ಶಿವಮೊಗ್ಗ : ಬೀದಿಯಲ್ಲಿ ಬೈದಾಡಿಕೊಂಡ ಆಯುಕ್ತೆ, ಆಯನೂರು ಮಂಜುನಾಥ್
ಶಿವಮೊಗ್ಗ, ಜೂನ್ 12 : 'ನೀವು ಹೇಳಿದ ಕಥೆ ಕೇಳಿಕೊಂಡು ಇದೀವಾ ನಾವು, ಅಧಿಕಾರಿಗಳು ಹೇಳಿದಂತೆ. ಹೇಗೆ ಮಾತನಾಡಬೇಕು ನಿಮಗೆ?, ನಿಮಗೆ ಮರ್ಯಾದೆ ಬೇಕು ಅಲ್ಲಿ ಜನ ಸಾಯಬೇಕಾ? ಜನರ ಸಮಸ್ಯೆ ಮಾತಾಡುತ್ತಿದ್ದೇನೆ. ಕಮೀಷನರ್ ಅಲ್ವಾ ನೀನು ಸಾಲೂ ಮಾಡು' ಆಯನೂರು ಮಂಜುನಾಥ್ ಅವರು ಸರ್ಕಾರಿ ಅಧಿಕಾರಿ ಜೊತೆ ವಾಗ್ವಾದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಮತ್ತು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಆಯನೂರು ಮಂಜುನಾಥ್ ನಡುವೆ ನಡೆದ ವಾಕ್ಸಮರದ ವಿಡಿಯೋ ವೈರಲ್ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಸಮ್ಮುಖದಲ್ಲೇ ಈ ವಾಗ್ವಾದ ನಡೆದಿದೆ.

ಮಂಗಳವಾರ ಶಿವಮೊಗ್ಗದಲ್ಲಿ ಡಿ.ಸಿ.ತಮ್ಮಣ್ಣ ಅವರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಹೈಡ್ರಾಮ ನಡೆದಿದೆ, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರನ್ನು ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಆಯನೂರು ಮಂಜುನಾಥ್ ಅವರಿಗೆ ಆಯುಕ್ತರು ತಿರುಗೇಟು ಕೊಟ್ಟಿದ್ದಾರೆ.
ಶಿವಮೊಗ್ಗದ ಶರಾವತಿ ನಗರದಲ್ಲಿ ಪರಿಶೀಲನೆ ನಡೆಸುವ ವೇಳೆ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಮುಂದೆಯೇ ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಆಯನೂರು ಮಂಜುನಾಥ್ ಅವರು ಏರು ಧ್ವನಿಯಲ್ಲಿ ಮಾತನಾಡಿದಾಗ ಆಯುಕ್ತೆ ಚಾರುಲತಾ ಸೋಮಲ್ ನಿಧಾನವಾಗಿ ಮಾತನಾಡುವಂತೆ ಸೂಚಿಸಿದರು. ಆಯನೂರು ಮಂಜುನಾಥ್ ಅವರು ಆಯುಕ್ತೆಯನ್ನು ಏಕವಚನದಲ್ಲಿ ಮಾತನಾಡಿಸಿದರು.
ಇದರಿಂದ ಕೋಪಗೊಂಡ ಆಯುಕ್ತೆ ಚಾರುಲತಾ ಸೋಮಲ್ ಏಕವಚನದಲ್ಲಿ ಮಾತನಾಡದಂತೆ ತಿರುಗೇಟು ಕೊಟ್ಟರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ದಯಾನಂದ್ ಮುಂತಾದವರು ಈ ಚಕಮಕಿಗೆ ಸಾಕ್ಷಿಯಾದರು.












Click it and Unblock the Notifications