ಸಾರಿಗೆ ಮುಷ್ಕರ; ಶಿವಮೊಗ್ಗದಲ್ಲಿ ತಟ್ಟೆ, ಲೋಟ ಬಡಿದು ಪ್ರತಿಭಟನೆ
ಶಿವಮೊಗ್ಗ, ಏಪ್ರಿಲ್ 12; ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ನೌಕರರು ತಮ್ಮ ಕುಟುಂಬದವರೊಂದಿಗೆ ಡಿಸಿ ಕಚೇರಿ ಮುಂದೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಸೋಮವಾರ ನೌಕರರು ತಮ್ಮ ಕುಟುಂಬದವರು, ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಟ್ಟೆ, ಲೋಟ ಬಡಿದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.
ಈ ವೇಳೆ ಮಾತನಾಡಿದ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಸಂತೋಷ್, "ರಾಜ್ಯ ಸರ್ಕಾರ ತಮ್ಮ ಹೋರಾಟ ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಹೋರಾಟದ ಮುಂಚೂಣಿಯಲ್ಲಿರುವವರನ್ನು ವರ್ಗಾಯಿಸುತ್ತಿದೆ" ಎಂದು ಆರೋಪಿಸಿದರು.

"ಹೋರಾಟಗಾರರನ್ನು ಬೆದರಿಸುತ್ತಿದೆ. ಮತ್ತೊಂದೆಡೆ ಮಾತುಕತೆಗೆ ಕರೆದರೂ ನೌಕರರು ಬರುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಸರ್ಕಾರ ತಮ್ಮನ್ನು ಮಾತುಕತೆಗೆ ಕರೆಯುತ್ತಿಲ್ಲ" ಎಂದು ಸಂತೋಷ್ ದೂರಿದರು.
ಡ್ಯೂಟಿಗೆ ಕಳುಹಿಸಲ್ಲ; ವೇತನ ಹೆಚ್ಚಳವಾಗದೆ ಇದ್ದರೆ ತಮ್ಮ ಮನೆಯವರನ್ನು ಡ್ಯೂಟಿಗೆ ಕಳುಹಿಸುವುದಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ತಿಳಿಸಿದರು.
"ಅತ್ತೆ, ಮಾವನವರಿಗೆ ಹುಷಾರಿಲ್ಲ ಎಂದು ಚಿಕಿತ್ಸೆ ಕೊಡಿಸಿದ ಬಿಲ್ ಇನ್ನೂ ಪಾಸ್ ಆಗಿಲ್ಲ. ಸಂಬಳವನ್ನು ಹೆಚ್ಚಳ ಮಾಡುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಬಡವರು, ಕಾರ್ಮಿಕರ ಕಷ್ಟವನ್ನು ಸರ್ಕಾರ ಆಲಿಸಬೇಕು" ವಿದ್ಯಾಶ್ರೀ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ತಮ್ಮ ಸಂಕಷ್ಟವನ್ನು ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕ ಮನವಿ ಸಲ್ಲಿಸಲಾಯಿತು.












Click it and Unblock the Notifications