ಶಿವಮೊಗ್ಗ : ಸುತ್ತಾ ಸೇತುವೆ ನಿರ್ಮಾಣಕ್ಕೆ ಕೂಡಿ ಬರದ ಕಾಲ!
ಶಿವಮೊಗ್ಗ, ಸೆಪ್ಟೆಂಬರ್ 05 : ಕರ್ನಾಟಕದ ವಿದ್ಯುತ್ ಉತ್ಪಾದನೆಗೆ ಪ್ರಮುಖ ಮೂಲವಾಗಿರುವುದು ಲಿಂಗನಮಕ್ಕಿ ಜಲಾಶಯ. ಸಾಗರ ತಾಲೂಕಿನಲ್ಲಿ ಈ ಜಲಾಶಯ ತುಂಬಿದರೆ ಸಂತಸ ಪಡುವವರು ಹೆಚ್ಚು. ಆದರೆ, ಹೊಸನಗರದ ಜನರು ಸಂಕಷ್ಟ ಎದುರಿಸುತ್ತಾರೆ.
1819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. 11 ಗೇಟ್ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯ ಭರ್ತಿಯಾದರೆ ಶರಾವತಿ ನದಿಯ ಹಿನ್ನೀರಿನಿಂದ ಹೊಸನಗರ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ.
ಹೊಸನಗರ ತಾಲೂಕಿನ ಸುತ್ತಾ ಸೇತುವೆ ಮೇಲೆ ನೀರು ಬರುತ್ತದೆ. ಈಗ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಸೇತುವೆ ಮೇಲೆ 2 ಅಡಿ ನೀರು ನಿಂತಿದ್ದು, ಸುಮಾರು 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಸೇತುವೆ ಸಹ ಶಿಥಿಲಗೊಂಡಿದ್ದು ಜನರ ಆತಂಕಕ್ಕೆಕಾರಣವಾಗಿದೆ.

ಸುತ್ತಾ ಸೇತುವೆ ಸುತ್ತಾ, ಮಳಲಿ, ಬಾಳೆಕೊಪ್ಪ, ಮಣಸಟ್ಟೆ, ಏರಗಿ, ಟೆಂಕಬೈಲು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ಸುಮಾರು 2 ಸಾವಿರ ಕುಟುಂಬಗಳು ಈ ಗ್ರಾಮಗಳ ವ್ಯಾಪ್ತಿಯಲ್ಲಿ ವಾಸವಾಗಿವೆ.
ಶಿಥಿಲಾವಸ್ಥೆ ತಲುಪಿದ್ದ ಸೇತುವೆ ಮೇಲೆ ಮರಳು, ಕಲ್ಲು ತುಂಬಿದ ಲಾರಿಗಳ ಸಂಚಾರದಿಂದಾಗಿ ಸೇತುವೆಗೆ ಮತ್ತಷ್ಟು ಹಾನಿಯಾಗಿದೆ. ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಕೂಗಿಗೆ ಇನ್ನೂ ಬೆಲೆ ಸಿಕ್ಕಿಲ್ಲ.

ಸಾಗರ ಕ್ಷೇತ್ರದ ಶಾಸಕರಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಕರ್ನಾಟಕ ರಸ್ತೆ, ಸೇತುವೆ ಅಭಿವೃದ್ಧಿ ನಿಗಮದ ವತಿಯಿಂದ ಸೇತುವೆ ನಿರ್ಮಾಣಕ್ಕಾಗಿ 3 ಕೋಟಿ ರೂ. ಅನುದಾನ ನೀಡಿದ್ದರು. ಆದರೆ, ಮೂರು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ.
ಗುರುವಾರ ಕಾಗೋಡು ತಿಮ್ಮಪ್ಪ ಸುತ್ತಾ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿದರು. ಕಾಮಗಾರಿ ಆರಂಭವಾಗದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಿಂದಲೇ ಅಧಿಕಾರಿಗಳಿಗೆ ಕರೆ ಮಾಡಿದ ಅವರು, ಕಾಮಗಾರಿಗೆ ಕೂಡಲೇ ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.












Click it and Unblock the Notifications