ಕುಮಾರಸ್ವಾಮಿ, ಡಿಕೆ ಶಿವಕುಮಾರ್ 'ಶಿವಮೊಗ್ಗ' ರಾಜಕೀಯದ ಹಿಂದಿದೆ ಭಾರೀ ಲೆಕ್ಕಾಚಾರ
Recommended Video
ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ, ರಾಜ್ಯ ರಾಜಕೀಯದ ಮುಂದಿನ ಭಾಷ್ಯ ಬರೆಯಲಿದೆ. ಬಿಜೆಪಿ ನಿರೀಕ್ಷೆಗೂ ಮೀರಿ ಸೀಟು ಗೆದ್ದರೆ ಅಥವಾ ನಿರ್ಣಾಯಕ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಪಲ್ಟಿ ಹೊಡೆದರೆ, ಎಚ್ಡಿಕೆ ಸರಕಾರದ ದಿನಗಣನೆ ಆರಂಭವಾದರೂ ಆಗಬಹುದು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಬ್ಬರು ಹಾಲೀ ಮುಖ್ಯಮಂತ್ರಿ ಪುತ್ರ (ನಿಖಿಲ್, ಮಂಡ್ಯ), ಇಬ್ಬರು ಮಾಜೀ ಮುಖ್ಯಮಂತ್ರಿಗಳ ಪುತ್ರರು (ಶಿವಮೊಗ್ಗ, ಬಿ ವೈ ರಾಘವೇಂದ್ರ, ಮಧು ಬಂಗಾರಪ್ಪ) ಈ ಬಾರಿಯ ಲೋಕಸಭಾ ಚುನಾವಣಾ ಕಣದಲ್ಲಿದ್ದಾರೆ. ಮೊದಲ ಹಂತದ ಚುನಾವಣೆ ಮುಗಿದ ಕೂಡಲೇ, ಕುಮಾರಸ್ವಾಮಿಯವರ ಗಮನ ಸಂಪೂರ್ಣ ಶಿವಮೊಗ್ಗದತ್ತ ಕೇಂದ್ರೀಕೃತವಾಗಿದೆ.
ಕುಮಾರಸ್ವಾಮಿಯವರಿಗೆ, ಕಾಂಗ್ರೆಸ್ಸಿನ ಪ್ರಭಾವಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್, ಫುಲ್ ಸಾಥ್ ನೀಡುತ್ತಿದ್ದಾರೆ. ವ್ಯವಸ್ಥಿತ ಲೆಕ್ಕಾಚಾರದೊಂದಿಗೆ ಹೆಜ್ಜೆಯಿಡುತ್ತಿರುವ ಡಿಕೆಶಿ-ಎಚ್ಡಿಕೆ, ಕ್ಷೇತ್ರದ ವ್ಯಾಪ್ತಿಯ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಭಿನ್ನಮತವನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ನನಗೆ ನಿಖಿಲ್ ಹೇಗೆ ಮುಖ್ಯನೋ ಅದೇ ರೀತಿ ಮಧು ಕೂಡಾ ಎಂದಿರುವ ಕುಮಾರಸ್ವಾಮಿ, ಒಂದು ವೇಳೆ ನನ್ನ ಮಗ ಸೋತರೆ, ಯಡಿಯೂರಪ್ಪನವರ ಮಗ ರಾಘವೇಂದ್ರ ಕೂಡಾ ಸೋಲಬೇಕು ಎನ್ನುವ ತಂತ್ರಗಾರಿಕೆ ಹಣೆಯುತ್ತಿದ್ದಾರಾ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪ್ರಮುಖವಾಗಿ, ಯಡಿಯೂರಪ್ಪನವರನ್ನು ಮಟ್ಟಹಾಕುವುದೇ ಮೈತ್ರಿಪಕ್ಷದ ಮೊದಲ ಮತ್ತು ಕೊನೆಯ ಆದ್ಯತೆ, ಅದಕ್ಕೆ ಪ್ರಬಲವಾದ ಕಾರಣವೂ ಇದೆ.

