ಶಿವಮೊಗ್ಗ ಗಲಭೆ: ಕೊಲೆಯಾಗಿದ್ದು ಬೇರೆಯದೇ ಕಾರಣಕ್ಕೆ!
ಶಿವಮೊಗ್ಗ,ಏ. 5 : ರಾಜ್ಯವನ್ನೇ ತಲ್ಲಣಗೊಳಿಸಿದ್ದ ಶಿವಮೊಗ್ಗ ಕೋಮು ಗಲಭೆ ವೇಳೆ ಪದ್ಮ ಟಾಕೀಸ್ ಬಳಿ ಹತ್ಯೆಗೀಡಾಗಿದ್ದ ಮಂಜುನಾಥ್ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮಂಜುನಾಥ್ ಕೊಲೆ ಕೋಮು ಗಲಭೆಯಿಂದ ಆದದ್ದಲ್ಲ. ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತನ ಅಕ್ಕನ ಮಗ ಅರುಣಕುಮಾರ್ (25), ಮೃತನ ಚಿಕ್ಕಮ್ಮನ ಮಗ ಅರುಣ (24), ಸಚಿನ್ (23), ಮೃತನ ಅಕ್ಕ ದಾಕ್ಷಾಯಿಣಮ್ಮ (40), ಮೃತನ ಅಕ್ಕನ ಮಗಳು ನೇತ್ರಾವತಿ (28) ಹಾಗೂ ಶ್ವೇತಾ (20) ಬಂಧಿತ ಆರೋಪಿಗಳು.[ಶಿವಮೊಗ್ಗ ಗಲಭೆಗೆ ಕಾರಣವೇನು?]

ಈ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ರವಿ ಚನ್ನಣ್ಣವರ್ , ಫೆ. 20ಕ್ಕೆ ಮಂಜುನಾಥ ಎಂಬಾತನ ಶವ ಪತ್ತೆಯಾಗಿತ್ತು. ಫೆ.19ಕ್ಕೆ ನಗರದಲ್ಲಿ ಪಿಎಫ್ಐ ಸಂಘಟನೆ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ನಡೆದಿದ್ದ ಘರ್ಷಣೆ, ಹಾಗೂ ಕೋಮುಗಲಭೆಯಲ್ಲೇ ಈತನ ಹತ್ಯೆ ಮಾಡಲಾಗಿದೆ ಎಂದೇ ನಂಬಲಾಗಿತ್ತು. ಹತ್ಯೆ ನಡೆದಿರುವುದು ಕೋಮುದ್ವೇಷ ದಿಂದ ಅಲ್ಲ, ಬದಲಿಗೆ ಮೃತನ ಸಂಬಂಧಿಗಳೇ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮಂಜುನಾಥನನ್ನು ಕೊಲೆ ಮಾಡಿದ ವಿಷಯ ಬಾಯ್ಬಿಟ್ಟಿದ್ದಾರೆ. ಮಂಜುನಾಥ ನಿವೇಶನದ ವಿಚಾರದಲ್ಲಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ಈತನ ಹತ್ಯೆ ಮಾಡಿದ್ದೇವೆ ಎಂದು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.[ಶಿವಮೊಗ್ಗ ಎಸ್ಪಿ ಕೈಗೆ ಇನ್ಸ ಪೆಕ್ಟರ್ ಸಿಕ್ಕಿಬಿದ್ದದ್ದು ಹೇಗೆ?]
ಡಿವೈಎಸ್ಪಿ, ಡಾ.ರಾಮ್. ಅರಸಿದ್ದಿ, ಕೋಟೆ ವೃತ್ತ ಸಿಪಿಐ ದೀಪಕ್, ಕುಮಾರ್ ಇನ್ನಿತರ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿದೆ. ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಡಿಜಿಪಿ ಓಂಪ್ರಕಾಶ್ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.












Click it and Unblock the Notifications