ಶಿವಮೊಗ್ಗ: ಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲು
ಶಿವಮೊಗ್ಗ, ಅಕ್ಟೋಬರ್ 4: ಭದ್ರಾ ನದಿಯಲ್ಲಿ ಈಜಲು ಇಳಿದಿದ್ದ ಯುವಕರ ತಂಡದಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಭದ್ರಾವತಿಯ ದೊಡ್ಡ ಗೋಪೇನಹಳ್ಳಿ ಬಳಿ ಶನಿವಾರ ಸಂಜೆ ವೇಳೆ ನಡೆದಿದೆ.
ಭದ್ರಾವತಿಯ ದೊಡ್ಡ ಗೋಪೇನಹಳ್ಳಿ ಬಳಿಯ ಗೋಂಧಿ ಚಾನಲ್ ಆಂಜನೇಯ ಬಂಡೆ ಸಮೀಪ ಈ ಘಟನೆ ನಡೆದಿದ್ದು, ಇಬ್ಬರು ಯುವಕರ ಶವವನ್ನು ಮೇಲಕ್ಕೆ ತೆಗೆಯಲಾಗಿದೆ. ಜನ್ನಾಪುರದ ರಾಜೇಶ್ (38) ಹಾಗೂ ಮನೋಜ್ (17) ಎನ್ನುವವರು ಸಾವಿಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಒಟ್ಟು 9 ಯುವಕರು ಸೈಕಲಿಂಗ್'ಗೆ ತೆರಳಿದ್ದು, ಎಲ್ಲರೂ ಈಜಲು ನೀರಿಗೆ ಇಳಿದಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಗಾತ್ರದ ಸುಳಿಯಿದ್ದು, ಮನೋಜ್ ಇದಕ್ಕೆ ಸಿಲುಕಿ ಮುಳುಗುವ ಹಂತಕ್ಕೆ ಬಂದಾಗ ಸಹಾಯಕ್ಕಾಗಿ ಕೂಗಿದ್ದಾನೆ. ಈ ವೇಳೆ ರಾಜೇಶ್ ಎನ್ನುವವರು ರಕ್ಷಣೆಗೆ ಧಾವಿಸಿ, ಬಟ್ಟೆ ಕಟ್ಟಿ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ, ಅವರೂ ಸಹ ನೀರಿನ ಸುಳಿಗೆ ಸಿಲುಕಿ ಬಲಿಯಾಗಿದ್ದಾರೆ.

ಇದೇ ವೇಳೆ ನೀರಿನಲ್ಲಿ ಸಿಲುಕಿದ್ದ 13 ವರ್ಷದ ಕಾರ್ತಿಕ್ ಎನ್ನುವ ಬಾಲಕನನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿದ್ದು, ಸ್ಥಳೀಯ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ನದಿಯ ಸ್ಥಳ ಅಪಾಯಕಾರಿ ಪ್ರದೇಶವಾಗಿದ್ದು, ಇಲ್ಲಿ ಈ ಹಿಂದೆಯೂ ಸಹ ಕೆಲವು ಮಂದಿ ನೀರಿನ ಸುಳಿಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ.












Click it and Unblock the Notifications