ ಬೆಂಗಳೂರಿನ ಎಲ್ಲ ಪಿಜಿ ಮತ್ತು ಹಾಸ್ಟೆಲ್ ಗಳಿಗೆ ಸೂಚನೆ ನೀಡಿದ್ದು, ಅಲ್ಲಿ ಇರುವವರಿಗೆ ಊರಿಗೆ ತೆರಳುವುದು ಸೂಕ್ತ ಎಂದಿದೆ. ಹೀಗಾಗಿ, ಬೆಂಗಳೂರಿನಲ್ಲಿದ್ದ ಯುವಕ-ಯುವತಿಯರು ಹಳ್ಳಿಗೆ ಮರಳಿದ್ದಾರೆ.

ಗೂಡು ಸೇರಿದ ಹಳ್ಳಿ ಯುವಕ-ಯುವತಿಯರು
ಬೆಂಗಳೂರು ಕೊರೊನಾ ಭೀತಿಯಿಂದ ವಾರಗಳ ಕಾಲ ಬಂದ್ ಆಗಿದೆ. ರಸ್ತೆಯಲ್ಲಿ ಜನರೇ ಕಾಣುತ್ತಿಲ್ಲ. ಬಹುತೇಕ ಕಂಪನಿಗಳು ರಜೆ ಕೊಟ್ಟಿವೆ. ಇನ್ನು ಕೆಲವು ಕಂಪನಿಗಳು ವರ್ಕ್ ಫ್ರೆಮ್ ಹೋಮ್ ನೀಡಿದೆ. ಇದರಿಂದ ಹಳ್ಳಿ ಹುಡುಗರು ಬಸ್ ಏರಿ ಹೊರಟಿದ್ದಾರೆ. ರಜೆಯ ಖುಷಿಯೋ, ಕೊರೊನಾ ಭಯವೋ ಒಟ್ಟಿಯಲ್ಲಿ ಹಳ್ಳಿ ಹುಡುಗ-ಹುಡುಗಿಯರು ಪಟ್ಟಣ ಬಿಟ್ಟು ಗೂಡಿಗೆ ಮರಳಿದ್ದಾರೆ.

ಹಳ್ಳಿಯ ಕಷ್ಟದ ಅರಿವು
ವರ್ಕ್ ಫ್ರೆಮ್ ಹೋಮ್ ನೀಡಿದ ಕಂಪನಿಯ ಯುವಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹಳ್ಳಿಯ ನೆಟ್ವರ್ಕ್ ಕಿರಿಕಿರಿಯ ನಡುವೆ, ವಿದ್ಯುತ್ ಜೂಟಾಟವನ್ನು ಸಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯ ಮಂದಿಗೆ ಯುವಕರ ಲ್ಯಾಪ್ ಟಾಪ್ ಆಟಿಕೆಯಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಎಸಿ ರೂಮ್ ನಲ್ಲಿ ಕೂತು ಕೆಲಸ ಮಾಡುವ ಯುವಕರಿಗೆ ತಮ್ಮ ಹಳ್ಳಿಯ ತೊಂದರೆಗಳು ಈಗ ಅರ್ಥವಾಗುತ್ತಿವೆ.

ಮಕ್ಕಳನ್ನು ಕಂಡು ಖುಷಿಯಾದ ತಂದೆ, ತಾಯಿ
ಊರಿಗೆ ಬರೋ ಅಂದ್ರೆ ಕಾರಣ ಹೇಳುತ್ತಿದ್ದ ಮಗ-ಮಗಳು ಈಗ ವಾರಗಳಿಂದ ಮನೆಯಲ್ಲೇ ಇದ್ದಾರೆ. ಇದನ್ನು ನೋಡಿ ಯಾವ ತಂದೆ ತಾಯಿಗೆ ಖುಷಿಯಾಗಲ್ಲ ಹೇಳಿ. ಬೆಂಗಳೂರು ಬಿಟ್ಟು ಮನೆಯಲ್ಲೇ ಇರುವ ಮಗನನ್ನು ನೋಡಿ ಹಳ್ಳಿಯ ತಂದೆ ತಾಯಿ ಮನಸ್ಸಲ್ಲೇ ಸಂತಸ ಪಟ್ಟಿದ್ದಾರೆ. ಕೊರೊನಾ ಕಾಟ ಮುಗಿಯುವವರೆಗೆ ಬೆಂಗಳೂರು ಕಡೆ ಮುಖ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

ಹೊಟ್ಟೆ ತುಂಬ ಊಟ
ಬೆಂಗಳೂರಿನಲ್ಲಿ ಕೆಲಸ ಮಾಡುವ ಹುಡುಗರಿಗೆ ಊಟದ ಸಮಸ್ಯೆ ಇದ್ದೇ ಇರುತ್ತದೆ. ಕೆಲವರಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡಲು ಆಗಲ್ಲ. ಇನ್ನು ಕೆಲವರಿಗೆ ಹೋಟೆಲ್ ರುಚಿ ನಾಲಿಗೆಗೆ ಬೇಸರ ಅನಿಸಿರುತ್ತದೆ. ಅವರೆಲ್ಲ ಈಗ ಮನೆ ಊಟ ಸವಿಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಅಮ್ಮನ ಊಟ ಉಪಚಾರ ಸಿಗುತ್ತಿದೆ.

ವೃದ್ಧಶ್ರಮದಂತೆ ಕಾಣುತ್ತಿದ್ದ ಮಲೆನಾಡು
ಹಳ್ಳಿಯ ಯುವಕರೆಲ್ಲ ಪಟ್ಟಣಕ್ಕೆ ಹೋಗಿದ್ದ ಕಾರಣ, ಹಳ್ಳಿಯಲ್ಲಿ ವೃದ್ಧರೆ ಹೆಚ್ಚಾಗಿದ್ದರು. ಅದರಲ್ಲಿಯೂ ಮಲೆನಾಡಿನ ಎಷ್ಟೋ ಹಳ್ಳಿಗಳು ವೃದ್ಧಶ್ರಮದಂತೆ ಕಾಣುತ್ತಿದ್ದವು. ಆದರೆ, ಈಗ ಹಳ್ಳಿಯಲ್ಲಿ ಯುವಕರು ಸಹ ಕಣ್ಣಿಗೆ ಬೀಳುತ್ತಿದ್ದಾರೆ. ನಿಜ.. ಕೊರೊನಾ ವಿಶ್ವವನ್ನೇ ಕಂಗೆಡಿಸುವಂತೆ ಮಾಡಿದೆ. ಎಷ್ಟೋ ಜನರ ಜೀವ ತೆಗೆದುಕೊಂಡಿದೆ. ಆದರೆ, ಅದೇ ಕೊರೊನಾ ಯುವಕ/ಯುವತಿಯರನ್ನು ಹಳ್ಳಿಗೆ ಕರೆ ತಂದಿದೆ.












Click it and Unblock the Notifications