ಮೈತ್ರಿಪಕ್ಷದ ಬಹುತೇಕ ಎಲ್ಲಾ ಪ್ರಮುಖರು ಶಿವಮೊಗ್ಗದಲ್ಲಿ ಬೀಡು
ಮೊದಲ ಹಂತದ ಚುನಾವಣೆ ಮುಗಿದ ಕೂಡಲೇ, ಮೈತ್ರಿಪಕ್ಷದ ಬಹುತೇಕ ಎಲ್ಲಾ ಪ್ರಮುಖರು ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮುಖಂಡರು ಜಂಟಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಸಹೋದರ ಸುರೇಶ್, ಎರಡ್ಮೂರು ದಿನದಿಂದ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇನ್ನು, ದೇವೇಗೌಡ, ಕುಮಾರಸ್ವಾಮಿ, ಸಾ.ರಾ, ಮಹೇಶ್ ಆದಿಯಾಗಿ ಮುಖಂಡರೆಲ್ಲರೂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿಗೆ ಭರ್ಜರಿ ಲೀಡ್ ತಂದುಕೊಟ್ಟಿದ್ದ ಭದ್ರಾವತಿ
ಕಳೆದ ಉಪಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಲೀಡ್ ತಂದುಕೊಟ್ಟಿದ್ದ ಭದ್ರಾವತಿಯಲ್ಲಿ ವಿಶೇಷ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಸಂಗಮೇಶ್ ಮತ್ತು ಅಪ್ಪಾಜಿ ಗೌಡರನ್ನು ಒಂದೇ ವೇದಿಕೆಯಲ್ಲಿ ಕರೆತರುವಲ್ಲಿ ಡಿಕೆ ಶಿವಕುಮಾರ್ ಈಗಾಗಲೇ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಕ್ಷೇತ್ರವನ್ನು ಗೆಲ್ಲಬೇಕು ಅನ್ನುವುದಕ್ಕಿಂತ, ಮೈತ್ರಿ ಪಕ್ಷದ ಟಾರ್ಗೆಟ್ ಯಡಿಯೂರಪ್ಪ..

ಜೆಡಿಎಸ್-ಕಾಂಗ್ರೆಸ್ ಪಕ್ಷದ ಮುಖಂಡರ ನಡುವಿನ ಭಿನ್ನಾಭಿಪ್ರಾಯ
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ, ಕುಮಾರಸ್ವಾಮಿ ಸರಕಾರ ಪತನಗೊಳ್ಳಲಿದೆ ಎನ್ನುವ ಮಾತನ್ನು ಈಗಾಗಲೇ ಬಿಜೆಪಿ ಮುಖಂಡರು ಹೇಳಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಪಕ್ಷದ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಇನ್ನೂ ಸಂಪೂರ್ಣವಾಗಿ ತಹಬಂದಿಗೆ ಬರದೇ ಇರುವುದರಿಂದ, ಇದರ ಲಾಭವನ್ನು ಪಡೆದು ಬಿಜೆಪಿ ಮತ್ತೆ ಆಪರೇಶನ್ ಕಮಲಕ್ಕೆ ಕೈಹಾಕುವ ಸಾಧ್ಯತೆಯಿಲ್ಲದಿಲ್ಲ. ಅದಕ್ಕಾಗಿಯೇ, ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಮೈತ್ರಿಪಕ್ಷಗಳು ಗಂಭೀರವಾಗಿ ಪರಿಗಣಿಸಿರುವುದು.

ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲೂ ಹಿನ್ನಡೆಯನ್ನು ಅನುಭವಿಸುತ್ತಾರೆ
ಹಾಗಾಗಿ, ಶಿವಮೊಗ್ಗದಲ್ಲಿ ಮಗ ರಾಘವೇಂದ್ರನಿಗೆ ಸೋಲು ಉಣಿಸಿದರೆ, ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲೂ ಹಿನ್ನಡೆಯನ್ನು ಅನುಭವಿಸುತ್ತಾರೆ. ಇದರಿಂದ, ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರಕಾರ ಅಲುಗಾಡಿಸುವ ಕೆಲಸಕ್ಕೆ ಯಡಿಯೂರಪ್ಪ ಕೈಹಾಕಲಾರರು ಎನ್ನುವ ಲೆಕ್ಕಾಚಾರ ಇರುವುದರಿಂದ, ಈ ಕ್ಷೇತ್ರವನ್ನು ಮೈತ್ರಿಪಕ್ಷಗಳು ಗಂಭೀರವಾಗಿ ಪರಿಗಣಿಸಿರುವುದು.

ಮಗನ ಗೆಲುವಿಗೆ ಠೊಂಕ ಕಟ್ಟಿರುವ ಬಿಎಸ್ವೈ
ಇದನ್ನು ಅರಿತಿರುವ ಯಡಿಯೂರಪ್ಪ ಕೂಡಾ ಭಾರೀ ತಂತ್ರಗಾರಿಕೆಯನ್ನೇ ರೂಪಿಸುತ್ತಿದ್ದಾರೆ. ಮಗನ ಗೆಲುವಿಗೆ ಠೊಂಕ ಕಟ್ಟಿರುವ ಬಿಎಸ್ವೈ, ಪ್ರತೀ ಬೂತಿನಲ್ಲೂ ಕಾರ್ಯಕರ್ತರ ಪಡೆಯನ್ನು ನಿಯೋಜಿಸಿದ್ದಾರೆ. ಮೋದಿ ಹೆಸರಿನ ಬಲ, ಈಗಾಗಲೇ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ. ಯಡಿಯೂರಪ್ಪನವರ ಕುಟುಂಬದ ಸದಸ್ಯರೆಲ್ಲಾ ರಾಘವೇಂದ್ರನ ಗೆಲುವಿಗೆ ದುಡಿಯುತ್ತಿದ್ದಾರೆ.












Click it and Unblock the Notifications