ಸುಹಾಸ್ ಯತಿರಾಜ್ ಶಿವಮೊಗ್ಗ ನಂಟು; ಸಿಹಿ ಹಂಚಿ ಸಂಭ್ರಮ
ಶಿವಮೊಗ್ಗ, ಸೆಪ್ಟೆಂಬರ್ 05; ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಶಿವಮೊಗ್ಗದಲ್ಲಿ ಅವರು ಆಡಿ ಬೆಳೆದ ರಸ್ತೆಯ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ನೆರೆಹೊರೆಯ ಮನೆಯವರು ಸಿಹಿ ಹಂಚಿ ಖುಷಿಪಟ್ಟರು. ಅಲ್ಲದೆ ಫೋನ್ ಮೂಲಕ ಶುಭಾಶಯಗಳನ್ನು ತಿಳಿಸಿದರು.
ಸುಹಾಸ್ ಯತಿರಾಜ್ ಅವರು ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಜನರು ಅಭಿನಂದನೆ ಸಲ್ಲಿಸಿದರು. ಈ ಸಾಧನೆಗೈದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸುಹಾಸ್ ಯತಿರಾಜ್ ಅವರು ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಶಿವಮೊಗ್ಗದ ವಿನೋಬನಗರದ ಮೊದಲ ಹಂತದ ಐದನೇ ತಿರುವಿನಲ್ಲಿ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ಸುಹಾಸ್ ಪರವಾಗಿ ಘೋಷಣೆಗಳನ್ನು ಕೂಗಿ, ಸಿಹಿ ಹಂಚಿ ಖುಷಿ ಪಟ್ಟರು. ಇದೇ ರಸ್ತೆಯಲ್ಲಿ ಸುಹಾಸ್ ಆಡಿ ಬೆಳೆದಿದ್ದರು.

ಬಹು ವರ್ಷ ನೆಲಸಿದ್ದರು; ಸುಹಾಸ್ ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ಆದರೆ ಸುಹಾಸ್ ಅವರ ತಂದೆ ಯತಿರಾಜ್ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯದಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಹಾಗಾಗಿ ಸುಹಾಸ್ ಅವರು ಶಾಲೆ ಮತ್ತು ಡಿವಿಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು.
ಬಳಿಕ ಸೂರತ್ಕಲ್ನಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದರು. ವಿನೋಬನಗರದಲ್ಲೇ ಸುಹಾಸ್ ಅವರ ಮನೆ ಇದೆ. ಆದ್ದರಿಂದ ಇಂದು ಅಕ್ಕಪಕ್ಕದ ಮನೆಯ ನಿವಾಸಿಗಳು ಸಂಭ್ರಮಪಟ್ಟರು.
ಶಿವಮೊಗ್ಗಕ್ಕೆ ಆಗಾಗ ಬರುತ್ತಿದ್ದರು; ಸುಹಾಸ್ ಯತಿರಾಜ್ ಉತ್ತರ ಪ್ರದೇಶ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ. ನೋಯ್ಡಾದ ಜಿಲ್ಲಾಧಿಕಾರಿಯಾಗಿದ್ದಾರೆ. ಆಗಾಗ ಶಿವಮೊಗ್ಗಕ್ಕೆ ಬರುವ ಸುಹಾಸ್ ಯತಿರಾಜ್, ತಮ್ಮನ್ನು ಎತ್ತಿ ಬೆಳೆಸಿದವರು, ಆಡಿ ಬೆಳೆದವರನ್ನು ಭೇಟಿಯಾಗಿ ಮಾತನಾಡಿಸುತ್ತಾರೆ. ಸುಹಾಸ್ ಅವರ ತಾಯಿ ಶಿವಮೊಗ್ಗದಲ್ಲೇ ನೆಲೆಸಿದ್ದರು. ಈಗ ಅವರು ಬೆಂಗಳೂರನಲ್ಲಿ ನೆಲೆಸಿದ್ದಾರೆ.

ಫೋನ್ ಮೂಲಕ ಶುಭಾಶಯ; ವಿನೋಬನಗರದ ನಿವಾಸಿಗಳು ಸುಹಾಸ್ ಪಂದ್ಯಾವಳಿಯನ್ನು ವೀಕ್ಷಿಸಿದಾರೆ. ಫೈನಲ್ ತಲುಪಿದಾಗ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದರು. ಚಿನ್ನದ ಪದಕ ಗೆದ್ದು ಬರುವಂತೆ ಹಾರೈಸಿದ್ದರು. ಬೆಳ್ಳಿ ಪದಕ ಗೆದ್ದ ಬಳಿಕವು ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಎಸ್ ಎಲ್ 4 ಫೈನಲ್ನಲ್ಲಿ ಫ್ರಾನ್ಸ್ನ ಲುಕಾಸ್ ಮಝೂರ್ ವಿರುದ್ಧ ಸುಹಾಸ್ ಯತಿರಾಜ್ ಸೋಲು ಕಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಸುಹಾಸ್ ಭಾರತಕ್ಕೆ 18ನೇ ಪದಕ ತಂದುಕೊಟ್ಟರು.
ಪ್ಯಾರಾ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಕೀರ್ತಿಯೂ ಸುಹಾಸ್ ಎಲ್. ಯತಿರಾಜ್ ಪಾಲಾಗಿದೆ. ಸುಹಾಸ್ ಬೆಳ್ಳಿ ಪದಕ ಗೆದ್ದು ಶಿವಮೊಗ್ಗ ಜಿಲ್ಲೆಯ ಜನರಲ್ಲೂ ಹೆಮ್ಮೆಯ ಭಾವ ಮೂಡಿಸಿದ್ದಾರೆ.












Click it and Unblock the Notifications